ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದ ತಹಸೀಲ್ದಾರ ಕಚೇರಿಯಲ್ಲೇ ದ್ವಿತೀಯ ದರ್ಜೆ ಸಹಾಯಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳವಾರ ನಡೆದಿದೆ. ರುದ್ರಣ್ಣ ಯಡವಣ್ಣವರ್ (35) ಆತ್ಮಹತ್ಯೆಗೆ ಶರಣಾದ ಎಸ್ಡಿಸಿ ನೌಕರ. ಬೆಳಗ್ಗೆ ಸಿಬ್ಬಂದಿ ಕಚೇರಿಗೆ ಆಗಮಿಸಿದಾಗ ಘಟನೆ ಬೆಳಕಿಗೆ ಬಂದಿದೆ.ಇದೇ ಕಟ್ಟಡದಲ್ಲಿ ಗ್ರಾಮಒನ್ ಕೇಂದ್ರವೂ ಇದ್ದು, ಸುದ್ದಿ ಕೇಳಿ ಮಹಿಳಾ ಸಿಬ್ಬಂದಿ ಆಘಾತಕ್ಕೊಳಗಾಗಿದ್ದಾರೆ. ಈ ಮಧ್ಯೆ ತನ್ನ ಸಾವಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಪ್ತ ಸಹಾಯಕ ಸೋಮು ದೊಡವಾಡಿ ಕಾರಣ ಎಂದು ವಾಟ್ಸಾಪ್ ಮೆಸೇಜ್ ಹಾಕಿರುವುದು ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಘಟನೆಯನ್ನು ಖಂಡಿಸಿ ಬಿಜೆಪಿ ಪ್ರತಿಭಟನೆಯನ್ನೂ ನಡೆಸಿದೆ.ನಡೆದಿದ್ದೇನು?:
ಸೋಮವಾರವಷ್ಟೇ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಅವರು ರುದ್ರಣ್ಣ ಯಡವಣ್ಣವರ್ ಅವರನ್ನು ಸವದತ್ತಿಯ ಯಲ್ಲಮ್ಮ ದೇವಸ್ಥಾನದ ಆಡಳಿತ ಮಂಡಳಿಗೆ ವರ್ಗಾವಣೆ ಮಾಡಿದ್ದರು. ರುದ್ರಣ್ಣ ಪತ್ನಿ ಗಿರಿಜಾ ಬೆಳಗಾವಿಯ ಅನಗೋಳದಲ್ಲಿ ಗ್ರಾಮ ಲೆಕ್ಕಾಧಿಕಾರಿ ಆಗಿ ಸೇವೆ ಸಲ್ಲಿಸುತ್ತಿದ್ದು, ತಮ್ಮ ವರ್ಗಾವಣೆಯಾದರೆ, ಕೌಟುಂಬಿಕ ಸಮಸ್ಯೆ ಆಗಬಹುದು ಎಂದು ವರ್ಗಾವಣೆ ತಡೆಯುವಂತೆ ಸಚಿವರ ಆಪ್ತ ಸಹಾಯಕನ ಬಳಿ ರುದ್ರಣ್ಣ ಮನವಿ ಮಾಡಿದ್ದ. ಇದಕ್ಕಾಗಿ ₹2 ಲಕ್ಷ ಹಣ ಸಹ ನೀಡಿದ್ದ ಎನ್ನಲಾಗಿದೆ.