ಕನ್ನಡಪ್ರಭ ವಾರ್ತೆ ಭಟ್ಕಳ
ತಾಲೂಕಿನಾದ್ಯಂತ ಶನಿವಾರ ಹಾಗೂ ಭಾನುವಾರ ಸುರಿದ ಭಾರೀ ಮಳೆ ಹಾಗೂ ಬಿರುಗಾಳಿಯಿಂದ ಅನೇಕ ಸ್ಥಳಗಳಲ್ಲಿ ಹಾನಿಯಾಗಿದ್ದು ಮನೆ, ಕೊಟ್ಟಿಗೆ ಮತ್ತು ಇತರ ಕಟ್ಟಡಗಳು ಹಾನಿಯಾಗಿರುವ ಕುರಿತು ವರದಿಯಾಗಿದೆ.ಶಿರಾಲಿಯ ಲಕ್ಷ್ಮೀ ಅಣ್ಣಪ್ಪ ಚಿತ್ರಾಪುರ ಹಾಗೂ ವೆಂಕಟಾಪುರದ ಡಿಪಿ ಕಾಲನಿಯ ಗುರುದತ್ತ ಮಂಜುನಾಥ ಶೆಟ್ಟಿ ಅವರ ಮನೆಗಳ ಮೇಲೆ ಮರ ಉರುಳಿ ಬಿದ್ದ ಪರಿಣಾಮ ಮನೆಗೆ ಹಾನಿಯಾಗಿದೆ. ಬೇಂಗ್ರೆ-೧ರ ಉಳ್ಮಣ್ ಸುಶೀಲಾ ಗಣಪತಿ ದೇವಡಿಗ, ಮಾಲೆಕೊಡ್ಲುವಿನ ಸಣ್ಣು ಮಂಜು ಗೊಂಡ ಮತ್ತು ಉಳ್ಮಣ್ ಮಂಗಲಾ ರಾಮದಾಸ ಬಲ್ಸೆ ಅವರ ಮನೆಗಳ ಚಾವಣಿಗಳು ಬಿರುಗಾಳಿಗೆ ಹಾರಿ ಹೋಗಿ ಹಾನಿಗೊಳಗಾಗಿವೆ.ಮಾವಿನಕಟ್ಟೆಯ ಕನ್ನಯ್ಯ ಸಣ್ಕೂಸ ದೇವಡಿಗ ಅವರ ಮನೆಯ ಮೇಲೆ ಬೃಹತ್ ಮಾವಿನ ಮರ ಮುರಿದು ಬಿದ್ದ ಪರಿಣಾಮ ಚಾವಣಿ ಹಾಗೂ ಗೋಡೆಗೆ ಹಾನಿಯಾಗಿದೆ. ಮುಂಡಳ್ಳಿ ಮೊಗೇರಕೇರಿಯ ಸುಧಾಕರ್ ಬಾಬು ಕರ್ಣಿಕ ಅವರ ಮನೆಯ ಹಂಚುಗಳು ಹಾರಿಹೋಗಿದೆ. ಬೈಲೂರಿನ ಸಣ್ಣಬಲಸೆಯ ನಾಗಮ್ಮ ಗಣಪತಿ ದೇವಡಿಗ ಅವರ ಮನೆಯ ಮೇಲ್ಛಾವಣಿ ಹಾರಿ ಹೋಗಿದೆ. ಬೆಳ್ಕೆಯ ಪಿನ್ನಪಾಲ್ನ ಪರಮೇಶ್ವರ ಜಟ್ಟಪ್ಪ ನಾಯ್ಕ ಹಾಗೂ ಯಲ್ವಡಿಕವೂರಿನ ಮಾದೇವ ಮಾಸ್ತಿ ಗೊಂಡ ಅವರ ದನದ ಕೊಟ್ಟಿಗೆಗಳ ಮೇಲೆ ಮರ ಬಿದ್ದು ಹಾನಿಯಾಗಿದೆ. ಶಿರಾಲಿ-೧ರ ಮಾಸ್ತಿಕಟ್ಟೆಯ ನಾರಾಯಣ ನಾಗಯ್ಯ ನಾಯ್ಕ ಅವರ ವೆಲ್ಡಿಂಗ್ ಶಾಪ್ ಮೇಲೆ ಮಾವು ಹಾಗೂ ಸಾಗುವಾನಿ ಮರ ಮುರಿದು ಬಿದ್ದ ಪರಿಣಾಮ ಅಂಗಡಿ ಹಾಗೂ ಎದುರುಗಡೆ ಇದ್ದ ದ್ವಿಚಕ್ರ ವಾಹನಕ್ಕೆ ಹಾನಿಯಾಗಿದೆ. ಘಟನೆ ನಡೆದ ಸ್ಥಳಗಳಿಗೆ ಕಂದಾಯ ಇಲಾಖೆ ಹಾಗೂ ಸಂಬಂಧಿತ ಗ್ರಾಪಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಾನಿಯ ಮೌಲ್ಯಮಾಪನ ಕಾರ್ಯ ಕೈಗೊಂಡಿದ್ದಾರೆ.ಸಣ್ಣಬಲ್ಸೆ ಬೈಲೂರಿನ ನಾಗಮ್ಮ ಕೋಂ ಗಣಪತಿ ದೇವಡಿಗ ಎನ್ನುವವರ ಮನೆಯ ಮೇಲ್ಚಾವಣಿ ಭಾರೀ ಬಿರುಗಾಳಿಗೆ ಸಂಪೂರ್ಣ ಹಾರಿಹೋಗಿದ್ದು ಮನೆಯಲ್ಲಿ ಉಳಿಯುವುದಕ್ಕೂ ಸಾಧ್ಯವಾಗ ಸ್ಥಿತಿ ನಿರ್ಮಾಣವಾಗಿದೆ. ಮನೆಯಲ್ಲಿರುವ ಬಟ್ಟೆ, ಸಾಮಾನು, ಸರಂಜಾಮು ಎಲ್ಲವೂ ನೀರಿನಿಂದ ತೊಯ್ದು ಹೋಗಿದ್ದು ಅಪಾರ ನಷ್ಟ ಸಂಭವಿಸಿದೆ. ತೀರಾ ಬಡಕುಟುಂಬದವರಾದ ನಾಗಮ್ಮ ಅವರು ಪ್ರಸ್ತುತ ಬೇರೆಯವರ ಮನೆಯಲ್ಲಿ ಆಶ್ರಯ ಪಡೆಯಬೇಕಾದ ಪರಿಸ್ಥಿತಿ ಉಂಟಾಗಿದೆ.