ಯಲಬುರ್ಗಾ: ತಾಲೂಕಿನ ತುಮ್ಮರಗುದ್ದಿ ಪ್ಯಾಟಿ ಬಸವೇಶ್ವರ ಸಂಜೀವಿನಿ ಮಹಿಳಾ ಒಕ್ಕೂಟದಲ್ಲಿ ನಡೆದಿದೆ ಎನ್ನಲಾದ ಹಣಕಾಸಿನ ಅವ್ಯವಹಾರದ ಬಗ್ಗೆ ತನಿಖಾ ತಂಡದ ಅಧಿಕಾರಿಗಳು ಜಿಪಂಗೆ ವರದಿ ಸಲ್ಲಿಸಿದ್ದು, ತನಿಖೆಯಲ್ಲಿ ಮುಖ್ಯ ಪುಸ್ತಕ ಬರಹಗಾರರಾದ (ಎಂಬಿಕೆ) ಲಲಿತಾ ಅಬ್ಬಿಗೇರಿ ಹಣ ದುರುಪಯೋಗ ಮಾಡಿಕೊಂಡಿರುವುದು ಸಾಬೀತಾಗಿದೆ.

ದುರುಯೋಗ ಮಾಡಿಕೊಂಡ ಹಣ ಸಕಾಲದಲ್ಲಿ ಬಡ್ಡಿ ಸಮೇತ ಮರುಪಾವತಿ ಮಾಡಬೇಕು. ಅನವಶ್ಯಕ ಕಾರಣ ಹೇಳುತ್ತಾ ಕಾಲಹರಣ ಮಾಡಿದರೇ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೋಟಿಸ್ ಜಾರಿ ಮಾಡಲಾಗಿದೆ.

ಒಕ್ಕೂಟದ ಎಂಬಿಕೆ ಹಣ ದುರುಪಯೋಗ ಮಾಡಿಕೊಂಡ ಬಗ್ಗೆ ಗ್ರಾಮಸ್ಥರು ದೂರು ನೀಡಿದ ಕಾರಣ ಈ ಪ್ರಕರಣ ಬಯಲಿಗೆ ಬಂದ ಹಿನ್ನೆಲೆಯಲ್ಲಿ ಫೆಬ್ರುವರಿಯಲ್ಲಿ ಮೂವರು ಅಧಿಕಾರಿಗಳನ್ನೊಳಗೊಂಡ ತನಿಖಾ ತಂಡ ಸಮಗ್ರ ಮಾಹಿತಿ ಸಂಗ್ರಹಿಸಿತ್ತು.ಸುಮಾರು ಒಂದೂವರೆ ವರ್ಷಗಳಿಂದಲೂ ಹಣಕಾಸಿನ ಲೆಕ್ಕಪತ್ರಗಳಿಲ್ಲದೆ ದುರ್ಬಳಕೆಯಾಗಿದೆ. ಒಕ್ಕೂಟದಿಂದ ಸಾಲ ಪಡೆದುಕೊಂಡ ಸಂಘದವರು ಮರುಪಾವತಿ ಮಾಡಿದ ₹೨೦,೬೨೬೭೬ ಅಸಲು ಹಾಗೂ ₹೭೨೯೦೫೧ ಬಡ್ಡಿ ಸೇರಿ ಒಟ್ಟು ₹೨೭೯೧೭೨೭ ಹಣವನ್ನು ಒಕ್ಕೂಟದ ಖಾತೆಗೆ ಜಮಾ ಮಾಡದೇ ಸ್ವಂತಕ್ಕೆ ಬಳಕೆ ಮಾಡಿಕೊಂಡಿರುವದು ಸಾಬೀತಾಗಿದೆ.

ಒಕ್ಕೂಟದ ಹಣ ದುರುಪಯೋಗದ ಬಗ್ಗೆ ನಮ್ಮ ಕರವೇ ಸಂಘಟನೆಯಿಂದ ಪ್ರತಿಭಟನೆ ನಡೆಸುವ ಮೂಲಕ ತಾಪಂ ಇಒಗೆ ಮನವಿ ಸಲ್ಲಿಸಲಾಗಿತ್ತು.ಹಣ ದುರುಪಯೋಗ ಮಾಡಿಕೊಂಡ ಎಂಬಿಕೆ ಮೇಲೆ ತ್ವರಿತವಾಗಿ ಪ್ರಕರಣ ದಾಖಲು ಮಾಡಿ ಹಣ ವಸೂಲಿ ಮಾಡಬೇಕು.ವಿಳಂಬ ಮಾಡಿದರೇ ತಾಪಂ ಕಚೇರಿ ಮುಂದೆ ಹೋರಾಟ ನಡೆಸಲಾಗುವುದು ಎಂದು ಯಲಬುರ್ಗಾ ಕರವೇ ಮುಖಂಡ ರಾಜಶೇಖರ ಶ್ಯಾಗೋಟಿ ತಿಳಿಸಿದ್ದಾರೆ.