ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಭೂಮಿಯ ಮೇಲೆ ಕೇವಲ ಮನುಷ್ಯರಷ್ಟೇ ಅಲ್ಲದೆ, ಪ್ರತಿಯೊಂದು ಜೀವಿಯೂ ಬದುಕಬೇಕಾದರೆ ಸಮಗ್ರ ಪರಿಸರದ ಅಗ್ಯವಿದೆ. ಕೇವಲ ಗಾಳಿ ಮಾತ್ರವಲ್ಲದೆ ನೀರು, ಮಣ್ಣು ಹಾಗೂ ಅವುಗಳಿಂದ ಉಂಟಾಗುವ ಪ್ರಕೃತಿಯ ಸಮತೋಲನ ಮತ್ತು ಸಂಬಂಧಗಳು ಅತ್ಯಂತ ಮುಖ್ಯವಾಗಿವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಡಿ.ಜೆ.ಸುದೀನ್ ಕುಮಾರ್ ಅಭಿಪ್ರಾಯಪಟ್ಟರು.

ನಗರದ ಕ್ರೀಡಾ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ ಹಾಗೂ ಕಲಾ ಚೈತನ್ಯ ಸೇವಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ-2026ರ ಅಂಗವಾಗಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿ ಅವರು ಮಾತನಾಡಿದರು.

ವಿಶ್ವ ಪರಿಸರ ದಿನಾಚರಣೆ ಕೇವಲ ಒಂದು ದಿನದ ಆಚರಣೆಗೆ ಮಾತ್ರ ಸೀಮಿತವಾಗಬಾರದು. ನಾವು ಬದುಕಿರುವವರೆಗೆ ಉಸಿರಾಡುವ ಕೊನೆಯ ಕ್ಷಣದವರೆಗೂ ಪರಿಸರ ಸಂರಕ್ಷಣೆಯ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಬೇಕು ಎಂದು ಹೇಳಿದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.


8ನೇ ತರಗತಿ ವಿಭಾಗದಲ್ಲಿ ಡಾನ್ ಬಾಸ್ಕೋ ಶಾಲೆಯ ಆರ್.ಪ್ರಭಾಸ್ (ಪ್ರಥಮ ಸ್ಥಾನ), ಸೇಂಟ್ ಜೋಸೆಫ್ ಶಾಲೆಯ ಆರ್.ಅಮೃತಾ (ದ್ವಿತೀಯ) ಹಾಗೂ ವಿದ್ಯಾವಿಕಾಸ ಶಾಲೆಯ ಎಚ್.ಪ್ರೀತಿ (ತೃತೀಯ) ಸ್ಥಾನ ಪಡೆದಿದ್ದಾರೆ. ಬೃಹನ್ಮಠ ಶಾಲೆಯ ಎನ್.ಪೂಜಾ ಮತ್ತು ಬಾಪೂಜಿ ಪಬ್ಲಿಕ್ ಶಾಲೆಯ ಬಿ.ಜೆ.ಗುರುದತ್ ಸಮಾಧಾನಕರ ಬಹುಮಾನ ಪಡೆದರು.

9ನೇ ತರಗತಿ ವಿಭಾಗದಲ್ಲಿ ಪಾರ್ಶವಾಥ ವಿದ್ಯಾಸಂಸ್ಥೆಯ ಎ.ಚಿತ್ರಾ (ಪ್ರಥಮ ಸ್ಥಾನ), ಕೆ.ಕೆ ನ್ಯಾಷನಲ್ ಶಾಲೆಯ ಎ.ಆರ್.ಹರ್ಷಿತಾ (ದ್ವಿತೀಯ) ಹಾಗೂ ವಾಸವಿ ವಿದ್ಯಾಸಂಸ್ಥೆಯ ಎಸ್.ವಿನೀತೇಂದ್ರ (ತೃತೀಯ) ಸ್ಥಾನ ಗಳಿಸಿದ್ದಾರೆ. ಎಸ್‌ಜೆಎಂ ಸಿಬಿಎಸ್‍ಇ ವಸತಿ ಶಾಲೆಯ ಬಿ.ವಿದ್ಯಾ ಮತ್ತು ಡಾನ್ ಬಾಸ್ಕೋ ಸಿಬಿಎಸ್‍ಇ ಶಾಲೆಯ ಆರ್.ದಿಯಾ ಸಮಾಧಾನಕರ ಬಹುಮಾನಕ್ಕೆ ಭಾಜನರಾಗಿದ್ದಾರೆ.

10ನೇ ತರಗತಿ ವಿಭಾಗದಲ್ಲಿ ಜ್ಞಾನ ಭಾರತಿ ವಿದ್ಯಾ ಮಂದಿರದ ಮಾನ್ವಿ ಎ.ಪಾಟೀಲ್ (ಪ್ರಥಮ) ಎಸ್‌ಜೆಎಂ ಸಿಬಿಎಸ್‍ಇ ವಸತಿ ಶಾಲೆಯ ಎಸ್.ಸ್ಪೂರ್ತಿ (ದ್ವಿತೀಯ) ಹಾಗೂ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸಿ.ಚಿರಂಜೀವಿ (ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ. ಶರಣಬಸವೇಶ್ವರ ಶಾಲೆಯ ಶಕೀರ ಬೇಗಂ ಮತ್ತು ಇಂಡಿಯನ್ ಇಂಟರ್ ನ್ಯಾಷನಲ್ ಶಾಲೆಯ ಕೆ.ಎಲ್.ವರ್ಷಿಣಿ ಸಮಾಧಾನಕರ ಬಹುಮಾನ ಪಡೆದಿದ್ದಾರೆ.

ಚಿತ್ರದುರ್ಗ ನಗರ ವ್ಯಾಪ್ತಿಯ 24 ಶಾಲೆಗಳಿಂದ 200ಕ್ಕೂ ಹೆಚ್ಚು ಪ್ರೌಢಶಾಲಾ ವಿದ್ಯಾರ್ಥಿಗಳು ಚಿತ್ರಕಲೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಉಪ ವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್, ನಗರಸಭೆ ಪೌರಾಯುಕ್ತೆ ಎಸ್.ಲಕ್ಷ್ಮೀ, ಶಾಲಾ ಶಿಕ್ಷಣ ಇಲಾಖೆಯ ಡಿವೈಪಿಸಿ ಹನುಮಂತಪ್ಪ, ವಿಷಯ ಪರಿವೀಕ್ಷಕ ಪ್ರಶಾಂತ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಚಿತ್ರದುರ್ಗ ಪ್ರಾದೇಶಿಕ ಕಚೇರಿ ಪರಿಸರ ಅಧಿಕಾರಿ ಹೆಚ್.ವಿ.ಪಲ್ಲವಿ, ಉಪ ಪರಿಸರ ಅಧಿಕಾರಿ ಪಿ.ರಾಜೇಶ್, ಕಲಾ ಚೈತನ್ಯ ಸೇವಾ ಸಂಸ್ಥೆ ಕಾರ್ಯದರ್ಶಿ ನಾಗರಾಜ್ ಬೇದ್ರೆ ಇದ್ದರು.