ಸೋಮವಾರ ತನ್ನ ವರ್ಗಾವಣೆ ವಿಚಾರ ತಿಳಿಯುತ್ತಿದ್ದಂತೆ ರಾತ್ರಿ 7.31ಕ್ಕೆ ನನ್ನ ಸಾವಿಗೆ ತಹಸೀಲ್ದಾರ್ ಬಸವರಾಜ ನಾಗರಾಳ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಪ್ತ ಸಹಾಯಕ ಸೋಮು ದೊಡವಾಡಿ ನೇರ ಕಾರಣ, ನಮ್ಮ ಕಚೇರಿಯಲ್ಲಿ ತುಂಬಾ ಅನ್ಯಾಯ ನಡೆಯುತ್ತಿದೆ. ದಯವಿಟ್ಟು ಎಲ್ಲರೂ ಒಟ್ಟಾಗಿ ಹೋರಾಡಿ ಎಂದು ಕಚೇರಿಯ ನೌಕರರ ಗ್ರೂಪ್ನಲ್ಲಿ ಮಸೇಜ್ ಹಾಕಿದ್ದ. ವರ್ಗಾವಣೆ ಆದೇಶ ಪ್ರತಿಯನ್ನೂ ಹಂಚಿಕೊಂಡಿದ್ದ. ಬಳಿಕ ರಾತ್ರಿ 7.35ಕ್ಕೆ ಉಪತಹಸೀಲ್ದಾರ್ ಅಶೋಕ ಕಬ್ಬಲಿಗೇರ ಕೂಡ ಕಾರಣ ಎಂದು ಮೆಸೇಜ್ ಹಾಕಿದ್ದ. ಕಚೇರಿಯ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ರಾತ್ರಿ ಘಟನೆ ನಡೆದರೂ ಮಂಗಳವಾರ ಮಧ್ಯಾಹ್ನದವರೆಗೂ ಶವ ನೇತಾಡುತ್ತಿತ್ತು. 8 ಗಂಟೆಗಳ ಬಳಿಕ ಕುಟುಂಬಸ್ಥರ ಸಮ್ಮುಖ ರುದ್ರಣ್ಣ ಅವರ ಶವದ ಪಂಚನಾಮೆ ನಡೆಸಲಾಯಿತು. ಡಿಸಿಪಿ ರೋಹನ್ ಜಗದೀಶ್, ಎಸಿ ಶ್ರವಣಕುಮಾರ ನಾಯಕ, ಎಫ್ಎಸ್ಎಲ್ ಸಿಬ್ಬಂದಿ ನೇತೃತ್ವದಲ್ಲಿ ಪಂಚನಾಮೆ ಪ್ರಕ್ರಿಯೆ ನಡೆಯಿತು. ಬಳಿಕ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಮೃತದೇಹ ರವಾನಿಸಲಾಯಿತು.ಕಾಲ್ಕಿತ್ತ ತಹಸೀಲ್ದಾರ್:
ತಹಸೀಲ್ದಾರ ಕಚೇರಿಯಲ್ಲಿ ಎಸ್ಡಿಸಿ ರುದ್ರಣ್ಣ ಆತ್ಮಹತ್ಯೆ ಪ್ರಕರಣ ತೀವ್ರ ಸಂಚಲನಕ್ಕೆ ಕಾರಣವಾಗುತ್ತಿದ್ದಂತೆಯೇ ತಹಸೀಲ್ದಾರ ಬಸವರಾಜ ನಾಗರಾಳ ಕಚೇರಿಯಿಂದ ಕಾಲ್ಕಿತ್ತಿದ್ದಾರೆ. ಬೆಳಗ್ಗೆ ಚೇಂಬರ್ಗೆ ಹೋಗಿ ಮೃತ ರುದ್ರಣ್ಣ ಶವ ನೋಡಿದ ತಹಸೀಲ್ದಾರ ನಾಗರಾಳ ಅವರು ಪೊಲೀಸರು ಕಚೇರಿಗೆ ಬರುತ್ತಿದ್ದಂತೆಯೇ ಸರ್ಕಾರಿ ವಾಹನದಲ್ಲಿ ಅಲ್ಲಿಂದ ಹೊರಟು ಹೋಗಿದ್ದಾರೆ.ರುದ್ರಣ್ಣ ತಂದೆ ದುಂಡಪ್ಪ ಕೂಡ ಗ್ರಾಮ ಲೆಕ್ಕಾಧಿಕಾರಿ ಆಗಿ ಸೇವೆ ಸಲ್ಲಿಸಿದ್ದರು. ಅವರ ಅಕಾಲಿಕ ನಿಧನದ ಬಳಿಕ ಅನುಕಂಪದ ಆಧಾರದ ಮೇಲೆ ರುದ್ರಣ್ಣನಿಗೆ ಸರ್ಕಾರಿ ನೌಕರಿ ಸಿಕ್ಕಿತ್ತು. 10 ವರ್ಷಗಳಿಂದ ತಹಸೀಲ್ದಾರ ಕಚೇರಿಯಲ್ಲಿ ಎಸ್ಡಿಸಿ ಆಗಿ ಸೇವೆ ಸಲ್ಲಿಸುತ್ತಿದ್ದರು.
