ಕೊಪ್ಪಳ: ಭಾಗ್ಯನಗರ ಪಟ್ಟಣದ ರುದ್ರಭೂಮಿಯನ್ನು ಆಧುನಿಕ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಿ ಕೊಪ್ಪಳ ಜಿಲ್ಲೆಗೆ ಮಾದರಿಯನ್ನಾಗಿಸುವ ಉದ್ದೇಶದಿಂದ ವಿವಿಧ ಸಮಾಜ, ಉದ್ಯಮಿ ಹಾಗೂ ದಾನಿಗಳು ಕೈಜೋಡಿಸಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುರುವಾರ ಭೂಮಿಪೂಜೆ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಉದ್ಯಮಿ ಶ್ರೀನಿವಾಸ ಗುಪ್ತ, ಯಾವುದೇ ಜಾತಿ, ಪಕ್ಷ ಅಥವಾ ಭೇದಭಾವವಿಲ್ಲದೆ ಎಲ್ಲ ಸಮಾಜದವರು ಒಂದಾಗಿ ರುದ್ರಭೂಮಿ ಅಭಿವೃದ್ಧಿಗೆ ಮುಂದಾಗಿರುವುದು ಸಂತಸದ ಸಂಗತಿ. ಸಾರ್ವಜನಿಕ ಉಪಯೋಗದ ಈ ಕಾರ್ಯಕ್ಕೆ ಎಲ್ಲರ ಸಹಕಾರ ದೊರೆಯುತ್ತಿರುವುದು ಮಾದರಿಯಾಗಿದ್ದು, ಜಿಲ್ಲೆಯಲ್ಲೇ ಅತ್ಯುತ್ತಮ ರುದ್ರಭೂಮಿಯಾಗಿ ರೂಪಿಸುವ ಸಂಕಲ್ಪ ಹೊಂದಲಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ವಿವಿಧ ಸಮಾಜಗಳು ಹಾಗೂ ದಾನಿಗಳು ಅಭಿವೃದ್ಧಿ ಕಾಮಗಾರಿಗಳ ಜವಾಬ್ದಾರಿ ಸ್ವೀಕರಿಸಿದರು. ಕುರುಹಿನಶೆಟ್ಟಿ ಸಮಾಜದಿಂದ ಮುಖ್ಯದ್ವಾರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು. ಮೋಚಿ ಸಮಾಜದಿಂದ ಈಶ್ವರ ದೇವಸ್ಥಾನ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ದೇವಾಂಗ ಸಮಾಜದವರು ಉದ್ಯಾನವನದಲ್ಲಿ ಈಶ್ವರನ ಮೂರ್ತಿ ಪ್ರತಿಷ್ಠಾಪನೆಗೆ ಮುಂದಾದರು.
ಉದ್ಯಮಿ ಶ್ರೀನಿವಾಸ ಗುಪ್ತ ಬರ್ನಿಂಗ್ ಪಾಯಿಂಟ್ (ಅಂತ್ಯಸಂಸ್ಕಾರ ವೇದಿಕೆ) ಕಟ್ಟಡ ನಿರ್ಮಾಣದ ಹೊಣೆ ಹೊತ್ತಿದ್ದು, ಮುಕ್ತಿ ವಾಹನ ಸಹ ಒದಗಿಸುವುದಾಗಿ ಘೋಷಿಸಿದರು. ವಡ್ಡರ್ ಸಮಾಜದಿಂದ ಮೃತದೇಹ ಸಂರಕ್ಷಣೆಗಾಗಿ ಫ್ರೀಜರ್ ಬಾಕ್ಸ್ ನೀಡುವುದಾಗಿ ತಿಳಿಸಲಾಯಿತು. ಮತ್ತೋರ್ವ ಉದ್ಯಮಿ ಸುಭಯ ಸಲ್ಲ ವಿಚಾರಣಾ ಕೊಠಡಿ (ವೇಟಿಂಗ್ ರೂಮ್) ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು.ಈ ಸಂದರ್ಭದಲ್ಲಿ ರುದ್ರಭೂಮಿ ಅಭಿವೃದ್ಧಿ ಸಮಿತಿ ಹಾಗೂ ಪಪಂ ಅಧ್ಯಕ್ಷ ರಮೇಶ ಹ್ಯಾಟಿ, ಯಮನಪ್ಪ ಕಬ್ಬೇರ, ತುಕರಾಮಪ್ಪ ಗಡಾದ್, ವಸಂತ ಪವಾರ್, ದಾನಪ್ಪ ಕವಲೂರು, ಜವಾಹರ್ ಲಾಲಸಾ, ನೀಲಕಂಠಪ್ಪ ಮೈಲಿ, ಪಪಂ ಸದಸ್ಯರು ಹಾಗೂ ಮಹಿಳಾ ಸದಸ್ಯರು, ಮಂಜಪ್ಪ ದೊರಗದಕಟ್ಟಿ, ಸುರೇಶ್ ಪೆದ್ದಿಮರಿ, ಹನುಮಂತಪ್ಪ ಕವಲೂರು, ಲಕ್ಷ್ಮಣಸಾ ನಿರಂಜನ್, ಸುಭಾಷ್ ಅಂಟಾಳುಮರದ, ಶಂಕರ್ ನಿಂಗಲಬಂಡಿ, ಸುರೇಶ್ ಡೋಣಿ, ಶಂಕರ್ ಬೆನಳ್ಳಿ, ದೇವಣ್ಣ ಹಳ್ಳಿ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.