ರಾಷ್ಟ್ರೀಯ ಕೃಷಿ ಹವಾಮಾನ ಸ್ಥಿತಿಸ್ಥಾಪಕ ಆವಿಷ್ಕಾರಗಳ ಯೋಜನೆಯಡಿ ಪುತ್ತನಪುರ ಗ್ರಾಮದಲ್ಲಿ ಕಡಲೆ ಬೆಳೆಯ ಸಮಗ್ರ ನಿರ್ವಹಣೆ ಪ್ರಾತ್ಯಕ್ಷಿಕೆಗಳ ಕ್ಷೇತ್ರೋತ್ಸವ ನಡೆಯಿತು.ಕೇಂದ್ರದ ವಿಜ್ಞಾನಿ ಡಾ. ಶ್ರುತಿ,ಎಂ.ಕೆ. ಕಡಲೆ ಬೆಳೆಯ ಸುಧಾರಿತ ಬೇಸಾಯ ಕ್ರಮಗಳಾದ ಸೂಕ್ತ ತಳಿ ಹಾಗೂ ಬಿತ್ತನೆ ಬೀಜದ ಆಯ್ಕೆ, ಬೀಜೋಪಚಾರ, ಸರಿಯಾದ ಅಂತರದಲ್ಲಿ ಬಿತ್ತನೆ, ಸಮಗ್ರ ಪೋಷಕಾಂಶಗಳ ನಿರ್ವಹಣೆ, ಇವುಗಳ ಬಗ್ಗೆ ಮಾಹಿತಿ ಒದಗಿಸಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ರಾಷ್ಟ್ರೀಯ ಕೃಷಿ ಹವಾಮಾನ ಸ್ಥಿತಿಸ್ಥಾಪಕ ಆವಿಷ್ಕಾರಗಳ ಯೋಜನೆಯಡಿ ಪುತ್ತನಪುರ ಗ್ರಾಮದಲ್ಲಿ ಕಡಲೆ ಬೆಳೆಯ ಸಮಗ್ರ ನಿರ್ವಹಣೆ ಪ್ರಾತ್ಯಕ್ಷಿಕೆಗಳ ಕ್ಷೇತ್ರೋತ್ಸವ ನಡೆಯಿತು.ಕೇಂದ್ರದ ವಿಜ್ಞಾನಿ ಡಾ. ಶ್ರುತಿ,ಎಂ.ಕೆ. ಕಡಲೆ ಬೆಳೆಯ ಸುಧಾರಿತ ಬೇಸಾಯ ಕ್ರಮಗಳಾದ ಸೂಕ್ತ ತಳಿ ಹಾಗೂ ಬಿತ್ತನೆ ಬೀಜದ ಆಯ್ಕೆ, ಬೀಜೋಪಚಾರ, ಸರಿಯಾದ ಅಂತರದಲ್ಲಿ ಬಿತ್ತನೆ, ಸಮಗ್ರ ಪೋಷಕಾಂಶಗಳ ನಿರ್ವಹಣೆ, ಇವುಗಳ ಬಗ್ಗೆ ಮಾಹಿತಿ ಒದಗಿಸಿದರು.

ರೋಗ ಶಾಸ್ತ್ರಜ್ಞ ಡಾ. ಪಂಪನಗೌಡ ಮಾತನಾಡಿ, ಕಡಲೆ ಬೆಳೆಯಲ್ಲಿ ಸೊರಗು ರೋಗ ನಿರ್ವಹಣೆಗೆ ಸೂಕ್ತ ತಳಿಗಳ ಆಯ್ಕೆ ಮತ್ತು ಜೈವಿಕ ಪೀಡೆನಾಶಕಗಳಿಂದ ಬೀಜೋಪಚಾರ ಅತ್ಯಗತ್ಯವಾಗಿದ್ದು, ರೈತರು ಅಳವಡಿಸಿಕೊಳ್ಳಲು ಕರೆ ನೀಡಿದರು.

