ಹಿರಿಯ ಕಾರ್ಮಿಕರನ್ನು ಗೌರವಿಸುವುದರಿಂದ ಅವರು ವಯಸ್ಸಿನ ಪರಿವೆಯಿಲ್ಲದೇ ಮಾಡುವ ಕಾಯಕದಲ್ಲಿ ಆತ್ಮವಿಶ್ವಾಸ, ಸ್ಥೈರ್ಯ ಹೆಚ್ಚಿಸಿದಂತಾಗುತ್ತದೆ. ಇಂತಹ ಸಂಸ್ಕಾರ, ಸಂಸ್ಕೃತಿ ಎಲ್ಲೆಡೆ ಪಸರಿಸಲಿ ಎಂದು ಜಿಪಂ ಮಾಜಿ ಸದಸ್ಯ ಶಿವಾನಂದ ಹೆಗಡೆ ಕಡತೋಕ ಹೇಳಿದರು.
ಕುಮಟಾ: ಹಿರಿಯ ಕಾರ್ಮಿಕರನ್ನು ಗೌರವಿಸುವುದರಿಂದ ಅವರು ವಯಸ್ಸಿನ ಪರಿವೆಯಿಲ್ಲದೇ ಮಾಡುವ ಕಾಯಕದಲ್ಲಿ ಆತ್ಮವಿಶ್ವಾಸ, ಸ್ಥೈರ್ಯ ಹೆಚ್ಚಿಸಿದಂತಾಗುತ್ತದೆ. ಇಂತಹ ಸಂಸ್ಕಾರ, ಸಂಸ್ಕೃತಿ ಎಲ್ಲೆಡೆ ಪಸರಿಸಲಿ ಎಂದು ಜಿಪಂ ಮಾಜಿ ಸದಸ್ಯ ಶಿವಾನಂದ ಹೆಗಡೆ ಕಡತೋಕ ಹೇಳಿದರು.
ದುಂಡಕುಳಿಯಲ್ಲಿ ದಿವಗಿಯ ಚೇತನಾ ಸೇವಾ ಸಂಸ್ಥೆ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮಹಿಳಾ ಸುದಿನ, ದಿ. ಕೃಷ್ಣಾ ಜೋಗಿ ಗೌಡರ ಸ್ಮರಣಾರ್ಥ ಸಾಂಸ್ಕೃತಿಕ ಸಂಜೆ ಹಾಗೂ ಕಾರ್ಮಿಕರಿಗೆ ಗೌರವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕಾರ್ಯಕ್ರಮ ಉದ್ಘಾಟಿಸಿದ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಷ್ಮಾ ರಾಜಗೋಪಾಲ ರೆಡ್ಡಿ, ಇಂತಹ ಅರ್ಥಪೂರ್ಣ ಕಾರ್ಯಕ್ರಮ ಆಯೋಜನೆ ಶ್ಲಾಘನೀಯ ಮತ್ತು ಊರಿನ ಘನತೆಯನ್ನು ಹೆಚ್ಚಿಸಿದಂತಾಗಿದೆ ಎಂದರು.
ಕರಾವಳಿ ಕನ್ನಡ ಸಂಘದ ಅಧ್ಯಕ್ಷ ಭಾಸ್ಕರ ಪಟಗಾರ ಮಾತನಾಡಿ, ಪ್ರತಿಯೊಂದು ಊರಿನಲ್ಲೂ ಚೇತನಾ ಸೇವಾ ಸಂಸ್ಥೆಯಂತಹ ಸಂಘಟನೆಗಳು ಹುಟ್ಟಿಕೊಂಡರೆ ಸಮಾಜವನ್ನು ಸುಂದರವಾಗಿ ಕಟ್ಟಲು ಸಾಧ್ಯ ಎಂದರು.ಜ್ಞಾನ ದೀವಿಗೆ ಸಂಚಾಲಕಿ ಎ.ಆರ್. ಭಾರತಿ ಮಾತನಾಡಿ, ಪಂಚ ವಿಕಾರಗಳಾದ ಕಾಮ, ಕ್ರೋಧ, ಲೋಭ, ಮೋಹ, ಅಹಂಕಾರಗಳೆಂಬ ಬೆಂಕಿ ಮನಸ್ಸಿನ ಸುಖ, ಶಾಂತಿಯನ್ನು ಸುಟ್ಟು ಹಾಕುತ್ತಿದೆ. ಇಂಥ ಮನಸ್ಸಿನ ಧಗೆಯನ್ನು ನಿವಾರಿಸಲು ಆಧ್ಯಾತ್ಮಿಕ ಶಿಕ್ಷಣ ಬೇಕು ಎಂದರು.ತದಡಿ ಮೀನುಗಾರಿಕಾ ಸಹಕಾರಿ ಸಂಘದ ಅಧ್ಯಕ್ಷ ಮಹೇಶ ಮೂಡಂಗಿ ಮಾತನಾಡಿದರು. ವೇದಿಕೆಯಲ್ಲಿ ಊರ ಪ್ರಮುಖ ಮಾರುತಿ ಎಚ್. ಗೌಡ, ಸ್ಥಳೀಯ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ರಾಧಾ ರಾಮಚಂದ್ರ ಶಾನಭಾಗ ಉಪಸ್ಥಿತರಿದ್ದರು.
೬೫ ವರ್ಷ ಮೇಲ್ಪಟ್ಟ ೨೧ ಹಿರಿಯ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಮಹಿಳೆಯರಿಗೆ ನಡೆಸಿದ ಸಂಗೀತ ಕುರ್ಚಿ ಸ್ಪರ್ಧೆಯಲ್ಲಿ ದುಂಡಕುಳಿಯ ಸವಿತಾ ರಮೇಶ ಅಂಬಿಗ ಪ್ರಥಮ ಹಾಗೂ ಮಾದೇವಿ ಮಾದೇವ ಗೌಡ ದ್ವಿತೀಯ ಬಹುಮಾನ ಪಡೆದರು. ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಚೈತನ್ಯ ನವದುರ್ಗೆಯರ ದರ್ಶನ ರಂಜಿಸಿತು.ತುಳಸಿ ಗೌಡ ಪ್ರಾರ್ಥಿಸಿದರು. ಚೈತನ್ಯಾ ರಾಮಚಂದ್ರ ಅಂಬಿಗ ಸ್ವಾಗತಿಸಿದರು. ನಿಹಾರಿಕಾ ಎಲ್. ಅಂಬಿಗ ಹಾಗೂ ದಿಶಾ ಡಿ. ಅಂಬಿಗ ಸ್ವಾಗತ ನೃತ್ಯ ಮಾಡಿದರು. ಚೇತನಾ ಸೇವಾ ಸಂಸ್ಥೆಯ ಅಧ್ಯಕ್ಷ ಆರ್.ಕೆ. ಅಂಬಿಗ ಕಾರ್ಯಕ್ರಮ ನಿರ್ವಹಿಸಿದರು. ವಂದನಾ ರಾಜು ಅಂಬಿಗ ವಂದಿಸಿದರು.