ಕೊಪ್ಪಳ: ಕೊಪ್ಪಳ ಜಿಲ್ಲಾಸ್ಪತ್ರೆ ಅವ್ಯವಸ್ಥೆಯಿಂದ ಕೂಡಿದ್ದು, ಇಲ್ಲಿ ರೋಗಿಗಳು ಸಂಬಂಧಿಕರು ಯಾರು ಎಂಬುದೇ ಗೊತ್ತಾಗುತ್ತಿಲ್ಲ. ಇದು ಸಂತೆ ಮಾರುಕಟ್ಟೆಯಂತಾಗಿದೆ. ಆರೋಗ್ಯ ಸಚಿವರು ಭೇಟಿ ನೀಡಿ ಪರಿಶೀಲಿಸಬೇಕು ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದರು.
ನಗರದ ಜಿಲ್ಲಾಸ್ಪತ್ರೆಯಲ್ಲಿ ತಾಲೂಕಿನ ಮುನಿರಾಬಾದ್ ಬಳಿಯ ರಾಷ್ಟ್ರೀಯ ಹೆದ್ದಾರಿಯ ಸೇತುವೆ ಮೇಲಿಂದ ಟ್ರ್ಯಾಕ್ಟರ್ ಕೆಳಗೆ ಬಿದ್ದ ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿದ ಅವರು, ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಸರಿಯಾದ ವ್ಯವಸ್ಥೆ ಕಾಣುತ್ತಿಲ್ಲ. ಅಂಜಲಿ ಎಂಬ ಗಾಯಾಳು ಮಗು ನಮ್ಮನ್ನು ಬೇರೆ ಕಡೆ ಚಿಕಿತ್ಸೆಗೆ ದಾಖಲಿಸಿ ಎನ್ನುತ್ತಿದೆ. ಇಲ್ಲಿ ಇನ್ನೂ ಕೆಲವರಿಗೆ ಆಪರೇಷನ್ ಸಹ ಮಾಡಿಲ್ಲ. ಸರಿಯಾದ ಚಿಕಿತ್ಸೆ ಆಗಬೇಕು ಎಂದು ಒತ್ತಾಯಿಸಿದ್ದಾರೆ. ಮೃತರ ಕುಟುಂಬಕ್ಕೆ ₹10 ಲಕ್ಷ ನೀಡಬೇಕು. ಅಲ್ಲದೆ ಗಾಯಾಳುಗಳ ಕುಟುಂಬಕ್ಕೆ ಸಹ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಇಂತಹ ದುರ್ಘಟನೆ ಮತ್ತೆ ಮರುಕಳಿಸದಿರಲಿ ಎಂದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ನವೀನಕುಮಾರ ಗುಳಗಣ್ಣವರ, ಡಾ. ಕೆ. ಬಸವರಾಜ್, ವೀರೇಶ್ ಸಜ್ಜನ್, ಮುರಳಿ, ಸುನೀಲ್ ಹೆಸರೂರು, ಮಹೇಶ ಅಂಗಡಿ, ಚನ್ನಬಸವ ಗಾಳಿ, ದೇವರಾಜ್, ರಘು ಚಕ್ರವರ್ತಿ, ಪ್ರದೀಪ್ ಹಿಟ್ನಾಳ, ಬಾಬು ರಾವ್, ರಾಜು ವಸ್ತ್ರದ, ಶಂಕರ ನರೇಗಲ, ಪಂಪಯ್ಯ ಹಿರೇಮಠ, ನೀಲಕಂಠಯ್ಯ ಹಿರೇಮಠ, ಮಾರುತಿ ಅಲ್ಲಾನಗರ, ಸಿದ್ದು ಪಾಟೀಲ್, ರಮೇಶ್ ಕವಲೂರ ಇತರರಿದ್ದರು.