ಹುಬ್ಬಳ್ಳಿ:

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಇದೇ ಮೋದಲ ಬಾರಿಗೆ ತನ್ನ ಪ್ರಸಕ್ತ ಸಾಲಿನ (2026-27) ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಸಮುದಾಯಕ್ಕೆ ಸಂವಿಧಾನ ಬದ್ಧ ಶೇ.24.10 (ಎಸ್ಸಿ-17.15, ಎಸ್ಟಿ-6.95) ಪಾಲು ನಿಗದಿ ಮಾಡಿದೆ.

ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಮಾದರಿಯಲ್ಲಿ ಮಹಾನಗರ ಪಾಲಿಕೆ ತನ್ನ ಸದಸ್ಯರಿಗೆ ₹ 1.50 ಕೋಟಿ ಕಾಯ್ದಿರಿಸಿದ್ದು, ಈ ಅನುದಾನ ನಾಲಾ ಸ್ವಚ್ಛತೆ, ರಸ್ತೆ ಗುಂಡಿ ಮುಚ್ಚುವುದು ಹಾಗೂ ಒಳಚರಂಡಿ ನಿರ್ವಹಣೆಗೆ ಬಳಸಬೇಕು ಎಂದು ಕರಾರು ಹಾಕಿದೆ.

ಈ ₹1.50 ಕೋಟಿ ಅನುದಾದಲ್ಲಿ ಶೇ.24.10 ರಷ್ಟನ್ನು ಪರಿಶಿಷ್ಟರು ವಾಸಿಸುವ ಪ್ರದೇಶದ ಅಗತ್ಯಕ್ಕೆ ಅನುಗುಣವಾಗಿ ಬಳಸಬೇಕು. ಯಾವುದೇ ಅನ್ಯ ಕಾರ್ಯಕ್ಕೆ ಬಳಸುವಂತಿಲ್ಲ ಎಂದು ಕಡ್ಡಾಯ ಮಾಡಿದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರ ಸೇರಿ 82 ವಾರ್ಡ್ ಇದ್ದು, ಒಟ್ಟು ₹120 ಕೋಟಿ ವಿಶೇಷ ಅನುದಾನದಲ್ಲಿ ₹24.10 ಕೋಟಿ ಪರಿಶಿಷ್ಟರ ಪಾಲು ನಿಗದಿಯಾಗಿದೆ.

ಜಕ್ಕಪ್ಪನವರ ಹೋರಾಟ:


ಶಾಸಕ ಎಫ್.ಎಚ್. ಜಕ್ಕಪ್ಪನವರ ಪಾಲಿಕೆಯ ಬಜೆಟ್‌ ಸಿದ್ಧತಾ ಸಭೆಗಳಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಬಜೆಟ್‌ನಲ್ಲಿ ಪರಿಶಿಷ್ಟರ ಸಾಂವಿಧಾನಿಕ ಹಕ್ಕಿನ ಪಾಲಿನ ಬಗ್ಗೆ ಧ್ವನಿ ಎತ್ತುತ್ತಲೇ ಬಂದಿದ್ದರು. ಪರಿಶಿಷ್ಟರ ನ್ಯಾಯಯುತ ಹಕ್ಕಿನ ಬಗ್ಗೆ ಪಾಲಿಕೆಯ ತೆರಿಗೆ ನಿರ್ಧಾರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಹಾಗೂ ಅಧಿಕಾರಿಗಳಿಗೆ ಮನವರಿಕೆ ಮಾಡಿದ್ದರು. ಬಳಿಕ ನಿರಂತರ ಒತ್ತಡ ಹಾಕುತ್ತಲೇ ಬಂದಿದ್ದರಿಂದ ಪಾಲಿಕೆಯ ಆಯುಕ್ತ ರುದ್ರೇಶ ಘಾಳಿ, ಮುಖ್ಯ ಲೆಕ್ಕಾಧಿಕಾರಿ ಶಂಕರಾನಂದ ಬನಶಂಕರಿ ಅವರಿಗೆ ಮನವರಿಕೆಯಾಗಿ ಸದಸ್ಯರ ನಿಧಿಯಲ್ಲಿ ಶೇ.24.10ರಷ್ಟು ಅನುದಾನವನ್ನು ನಿಗದಿ ಮಾಡಿ ಬಜೆಟ್‌ನಲ್ಲಿ ಘೋಷಿಸಿದ್ದಾರೆ.

ಓರ್ವ ಜನಪ್ರತಿನಿಧಿ ತನ್ನ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಿದರೆ ಏನೆಲ್ಲ ನ್ಯಾಯ, ಅನುಕೂಲ ಲಭಿಸಬಹುದು ಎನ್ನುವುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ಪಾಲಿಕೆ ತನ್ನ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಈ ನಿರ್ಧಾರ ಕೈಕೊಂಡಿದೆ.