ಬಿಸಿದ ಭಾರಿ ಬಿರುಗಾಳಿಗೆ ಗಿಡ, ಮರಗಳು ಧರೆಗೆ ಉರುಳಿ ಬಿದ್ದಿದ್ದು, ಈ ಸಂದರ್ಭದಲ್ಲಿ ಮರದ ನೆರಳಿನಲ್ಲಿ ನಿಲ್ಲಿಸಲಾದ ಕಾರು ಮತ್ತು ಬೈಕ್ ಜಖಂಗೊಂಡಿದೆ.
ಕುಷ್ಟಗಿ: ಪಟ್ಟಣ ಸೇರಿದಂತೆ ತಾಲೂಕಿನ ದೋಟಿಹಾಳ, ಕೇಸೂರು ವಿವಿಧ ಗ್ರಾಮಗಳಲ್ಲಿ ಭಾನುವಾರ ಸಂಜೆ ಸುರಿದ ಗಾಳಿ-ಮಳೆಯ ಅಬ್ಬರದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.
ಭಾನುವಾರ ಸಂಜೆ ಏಕಾಏಕಿ ಗುಡುಗು, ಸಿಡಿಲು ಹಾಗೂ ಭಾರಿ ಗಾಳಿ ಸಮೇತ ಸುರಿದ ಮಳೆಗೆ ಪಟ್ಟಣದಲ್ಲಿ ನಡೆಯುತ್ತಿರುವ ವಾರದ ಕಾಯಿಪಲ್ಯೆ ಸಂತೆಯೂ ಅಸ್ತವ್ಯಸ್ತಗೊಂಡಿತು. ದೋಟಿಹಾಳ, ಕೇಸೂರು ಹಾಗೂ ವಿವಿಧ ಗ್ರಾಮಗಳಲ್ಲಿ ಮರಗಳು ಬಿದ್ದಿವೆ, ಮನೆಯ ಚಾವಣಿ ಮೇಲಿರುವ ತಗಡು ಕಿತ್ತಿಕೊಂಡು ಹೋಗುವ ಮೂಲಕ ಜನಜೀವನಕ್ಕೆ ಅಸ್ತವ್ಯಸ್ತ ಉಂಟಾಯಿತು.ಧರೆಗುರುಳಿದ ಮರಗಳು:
ಪಟ್ಟಣದಲ್ಲಿ ಬಿಸಿದ ಭಾರಿ ಬಿರುಗಾಳಿಗೆ ಗಿಡ, ಮರಗಳು ಧರೆಗೆ ಉರುಳಿ ಬಿದ್ದಿದ್ದು, ಈ ಸಂದರ್ಭದಲ್ಲಿ ಮರದ ನೆರಳಿನಲ್ಲಿ ನಿಲ್ಲಿಸಲಾದ ಕಾರು ಮತ್ತು ಬೈಕ್ ಜಖಂಗೊಂಡಿದೆ. ಇನ್ನೂ ಹಲವೆಡೆ ಮರ, ವಿದ್ಯುತ್ ಕಂಬದ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಯಿತು.ಬಲವಾಗಿ ಬೀಸಿದ ಬಿರುಗಾಳಿಗೆ ತಾಲೂಕಿನ ಕೇಸೂರು ಗ್ರಾಮದ ಸಂಗಮ್ಮ ಅಡವಿಭಾವಿ ಎನ್ನುವವರ ಮನೆಯ ಮೇಲೆ ಹಾಕಲಾಗಿರುವ ತಗಡಿನ ಶಿಟ್ಗಳು ಕಿತ್ತಿಹೋಗಿದ್ದು, ಮಳೆ ನೀರೆಲ್ಲ ಮನೆಯೊಳಗಡೆ ಸೇರಿಕೊಂಡು ಕೆಲವು ಸಾಮಗ್ರಿ ನೀರು ಪಾಲಾಗಿವೆ.
ಕೆಲವು ಪ್ರದೇಶಗಳಲ್ಲಿ ರಸ್ತೆ ಮೇಲೆ ಚರಂಡಿ ನೀರು ಹರಿದು ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ನಗರದ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಮತ್ತು ಚರಂಡಿ ನೀರು ಒಂದಾಗಿ ಹರಿದ ಪರಿಣಾಮ ಜನರು ಸಂಚಾರದಲ್ಲಿ ಪರದಾಡಿದರು. ವಿದ್ಯುತ್ ಕಂಬಗಳಿಗೆ ಹಾನಿಯಾದ ಹಿನ್ನೆಲೆ ಹಲವು ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತು.ಬಾಕ್ಸ್ ಐಟಂ
ರೈತನ ಮುಖದಲ್ಲಿ ಮಂದಹಾಸಈಗಾಗಲೇ ಮುಂಗಾರು ಹಂಗಾಮು ಪ್ರಾರಂಭವಾಗಿದ್ದು, ತಾಲೂಕಿನ ರೈತರು ಭೂಮಿಗಳನ್ನೆಲ್ಲ ಬಿತ್ತನೆ ಸಲುವಾಗಿ ಹದ ಮಾಡಿಕೊಂಡು ಬಿತ್ತನೆಗಾಗಿ ಮಳೆರಾಯನ ಕಾಯುತ್ತಾ ಕುಳಿತಿದ್ದರೂ ಭಾನುವಾರ ಸುರಿದ ಮಳೆಯು ರೈತನ ಮುಖದಲ್ಲಿ ಮಂದಹಾಸ ಸೃಷ್ಟಿಯಾಗಿದೆ.
ತಾಲೂಕಿನ ಕಡೆಕೊಪ್ಪ ಗ್ರಾಮದಲ್ಲಿ ಸುರಿದ ಬಿರುಗಾಳಿ ಸಮೇತ ಮಳೆಗೆ ಶರಣಪ್ಪ ತೆಗ್ಗಿನಮನಿ ತೋಟದಲ್ಲಿನ ದಾಳಿಂಬೆ ಬೆಳೆ ಹಾಳಾಗಿದ್ದು, ಸೂಕ್ತ ಪರಿಹಾರ ಒದಗಿಸುವಂತೆ ಉಮೇಶ ಯಾದವ ಅಗ್ರಹಿಸಿದ್ದಾರೆ.ಮಳೆ ಬಂದಾಗಲೇ ಚರಂಡಿ ವ್ಯವಸ್ಥೆಯ ದುರ್ಬಲತೆ ಬಯಲಾಗುತ್ತಿದೆ. ರಸ್ತೆಗಳಲ್ಲಿ ನೀರು ನಿಂತು ಸಾರ್ವಜನಿಕರಿಗೆ ಸಂಕಷ್ಟ ಉಂಟಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯುತ್ ವ್ಯತ್ಯಯ:ದೋಟಿಹಾಳ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಉಂಟಾದ ಮಳೆ ಗಾಳಿಗೆ ವಿದ್ಯುತ್ ಕಂಬಗಳ ಮೇಲೆ ಮರಗಳು ಬಿದ್ದ ಪರಿಣಾಮ ನಾಲ್ಕು ತಾಸುಗಳ ಅಧಿಕ ಕಾಲ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತ್ತು.