ಬಿಜೆಪಿ ನಿಯೋಗ ಭೇಟಿ:ಎಸ್ಡಿಎ ಆತ್ಮಹತ್ಯೆ ಸುದ್ದಿ ತಿಳಿಯುತ್ತಿದ್ದಂತೆಯೇ ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ ನೇತೃತ್ವದ ನಿಯೋಗ ಘಟನಾ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸುಭಾಷ ಪಾಟೀಲ ಅವರು ರುದ್ರಣ್ಣ ಆತ್ಮಹತ್ಯೆಗೆ ಸಂಬಂಧಿಸಿದಂತೆ ಉನ್ನತಮಟ್ಟದ ತನಿಖೆ ಆಗಬೇಕು. ಪ್ರಕರಣದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಪ್ತ ಸಹಾಯಕನ ಹೆಸರು ತಳಕು ಹಾಕಿಕೊಂಡಿದೆ. ಕೂಡಲೇ ಹೆಬ್ಬಾಳಕರ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ ಅವರು, ಈ ಸರ್ಕಾರದಲ್ಲಿ ವಿಪರೀತ ಕಿರಿಕಿರಿ ನೀಡಲಾಗುತ್ತಿದೆ ಎಂದು ಆರೋಪಿಸಿದರು.ಬೆಳಗಾವಿ ತಹಸೀಲ್ದಾರ ಕಚೇರಿಯ ಎಸ್ಡಿಸಿ ರುದ್ರಣ್ಣ ಯಡವಣ್ಣವರ ಆತ್ಮಹತ್ಯೆ ಪ್ರಕರಣದ ಕುರಿತು ತನಿಖೆ ಜಾರಿಯಲ್ಲಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪೊಲೀಸ್ ಇಲಾಖೆಗೆ ಎಲ್ಲ ಸಹಕಾರ ನೀಡುತ್ತೇವೆ. ಮೃತ ವ್ಯಕ್ತಿ ವಾಟ್ಸಾಪ್ ಗ್ರೂಪ್ನಲ್ಲಿ ಹಾಕಿರುವ ಮೆಸೇಜ್ ಕುರಿತು ತನಿಖೆಯಾಗಬೇಕು. ಯಾವುದೇ ಒತ್ತಡ ಇಲ್ಲದೆ ತನಿಖೆ ಮಾಡಲು ಪೊಲೀಸರಿಗೆ ತಿಳಿಸಲಾಗಿದೆ.
-ಮೊಹಮ್ಮದ ರೋಷನ್, ಜಿಲ್ಲಾಧಿಕಾರಿ---
ನಿನ್ನೆ ರಾತ್ರಿ ರುದ್ರಣ್ಣ ಜೊತೆಗೆ ಕುಳಿತು ಊಟ ಮಾಡಿದ್ದೆ. ಊಟದ ಬಳಿಕ ಯಾರದ್ದೋ ಫೋನ್ ಬಂತು. 20 ನಿಮಿಷ ಮಾತನಾಡಿದ. ಬಳಿಕ ಆತ ಮಲಗಿದ. ನಾನು ಮಲಗಿದೆ. ಬೆಳಗ್ಗೆ ಮನೆಯಿಂದ ಎದ್ದು ಯಾವಾಗ ಹೋದ ಎಂಬುದೇ ನಮಗೆ ಗೊತ್ತಾಗಲಿಲ್ಲ. ನಾಲ್ಕು ತಿಂಗಳ ಹಿಂದೆ ವರ್ಗಾವಣೆ ವಿಚಾರದಲ್ಲಿ ₹2 ಲಕ್ಷ ಹಣ ನಾನೇ ಕೊಟ್ಟಿದ್ದೆ. ಆ ಹಣ ಯಾರಿಗೆ ಕೊಟ್ಟ ಎಂಬ ಮಾಹಿತಿ ನಮಗೆ ಗೊತ್ತಿಲ್ಲ.- ಮಲ್ಲವ್ವ ಯಡವಣ್ಣವರ, ಮೃತ ರುದ್ರಣ್ಣನ ತಾಯಿ
----ತಹಸೀಲ್ದಾರ ಕಚೇರಿಯಲ್ಲಿ ಎಸ್ಡಿಸಿ ರುದ್ರಣ್ಣ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದ ಕುರಿತು ಪೊಲೀಸ್ ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ. ತನಿಖೆ ನಡೆಯುತ್ತಿದೆ. ಪ್ರಕರಣದಲ್ಲಿ ಸಚಿವರ ಪಿಎ ತಪ್ಪಿರಬಹುದು. ಆದರೆ, ಸಚಿವರಿಗೆ ಏನು ಸಂಬಂಧ. ವಾಟ್ಸಾಪ್ ಗ್ರೂಪ್ನಲ್ಲಿ ಅನ್ಯಾಯ ಆಗಿದೆ ಎಂದು ದೂರಲಾಗಿದೆ. ನಾನು ತನಿಖಾಧಿಕಾರಿಯಲ್ಲ. ವೇಟ್ ಮಾಡೋಣ. ತನಿಖಾ ವರದಿ ಬರಲಿ. ತಕ್ಷಣ ಏನು ಹೇಳಲಾಗದು.
- ಸತೀಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