ಕನ್ನಡಪ್ರಭ ವಾರ್ತೆ ತಿಪಟೂರು

ಯಾವುದೇ ಅರ್ಹ ಮತದಾರ ಚುನಾವಣಾ ಪ್ರಕ್ರಿಯೆಯಿಂದ ಹೊರಗುಳಿಯಬಾರದು ಮತ್ತು ಕಾನೂನು ಬಾಹಿರವಾಗಿ ಯಾವುದೇ ಅರ್ಹವಲ್ಲದ ವ್ಯಕ್ತಿ ಮತದಾರರ ಪಟ್ಟಿಯಲ್ಲಿ ಇರಬಾರದು ಎಂಬ ಉದ್ದೇಶದಿಂದ ಚುನಾವಣಾ ಆಯೋಗ ಈ ಪರಿಷ್ಕರಣಾ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ತಿಳಿಸಿದರು.ನಗರದ ತಮ್ಮ ಗೃಹಕಚೇರಿಯಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದ ಕರಾಟೆ ವೆಂಕಟೇಶ್‌ರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಅವರು, ಎಸ್‌ಐಆರ್ ಜನರಿಗೆ ಪೂರಕವಾಗಿದೆ. ಸಂವಿಧಾನಬದ್ದವಾಗಿ ಮತದಾನದ ಹಕ್ಕು ಪಡೆಯಲು ಒಬ್ಬರಿಗೆ ೧೮ವರ್ಷ ವಯಸ್ಸಾಗಿರಬೇಕು. ಭಾರತೀಯ ಪ್ರಜೆಯಾಗಿರಬೇಕು. ಇದಕ್ಕೆ ಅಗತ್ಯ ದಾಖಲೆಯನ್ನು ಹೊಂದಿದ್ದರೆ ಸಾಕು. ಎಸ್‌ಐಆರ್ ಬಗ್ಗೆ ಯಾರೂ ಆತಂಕಕ್ಕೆ ಒಳಗಾಗುವುದು ಬೇಡ ಎಂದು ತಿಳಿಸಿದರು.ಚುನಾವಣಾ ಆಯೋಗ ಜೂ.೩೦ರಿಂದ ಮತಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿದ್ದು ಸಂವಿಧಾನದಲ್ಲಿ ನೀಡಿರುವ ಅವಕಾಶದ ಪ್ರಕಾರವೇ ಪಾರದರ್ಶಕ ಚುನಾವಣಾ ಪ್ರಕ್ರಿಯೆಗೆ ಅಗತ್ಯವಾದ ಆಯೋಗ ಪರಿಷ್ಕರಣೆ ಪ್ರಾರಂಭಿಸುತ್ತಿದೆ. ಇದು ಮೊದಲಿನಿಂದಲೂ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಎಸ್‌ಐಆರ್ ವಿರುದ್ಧವಾಗಿ ಕೆಲವರು ಸುಪ್ರೀಂ ಕೋರ್ಟ್‌ ಗೆ ಹೋಗಿದ್ದರೂ ಚುನಾವಣಾ ಆಯೋಗದ ಮತಪಟ್ಟಿ ಪರಿಷ್ಕರಣೆ ಕಾರ್ಯಕ್ರಮ ಸೂಕ್ತವಾಗಿದೆ, ಸಂವಿಧಾನಬದ್ದವಾಗಿದೆ ಎಂದು ತಿಳಿಸಿದರು. ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ ಈ ಬಾರಿಯ ಮುಂಗಾರು ಎಲ್‌ನಿನೋ ಫ್ಯಾಕ್ಟರ್‌ನ ಪರಿಣಾಮವಾಗಿ ಹೆಚ್ಚು ದಿನ ಮಳೆ ಬರುವುದಿಲ್ಲ. ಬಿಸಿ ಗಾಳಿ ಕೂಡ ಬೀಸಲಿದೆ ಎಂದಿದ್ದಾರೆ. ಆದ್ದರಿಂದ ರೈತರು ಮುಂಗಾರು ಮಳೆ ಬಂದ ಕೂಡಲೇ ಹೆಚ್ಚು ತಡಮಾಡದೇ ಬಿತ್ತನೆ ಪ್ರಾರಂಭಿಸಬೇಕು ಎಂದು ಮನವಿ ಮಾಡಿದರು.

ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಸ್ವಾಮಿ, ತಾಲೂಕು ಕಾರ್ಯದರ್ಶಿ ರಾಜಶೇಖರ್, ನಟರಾಜು, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.