ಸಾರಾಂಶ
ಹಾವೇರಿ: ಮಾನವೀಯ ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸುತ್ತಾ ಸಾಮಾಜಿಕ ಕಳಕಳಿಯ ಕೆಲಸ ಮಾಡುವ ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಸೇವೆ ಶ್ಲಾಘನೀಯ ಎಂದು ಬಳ್ಳಾರಿ ರುದ್ರಪ್ಪ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ, ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.
ಜಿಲ್ಲೆಯ ಮೋಟೆಬೆನ್ನೂರಿನಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ, ಭಾರತೀಯ ರೆಡ್ಕ್ರಾಸ್ ಸಂಸ್ಥೆ ಹಾವೇರಿ ಜಿಲ್ಲಾ ಶಾಖೆ, ಭಾರತೀಯ ರೆಡ್ಕ್ರಾಸ್ ಸಂಸ್ಥೆ ಕರ್ನಾಟಕ ರಾಜ್ಯ ಶಾಖೆ ಬೆಂಗಳೂರು, ಬಳ್ಳಾರಿ ರುದ್ರಪ್ಪ ಶಿಕ್ಷಣ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ (ಬಿಇಡಿ) ಆಶ್ರಯದಲ್ಲಿ ಆಯೋಜಿಸಿದ ಪ್ರಥಮ ಚಿಕಿತ್ಸೆ ಮತ್ತು ವಿಪತ್ತು ನಿರ್ವಹಣಾ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.ಎಲ್ಲ ದಾನಗಳಲ್ಲಿ ರಕ್ತದಾನ ಶ್ರೇಷ್ಠವಾಗಿದೆ. ಭಾರತೀಯ ರೆಡ್ಕ್ರಾಸ್ ಸಂಸ್ಥೆ ಆರಂಭದಲ್ಲಿ ಯುದ್ಧದಲ್ಲಿ ಗಾಯಾಳು ಯೋಧರ ಆರೈಕೆ-ಸೇವೆ ಗುರಿಯೊಂದಿಗೆ ಕೆಲಸ ಮಾಡಿತು. ಈಗಲೂ ರಕ್ತದಾನ ಹಾಗೂ ಉತ್ತಮ ಕೆಲಸ ಮಾಡುವ ಉತ್ತಮ ಸಮಾಜ ಸೇವಾ ಸಂಸ್ಥೆಯಾಗಿದೆ. ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಕಲಿತು ನೀವು ಸಮಾಜ ಸೇವೆ ಮನೋಭಾವನೆ ಬೆಳೆಸಿಕೊಳ್ಳಬೇಕು. ಉತ್ತಮ ಗುಣಾತ್ಮಕ ಶಿಕ್ಷಣ ಹಾಗೂ ಸಮಾಜ ಸೇವೆ ಮಾಡುವ ಗುಣ ಬೆಳೆಸುವ ನಿಟ್ಟಿನಲ್ಲಿ ಬಳ್ಳಾರಿ ರುದ್ರಪ್ಪ ಸಂಸ್ಥೆ ಮುಂದುವರಿಯುತ್ತಿದೆ. ಈ ತರಬೇತಿ ಪಡೆದು ತಾವು ಉತ್ತಮ ಸೇವೆ-ಪರೋಪಕಾರ ಗುಣ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ತರಬೇತಿ-ಕಾರ್ಯಾಗಾರವನ್ನು ಉದ್ಘಾಟಿಸಿದ ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ಮತ್ತೊಬ್ಬರಿಗೆ ರಕ್ತದಾನ ಮಾಡುವ ಮೂಲಕ ಪರೋಪಕಾರ ಮಾಡುವ ಕೆಲಸ ಶ್ರೇಷ್ಠವಾಗಿದ್ದು, ನಮ್ಮಿಂದ ಬೇರೆಯವರಿಗೆ ಉಪಯೋಗವಾಗಬೇಕು. ರೆಡ್ಕ್ರಾಸ್ ಸಂಸ್ಥೆಯ ಸಂಕಷ್ಟದ ಸನ್ನಿವೇಶದಲ್ಲಿ ಉತ್ತಮ ಸಮಾಜ ಸೇವೆ ಮಾಡುವ ಕೆಲಸ ಮಾಡುತ್ತಿದೆ. ಈ ತರಬೇತಿ ಕಾರ್ಯಾಗಾರ ಸಹಕಾರ ನೀಡಿದ ಬಳ್ಳಾರಿ ರುದ್ರಪ್ಪ ಸಂಸ್ಥೆಯ ಪದಾಧಿಕಾರಿಗಳಿಗೆ ಹಾಗೂ ಕಾಲೇಜಿನ ಕಾರ್ಯವೃಂದದವರಿಗೆ ಅಭಿನಂದನೆಗಳು. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಸದಸ್ಯತ್ವ ಪಡೆದು ಸಾಮಾಜಿಕ ಸೇವೆ ಮಾಡಲು ಸಂಸ್ಥೆಯೊಂದಿಗೆ ಕೈಜೋಡಿ ಎಂದರು.ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಎಂ. ಸುರೇಶ ಪ್ರಾಸ್ತಾವಿಕ ಮಾತನಾಡಿ, ರೆಡ್ಕ್ರಾಸ್ ಸಂಸ್ಥೆ ಉಪಯುಕ್ತ ಕೆಲಸ ಮಾಡುತ್ತಿದ್ದು, ಈ ತರಬೇತಿ ಕಾರ್ಯಾಗಾರದ ಸದುಪಯೋಗವನ್ನು ಪ್ರಶಿಕ್ಷಣಾರ್ಥಿಗಳು ಪಡೆದುಕೊಳ್ಳಬೇಕು. ಮುಂದಿನ ತಮ್ಮ ಉತ್ತಮ ಕೆಲಸಗಳಿಗೆ ನಮ್ಮೆಲ್ಲರ ಸಹಕಾರ ಸದಾ ಇರಲಿದೆ ಎಂದರು.
ಡಾ. ನೀಲೇಶ ಎಂ.ಎನ್., ಡಾ. ಅಂಕಿತ ಆನಂದ ಹಾಗೂ ಇರ್ಶಾದಅಲಿ ದುಂಡಸಿ ಅವರು ಮೌಖಿಕವಾಗಿ-ಪ್ರಾಯೋಗಿಕ ಪ್ರಥಮ ಚಿಕಿತ್ಸೆ ಮತ್ತು ವಿಪತ್ತು ನಿರ್ವಹಣಾ ತರಬೇತಿ ನೀಡಿದರು.ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆಯ ಸದಸ್ಯ ಷಣ್ಮುಖಪ್ಪ ಬಳ್ಳಾರಿ, ಜಿಲ್ಲಾ ಖಜಾಂಜಿ ಪ್ರಭು ಹಿತ್ನಳ್ಳಿ, ಗೌರವ ಸಹಕಾರ್ಯದರ್ಶಿ ನಿಂಗಪ್ಪ ಆರೇರ, ಪ್ರಾಧ್ಯಾಪಕರಾದ ಗಂಗಾಧರ ಹಿರೇಮಠ, ರಾಜಕುಮಾರ ತಳವಾರ, ನಂದಾ ಪೂಜಾರ, ಫಕ್ಕೀರೇಶ ಬಾರ್ಕಿ ಹಾಗೂ ಜಿಲ್ಲಾ ಸಮಿತಿ ಪದಾಧಿಕಾರಿಗಳು, ಕಾಲೇಜಿನ ಸಿಬ್ಬಂದಿ ಹಾಗೂ ಪ್ರಶಿಕ್ಷಣಾರ್ಥಿಗಳು ಇದ್ದರು.