ಗ್ರಾಮದ ರೈತರಾದ ಜವರಶೆಟ್ಟಿ, ಮಂಜುನಾಥ್, ನಾಗರಾಜು, ಶಿವಣ್ಣ, ಶಿವಕುಮಾರ್ ರವರು ಚರ್ಚೆಯಲ್ಲಿ ಭಾಗವಹಿಸಿ ಸಂದಿಗ್ಧ ಹಂತಗಳಲ್ಲಿ ಕೈಗೊಳ್ಳಬೇಕಾಗಿರುವ ಚಟುವಟಿಕೆಗಳಾದ ಕುಡಿಚಿವುಟುವುದು, ಲಘು ಪೋಷಕಾಂಶಗಳ ಸಿಂಪಡಣೆ ಮತ್ತು ಕಾಯಿಕೊರಕ ಹಾಗೂ ಸೊರಗು ರೋಗದ ನಿರ್ವಹಣೆ ಇವುಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು.

ಪ್ರಾತ್ಯಕ್ಷಿಕೆ ರೈತರಾದ ಜವರಶೆಟ್ಟಿ ಮತ್ತು ರಮೇಶ್ ಮಾತನಾಡಿ, ಕಡಲೆ ಬೆಳೆಯ ವೈಜ್ಞಾನಿಕ ನಿರ್ವಹಣಾ ಕ್ರಮಗಳ ಅಳವಡಿಕೆಯಿಂದ ಕಾಯಿಕೊರಕ ಕೀಟ ಮತ್ತು ಸೊರಗು ರೋಗದ ಹಾವಳಿ ಕಡಿಮೆಯಾಗಿದೆ., ಸರಿಯಾದ ಸಮಯದಲ್ಲಿ ಕುಡಿ ಚಿವುಟುವ ಕ್ರಮ ಅನುಸರಿಸಿರುವುದರಿಂದ ಹೆಚ್ಚಿನ ಕವಲುಗಳು ಮತ್ತು ಹೆಚ್ಚಿನ ಕಾಯಿಗಳ ಸಂಖ್ಯೆ ಕಂಡುಬಂದಿದೆ ಎಂದು ಮಾಹಿತಿ ನೀಡಿದರು.

ಗ್ರಾಮ ಮಟ್ಟದ ಹವಾಮಾನ ವೈಪರೀತ್ಯ ನಿರ್ವಹಣಾ ಸಮಿತಿ ಅಧ್ಯಕ್ಷ ರಾಜಶೇಖರಪ್ಪ ಮಾತನಾಡಿ, ಯೋಜನೆಯಡಿ ತಿಳಿಸಿಕೊಟ್ಟಿರುವ ಮಣ್ಣು ಮತ್ತು ನೀರು ಸಂರಕ್ಷಣಾ ಕ್ರಮಗಳು, ಅದರಲ್ಲೂ ಕಂದಕ ಬದುಗಳ ಅಳವಡಿಕೆಯಿಂದ ಮಣ್ಣಿನಲ್ಲಿ ತೇವಾಂಶ ಸಂರಕ್ಷಣೆಯಾಗಿ, ಉತ್ತಮ ಬೆಳವಣಿಗೆ ಕಂಡುಬಂದಿದ್ದು ಹೆಚ್ಚಿನ ಇಳುವರಿಯ ನಿರೀಕ್ಷೆ ಇದೆ ಎಂದು ತಿಳಿಸಿದರು.

ಸಮಿತಿಯ ಉಪಾಧ್ಯಕ್ಷ ಶಿವಣ್ಣ, ನಿರ್ದೇಶಕರಾದ ಪುಟ್ಟಬಸವಯ್ಯ ಮತ್ತು ಸದಸ್ಯ ಚಿಕ್ಕಸಿದ್ದಯ್ಯ ಕಾರ್ಯಕ್ರಮದಲ್ಲಿ ರೈತರನ್ನುದ್ದೇಶಿಸಿ ಮಾತನಾಡಿದರು.

ಪ್ರಗತಿಪರ ರೈತರಾದ ಶಿವರಾಮು, ಸಿದ್ದಯ್ಯ, ಅಂಕಯ್ಯ, ದೇಸಯ್ಯ ಮತ್ತು ೪೦ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು. ಯೋಜನೆಯ ಹಿರಿಯ ಸಂಶೋಧನಾ ಸಹಾಯಕ ಮೋಹನ್‌ಕುಮಾರ್, ಬಿ.ಎನ್ ಕಾರ್ಯಕ್ರಮವನ್ನು ಆಯೋಜಿಸಿ ನಿರ್ವಹಿಸಿದರು.