ಹುಬ್ಬಳ್ಳಿ: ಸವಿತಾ ಸಮಾಜ, ಹಡಪದ ಸಮಾಜ ಕಾಯಕ ನಿಷ್ಠೆಗೆ ಹೆಸರಾಗಿದೆ. ದೇಶದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬ ನಾಗರಿಕನ ಪಾತ್ರವೂ ಮುಖ್ಯವಾಗಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಅವರು ಇಲ್ಲಿನ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಚೇರಿಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಮಾಡಿದರು.

ಅತಿಥಿಗಳಾಗಿ ಆಗಮಿಸಿದ್ದ ವಿಪ ಸದಸ್ಯ ಲಿಂಗರಾಜ ಪಾಟೀಲ ಮಾತನಾಡಿ, ಸ್ವಾತಂತ್ರ‍್ಯದ ಈ ಅಮೃತ ಕಾಲದ ಸಂದರ್ಭದಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮುಖ್ಯವಾಹಿನಿಯಲ್ಲಿ ಗೌರವ ಸಿಗಬೇಕು ಎನ್ನುವುದು ಪ್ರಧಾನಿ ಮೋದಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಆಶಯವಾಗಿದೆ. ಹಡಪದ ಹಾಗೂ ಸವಿತಾ ಸಮಾಜದ ಬಂಧುಗಳು ದೇಶದ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ನೀಡುತ್ತಿರುವ ಕೊಡುಗೆ ಅಪಾರ ಎಂದರು.

ಧ್ವಜಾರೋಹಣ ನೆರವೇರಿಸಿದ ಸವಿತಾ ಸಮಾಜದ ಹಿರಿಯ ಮುಖಂಡ ಮಲ್ಲಪ್ಪ ಹಡಪದ ಹಾಗೂ ಕಲ್ಲಪ್ಪ ಹಡಪದ, ಬಚ್ಚಣ್ಣ, ಮುಸ್ಕಾಪಲ್ಲಿ ಮಾತನಾಡಿದರು. ಜಿಲ್ಲೆಯ ಕುಂದಗೋಳ, ಕಲಘಟಗಿ, ಅಳ್ನಾವರ, ನವಲಗುಂದ, ಅಣ್ಣಿಗೇರಿ, ಧಾರವಾಡ- ಹುಬ್ಬಳ್ಳಿ ಸೇರಿದಂತೆ ಇನ್ನಿತರೆ ಕಡೆಗಳಿಂದ ಬಂದಿದ್ದ 300ಕ್ಕೂ ಹೆಚ್ಚು ಜನ ಸವಿತಾ ಸಮಾಜ ಹಾಗೂ ಹಡಪದ ಸಮಾಜದ ಮುಖಂಡರುಗಳನ್ನು ಸನ್ಮಾನಿಸಲಾಯಿತು.

ಕನಕದಾಸ ಕಾಲೇಜಿನ ಬಿ.ಎಸ್. ದೇವರಮನಿ ಸ್ವಾಗತಿಸಿದರು. ರಾಜು ಜರತಾರಗರ ನಿರೂಪಿಸಿದರು. ಮೇಯರ್ ದುರ್ಗಮ್ಮ ಬಿಜವಾಡ, ಧಾರವಾಡ ಗ್ರಾಮೀಣ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಕೃಷ್ಣಾ ಉಪ್ಪೇರ, ಜಿಲ್ಲಾ ಹಡಪದ ಸಂಘದ ಅಧ್ಯಕ್ಷ ಮಹಾರುದ್ರಪ್ಪ ಪಡೆಸೂರ, ಪಾಲಿಕೆ ಸದಸ್ಯರಾದ ರೂಪಾ ಶೆಟ್ಟಿ, ಉಮಾ ಮುಖುಂದ, ಶೀಲಾ ಕಾಟ್ಕರ, ಶಿವು ಮೆಣಸಿನಕಾಯಿ, ರಾಜು ಕಾಳೆ, ಮಂಜು ಕಾಟ್ಕರ ಸೇರಿದಂತೆ ಹಲವರಿದ್ದರು.