ಮುಂಡರಗಿ: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ರೂಪಿಸಿದ 1991ರ ಹೊಸ ಆರ್ಥಿಕ ನೀತಿಯನ್ನು ಈ ದೇಶದ ಸಧ್ಯದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಂದುವರೆಸಿ ಜಿಎಸ್ಟಿ ಜಾರಿಗೆ ತಂದರು. ಜಿಎಸ್ಟಿ ಜಾರಿಗೆ ನಂತರ ನಮ್ಮ ದೇಶದ ಆದಾಯ ಅತ್ಯಂತ ಮಿತಿಮೀರಿ ಹೆಚ್ಚಾಗಿದೆ ಎಂದು ಜ.ಅ. ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ. ಬಿ.ಜಿ. ಜವಳಿ ಹೇಳಿದರು.

ಸ್ಥಳೀಯ ಕ.ರಾ. ಬೆಲ್ಲದ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಮತ್ತು ಅರ್ಥಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗ ಮುಂಡರಗಿ, ಆಂತರಿಕ ಭರವಸೆ ಕೋಶ ಅಡಿಯಲ್ಲಿ ಅರ್ಥಶಾಸ್ತ್ರ ವಿಭಾಗದಿಂದ ಕರ್ನಾಟಕ ರಾಜ್ಯದ ಮುಂಗಡ ಪತ್ರದ ವಿಶ್ಲೇಷಣೆ ಮತ್ತು ಆರ್ಥಿಕ ಸಮೀಕ್ಷೆ 2026-27ರ ಒಂದು ದಿನದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಜಿಎಸ್ಟಿ ಆದಾಯವನ್ನು ದೇಶದ ಎಲ್ಲ ರಾಜ್ಯಗಳಿಗೂ ಹಂಚಿಕೆ ಮಾಡುವುದರ ಜತೆಗೆ ಕೇಂದ್ರ ಸರ್ಕಾರದಿಂದ ರಸ್ತೆ, ಕುಡಿಯುವ ನೀರು, ರೇಲ್ವೆ, ಶಿಕ್ಷಣ ಸೇರಿದಂತೆ ಮೂಲಭೂತ ಸೌಲಭ್ಯ ಒದಗಿಸಿದರು. ವಿದ್ಯುಚ್ಛಕ್ತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಪಡಿಸಿದರು. ಇದರಿಂದ ದೇಶ ಪ್ರಗತಿ ಪಥದತ್ತ ಮುಂದೆ ಸಾಗಲು ಕಾರಣವಾಯಿತು ಎಂದರು.

ರಾಜ್ಯ ಸರ್ಕಾರ ಈಚೆಗೆ ಮಂಡಿಸುತ್ತಿರುವ ಮುಂಗಡ ಪತ್ರಗಳಲ್ಲಿ ಉಚಿತ ಯೊಜನೆಗಳಿಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತಿದೆ. ಇದರಿಂದ ರಸ್ತೆ ನಿರ್ಮಾಣ, ಬಡವರಿಗಾಗಿ ಮನೆಗಳ ನಿರ್ಮಾಣ, ಶಿಕ್ಷಣ, ಆರೋಗ್ಯ ಸೇರಿದಂತೆ ಮೂಲ ಸೌಲಭ್ಯಗಳಿಗೆ ಕೊರತೆಯಾಗಿ ಆರ್ಥಿಕ ಬೆಳವಣಿಗೆಗೆ ತೊಂದರೆಯಾಗುತ್ತದೆ. ಶಾಲಾ-ಕಾಲೇಜುಗಳಲ್ಲಿ ಮುಂಗಡ ಪತ್ರದ ಕುರಿತು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಬೇಕು. ಇದರಿಂದ ಮುಂಗಡ ಪತ್ರದ ಪರಿಭಾವಣೆ ಬಗ್ಗೆ ಮಕ್ಕಳಿಗೆ ಸಂಪೂರ್ಣವಾಗಿ ಮಾಹಿತಿ ದೊರೆತಂತಾಗುತ್ತದೆ ಎಂದರು.

ಹೂವಿನ ಹಡಗಲಿ ಜಿ.ಬಿ.ಆರ್. ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಎಸ್.ಎಸ್. ಪಾಟೀಲ ಮಾತನಾಡಿ, ದೇಶ ಮತ್ತು ರಾಜ್ಯದಲ್ಲಿ ಆಡಳಿತ ಮಾಡುವ ಎಲ್ಲ ಸರ್ಕಾರಗಳು ಮಂಡಿಸುವ ಮುಂಗಡ ಪತ್ರಗಳು ದೇಶದ ಸಾಮಾಜಿಕ ಮತ್ತು ಮೂಲಭೂತ ಸೌಲಭ್ಯಗಳಿಗೆ ಆದ್ಯತೆ ನೀಡಬೇಕು. ಮುಂಗಡ ಪತ್ರ ಮಂಡನೆ ಮಾಡುವಾಗ ಸಾಮಾಜಿಕ, ಆರ್ಥಿಕ ಮತ್ತು ಸಾಮಾಜಿಕ ಅಸಮತೋಲನ ನಿವಾರನೆಯಾಗುವಂತೆ ಯೋಜನೆಗಳನ್ನು ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕ ಡಾ. ಕುಮಾರ ಜೆ. ಡಾ. ವನಜಾಕ್ಷಿ ಭರಮಗೌಡರ, ಕೋಟೆಪ್ಪ ಗುಂಡಿಕೇರಿ, ರಘುವೀರ ಕೊಂಚಿಗೇರಿ, ಎಸ್.ಜಿ. ಹಿರೇಮಠ, ಸಂಗೀತಾ ಮರಳಿ, ಕೆ.ಕೆ. ಉಳ್ಳಾಗಡ್ಡಿ, ಜ್ಯೋತಿಕಾ ಭಾಗವಹಿಸಿದ್ದರು. ಡಾ. ಆರ್.ಎಚ್. ಜಂಗನವಾರಿ ಪ್ರಾಸ್ತಾವಿಕವಾಗಿ ಮಾತಾಡಿದರು. ಪ್ರಾಚಾರ್ಯ ಡಾ. ಸಂತೋಷ ಹಿರೇಮಠ ಸ್ವಾಗತಿಸಿದರು. ಪ್ರೊ. ಕೌಶಲ್ಯ ಜಮಾದರ ನಿರೂಪಿಸಿದರು. ಚೈತ್ರಾ ಜಮಾದಾರ ವಂದಿಸಿದರು.