ಕನ್ನಡಪ್ರಭ ವಾರ್ತೆ ಸಿದ್ದಾಪುರ

ಲಯನ್ಸ್ ಕ್ಲಬ್ ಸಿದ್ದಾಪುರ, ಕೊಡಗು ಹಾಗೂ ಸ್ಕೋಲಿಯೋಸಿಸ್ ಫೌಂಡೇಶನ್ ಆಫ್ ಇಂಡಿಯಾ ಸಹಯೋಗದಲ್ಲಿ ಸಿದ್ದಾಪುರದ ಸೇಕ್ರೆಡ್ ಹಾರ್ಟ್ ಆಸ್ಪತ್ರೆಯಲ್ಲಿ ಭಾನುವಾರ ಆಯೋಜಿಸಿದ್ದ ಉಚಿತ ಸ್ಕೋಲಿಯೋಸಿಸ್ (ಬೆನ್ನುಮೂಳೆ ವಕ್ರತೆ) ತಪಾಸಣೆ ಶಿಬಿರಕ್ಕೆ ಉತ್ತಮ ಸ್ಪಂದನೆ ದೊರೆಯಿತು.18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಈ ಶಿಬಿರದಲ್ಲಿ ಅನೇಕ ಮಕ್ಕಳು ಹಾಗೂ ಸಾರ್ವಜನಿಕರು ಭಾಗವಹಿಸಿ ತಪಾಸಣೆಯ ಸೌಲಭ್ಯವನ್ನು ಪಡೆದುಕೊಂಡರು. ಬೆನ್ನುಮೂಳೆ ತಜ್ಞ ಡಾ. ಥಾಮಸ್ ಕ್ರಿಶೆನ್ ಜೋಸೆಫ್ ಅವರು ಮಕ್ಕಳಲ್ಲಿ ಸ್ಕೋಲಿಯೋಸಿಸ್ ಸಮಸ್ಯೆ ಇರುವುದನ್ನು ಪರಿಶೀಲಿಸಿ, ವೈದ್ಯಕೀಯ ಸಲಹೆಗಳನ್ನು ನೀಡಿದರು.ಅಗತ್ಯವಿರುವವರಿಗೆ ಮುಂದಿನ ಚಿಕಿತ್ಸೆ ಕುರಿತು ಮಾರ್ಗದರ್ಶನ ನೀಡಲಾಯಿತು. ಅಲ್ಲದೆ ಬೆನ್ನು ಮೂಳೆಗೆ ಸಂಬಂಧಿಸಿದ ಇತರ ಆರೋಗ್ಯ ಸಮಸ್ಯೆಗಳ ಕುರಿತು ಬಂದಿದ್ದ ರೋಗಿಗಳಿಗೂ ಡಾ. ಕ್ರಿಶೆನ್ ಜೋಸೆಫ್ ಸಮಾಲೋಚನೆ ನಡೆಸಿ ಸಲಹೆ ನೀಡಿದರು.ಲಯನ್ಸ್ ಕ್ಲಬ್ ಸಿದ್ದಾಪುರ ಅಧ್ಯಕ್ಷೆ ಲಯನ್ ವಿದ್ಯಾ ದೇವಯ್ಯ, ಕಾರ್ಯದರ್ಶಿ ಲಯನ್ ವಿಪಿನ್ ಸುಬ್ಬಯ್ಯ, ಖಜಾಂಚಿ ಲಯನ್ ದರ್ಶನ್ ಬೋಪಣ್ಣ, ಲಯನ್ ಥಾಮಸ್ ಮ್ಯಾಥ್ಯೂ, ಲಯನ್ ವಿವೇಕ್ ಜೋಯಪ್ಪ ಸೇರಿದಂತೆ ಕ್ಲಬ್ ಸದಸ್ಯರು ಹಾಗೂ ಸೇಕ್ರೆಡ್ ಹಾರ್ಟ್ ಆಸ್ಪತ್ರೆಯ ಆಡಳಿತ ಮಂಡಳಿ ಮತ್ತು ವೈದ್ಯರು ಶಿಬಿರದ ಯಶಸ್ವಿ ಆಯೋಜನೆಗೆ ಸಹಕರಿಸಿದರು.