- ಕೆಎಸ್ಸಿಎ ನಿರ್ದೇಶಕ ಡಿ.ಎಸ್.ಅರುಣ್ ಹೇಳಿಕೆ । ತಂಡದಲ್ಲಿದ್ದ ಶಿವಮೊಗ್ಗ ವಲಯದ ಮೂವರು
- - -ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪ್ರತಿಷ್ಠಿತ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20-2026ರ ಫೈನಲ್ ಪಂದ್ಯದಲ್ಲಿ ಶಿವಮೊಗ್ಗ ಯೋಧಾಸ್ ಚಾಂಪಿಯನ್ ಆಗಿದ್ದು, ಈ ಪಂದ್ಯದಲ್ಲಿ ಭಾಗವಹಿಸಿದ್ದ ಕೆಎಸ್ಸಿಎ ಶಿವಮೊಗ್ಗ ವಲಯದ ಮೂವರು ಆಟಗಾರರನ್ನು ಜು.20ರಂದು ಸನ್ಮಾನಿಸಿ ಅಭಿನಂದಿಸಲಾಗುವುದು ಎಂದು ಕೆಎಸ್ಸಿಎಯ ನಿರ್ದೇಶಕ ಹಾಗೂ ಶಿವಮೊಗ್ಗ ವಲಯದ ಸಂಚಾಲಕ ಡಿ.ಎಸ್.ಅರುಣ್ ತಿಳಿಸಿದರು.ಶನಿವಾರ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಯೋಧಾಸ್ ತಂಡವು ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ದ ನಾಲ್ಕು ವಿಕೆಟ್ಗಳ ರೋಚಕ ಗೆಲುವು ಸಾಧಿಸಿದ್ದು, ಮೊದಲ ಬಾರಿಗೆ ಚಾಂಪಿಯನ್ ಆದ ಶಿವಮೊಗ್ಗ ಯೋಧಾಸ್ ತಂಡಕ್ಕೆ ಅಭಿನಂದಿಸುತ್ತೇನೆ ಎಂದರು.
ಶಿವಮೊಗ್ಗ ಯೋಧಾಸ್ ತಂಡದ ಸಾಗರದ ಶ್ರೇಯಾಂಕ್, ಚಿಕ್ಕಮಗಳೂರಿನ ಕುಮಾರಸ್ವಾಮಿ ಹಾಗೂ ಹಾಸನದ ಯುನಸ್ ಅಲಿ ಬೇಗ್ ಅವರನ್ನು ಸೋಮವಾರ ಸಂಜೆ 6 ಗಂಟೆಗೆ ಬೆಕ್ಕಿನ ಕಲ್ಮಠ ವೃತ್ತದಿಂದ ಶಿವಮೊಗ್ಗದ ಕೆಎಸ್ಸಿಎ ನವುಲೆ ಕ್ರೀಡಾಂಗಣದವರೆಗೆ ಮೆರವಣಿಗೆ ಮೂಲಕ ಅದ್ದೂರಿಯಾಗಿ ಸ್ವಾಗತಿಸಲಿದ್ದು, 7 ಗಂಟೆಗೆ ಸನ್ಮಾನಿಸಿ ಅಭಿನಂದಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಚುನಾಯಿತ ಪ್ರತಿನಿಧಿಗಳು, ಹಿರಿಯ ಕ್ರಿಕೆಟ್ ಆಟಗಾರರು, ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಮುಂತಾದವರು ಭಾಗವಹಿಸಲಿದ್ದಾರೆ. ನಂತರ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
2008 ರಲ್ಲಿ ಐಪಿಎಲ್ ಆರಂಭವಾಯಿತು. ಅದೇ ರೀತಿ 2009ರಲ್ಲಿ ಕೆಪಿಎಲ್ ಆರಂಭವಾಗಿ 2019 ವರೆಗೆ ನಡೆದು ಬಂತು. ನಂತರ ಮತ್ತೇ 2022ರಲ್ಲಿ ಕೆಪಿಎಲ್ ಅನ್ನು ಮಹಾರಾಜ ಕಪ್ ಎಂದು ಮರು ನಾಮಕರಣ ಮಾಡಲಾಯಿತು. ಅಲ್ಲಿಂದ ಇಲ್ಲಿಯವರೆಗೂ ಪ್ರತಿವರ್ಷ ಈ ಕಪ್ ಯಶಸ್ವಿಯಾಗಿ ನಡೆಯುತ್ತಾ ಬಂದಿದ್ದು, ಮಹಾರಾಜ ಕಪ್ಗಾಗಿ ರಾಜ್ಯ 6 ತಂಡಗಳು ಭಾಗವಹಿಸುತ್ತಿವೆ ಎಂದರು.
