ಕನ್ನಡಪ್ರಭ ವಾರ್ತೆ ತಿಪಟೂರು

ತುಮಕೂರು ಜಿಲ್ಲೆಯ ಜನರ ಹಾಗೂ ರೈತರ ಹಿತವನ್ನು ಬಲಿಕೊಟ್ಟು ಮಾಗಡಿ ಮತ್ತು ರಾಮನಗರಕ್ಕೆ ಎಕ್ಸಪ್ರೆಸ್‌ ಕೆನಾಲ್ ಮೂಲಕ ನೀರನ್ನು ತೆಗೆದುಕೊಂಡು ಹೋಗಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಜನರ ಇಷ್ಟಕ್ಕೆ ವಿರುದ್ಧವಾಗಿ ನೀರನ್ನು ತೆಗೆದುಕೊಂಡು ಹೋಗಲು ಪ್ರಯತ್ನಪಟ್ಟರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ಎಚ್ಚರಿಸಿದರು.

ನಗರದ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಡಾ. ಜಿ.ಪರಮೇಶ್ವರ್ ಅವರು ಹಿಂದಿನ ಗೃಹ ಸಚಿವರಾಗಿದ್ದ ಸಮಯದಲ್ಲಿ ರೈತರ ಪರವಾದ ಹೇಳಿಕೆ ನೀಡಿ ನೀರನ್ನು ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಎಂದಿದ್ದರು. ಈಗ ಡಿಸಿಎಂ ಆದ ನಂತರ ಸಿಎಂ ಡಿ.ಕೆ.ಶಿವಕುಮಾರ್‌ ರವರ ಒತ್ತಡಕ್ಕೆ ಮಣಿದು ರೈತರ ಮನವೊಲಿಸಿ ಕೆನಾಲ್ ಕೆಲಸವನ್ನು ಪ್ರಾರಂಭಿಸುವುದಾಗಿ ಹೇಳಿಕೆ ನೀಡುತ್ತಿದ್ದಾರೆ. ಇದು ತುಮಕೂರು ಜಿಲ್ಲೆಯ ಜನತೆಗೆ ಮಾಡುತ್ತಿರುವ ಅನ್ಯಾಯ. ಅವರ ಈ ಹೇಳಿಕೆ ವಿರೋಧಿಸಿ ಜಿಲ್ಲೆಯ ರೈತರು ಹೋರಾಟಕ್ಕೆ ಸಿದ್ದರಾಗುತ್ತಿದ್ದಾರೆ ಎಂದರು. ಲಿಂಕ್ ಕೆನಾಲ್ ಕಾಮಗಾರಿಯನ್ನು ಸರ್ಕಾರ ಏನಾದರೂ ಪ್ರಾರಂಭಿಸಿದರೆ ಈ ಮೊದಲು ನಡೆಸಿದ ಹೋರಾಟಕ್ಕಿಂತ ದೊಡ್ಡ ಮಟ್ಟದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು. ಈ ಹೋರಾಟದಲ್ಲಿ ಈಗಾಗಲೇ ಗುಬ್ಬಿ, ತುರುವೇಕೆರೆ ಭಾಗದ ರೈತರು ಇದ್ದು, ಮುಂದಿನ ದಿನಗಳಲ್ಲಿ ತಿಪಟೂರು ತಾಲೂಕಿನ ರೈತರೂ, ಜನಸಾಮಾನ್ಯರೂ ಈ ಹೋರಾಟದಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲೆಯ ಎಲ್ಲ ಕಾಂಗ್ರೆಸ್ ಶಾಸಕರು ಕೂಡ ಒಟ್ಟಾಗಿ ಜಿಲ್ಲೆ ಜನರ ರೈತರ ಪರವಾಗಿ ನಿರ್ಣಯ ತೆಗೆದುಕೊಂಡು ಕೆನಾಲ್ ಕೆಲಸವನ್ನು ಸ್ಥಗಿತಗೊಳಿಸುವಂತೆ ಮುಖ್ಯಮಂತ್ರಿಗಳ ಮನವೊಲಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡ ಜಕ್ಕನಹಳ್ಳಿ ಲಿಂಗರಾಜು, ಜಿಲ್ಲಾ ಕಾರ್ಯದರ್ಶಿ ಶಿವಸ್ವಾಮಿ, ತಾಲೂಕು ಕಾರ್ಯದರ್ಶಿ ನಟರಾಜು ಗುರುಗದಹಳ್ಳಿ, ಯುವ ಜೆಡಿಎಸ್ ಅಧ್ಯಕ್ಷ ಸುದರ್ಶನ್, ಬಸವರಾಜು, ನಟರಾಜು ಇತರರು ಉಪಸ್ಥಿತರಿದ್ದರು.