ಶಿವಮೊಗ್ಗ ಯೋಧಾಸ್ ತಂಡದ ಆಟಗಾರರ ಪರಿಶ್ರಮ, ತರಬೇತುದಾರರ ಮಾರ್ಗದರ್ಶನ ಹಾಗೂ ತಂಡದ ಸಮರ್ಪಣೆಯ ಫಲವಾಗಿ ಈ ಟ್ರೋಫಿ ನಮ್ಮ ಮುಡಿಗೇರಿದೆ. ಈ ವರ್ಷದಿಂದ ಮಹಾರಾಣಿ ಕಪ್ ಆಯೋಜಿಸುತ್ತಿದ್ದು, ಜು.22 ರಿಂದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳು ಆರಂಭಗೊಳ್ಳಲ್ಲಿದ್ದು, ಒಟ್ಟು 4 ತಂಡಗಳು ಭಾಗವಹಿಸುತ್ತಿವೆ ಎಂದರು.ಶಿವಮೊಗ್ಗ ಯೋಧಾಸ್ ತಂಡಕ್ಕೆ ಕೆಎಸ್ಸಿಎ ವತಿಯಿಂದ ₹15 ಲಕ್ಷ ನಗದು ಬಹುಮಾನ ಬಂದಿದ್ದು, ಅದರಲ್ಲಿ ಶಿವಮೊಗ್ಗದ ಇತ್ತೀಚೆಗೆ ಮೃತಪಟ್ಟ ಕ್ರಿಕೇಟ್ ಆಟಗಾರ ಎಚ್.ಸಿ. ಅಕ್ಷಯ್ ಅವರ ಕುಟುಂಬಕ್ಕೆ ₹5 ಲಕ್ಷ ನೀಡಲು ಪ್ರಾಂಚೈಸಿದಾರರು ಒಪ್ಪಿದ್ದಾರೆ. ಅಲ್ಲದೇ ಅಕ್ಷಯ್ ಮಗಳಿಗೆ ಶಿಕ್ಷಣ ವೆಚ್ಚವನ್ನು ಭರಿಸುವುದಾಗಿ ಹೇಳಿದ್ದು, ನಮಗೆಲ್ಲರಿಗೂ ಸಂತೋಷ ತಂದಿದೆ ಎಂದರು.
ಮುಂದಿನ ಒಂದು ವರ್ಷದಲ್ಲಿ ಶಿವಮೊಗ್ಗದ ನವುಲೆಯ ಕೆಎಸ್ಸಿಎ ಕ್ರೀಡಾಂಗಣಕ್ಕೆ ಫ್ಲೆಡ್ಲೈಟ್ ಅಳವಡಿಕೆ ಹಾಗೂ ಕ್ರಿಕೆಟ್ ಆಟಕ್ಕೆ ಒಳಾಂಗಣ ಕ್ರೀಡಾಂಗಣ ನಿರ್ಮಾಣಗೊಳ್ಳಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಕೆಎಸ್ಸಿಎ ಶಿವಮೊಗ್ಗ ವಲಯದ ಅಧ್ಯಕ್ಷ ನಾಗೇಂದ್ರ ಕೆ. ಪಂಡಿತ್, ಸದಾನಂದ್. ಎಚ್.ಎಸ್, ಡಿ.ಆರ್.ನಾಗರಾಜ್, ಐಡಿಯಲ್ ಗೋಪಿ, ಯಶವಂತ್ ನಾಯ್ಕ್, ಚಂದನ್ ಉಪಸ್ಥಿತರಿದ್ದರು.
- - --18ಎಸ್ಎಂಜಿಕೆಪಿ03:
ಶಿವಮೊಗ್ಗದ ಪತ್ರಿಕಾಭವನದಲ್ಲಿ ಶನಿವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಕೆಎಸ್ಸಿಎಯ ನಿರ್ದೇಶಕ ಹಾಗೂ ಶಿವಮೊಗ್ಗ ವಲಯದ ಸಂಚಾಲಕ ಡಿ.ಎಸ್.ಅರುಣ್ ಮಾತನಾಡಿದರು.