ಆಲೂರು: ಮಕ್ಕಳ ಆರೋಗ್ಯ ದೃಷ್ಟಿಯಿಂದ ಪೋಷಕರು ಐದು ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ತಪ್ಪದೆ ಪಲ್ಸ್‌ ಪೋಲಿಯೋ ಹಾಕಿಸಬೇಕು ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ನಟರಾಜ್ ನಾಕಲಗೋಡು ತಿಳಿಸಿದರು.

ತಾಲೂಕಿನ ಕಣತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಪೋಲಿಯೋ ಲಸಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಭಾರತ ಪೋಲಿಯೋ ಮುಕ್ತ ದೇಶ ಎಂಬ ಕೀರ್ತಿ ಹೊತ್ತಿದೆ. ಕಳೆದ ವರ್ಷವಷ್ಟೇ ವಿಶ್ವ ಆರೋಗ್ಯ ಸಂಸ್ಥೆ ಇದನ್ನು ಅಧಿಕೃತವಾಗಿ ಘೋಷಿಸಿತ್ತು. ಕಾಯಿಲೆ ಬರುವ ಮುನ್ನವೇ ಎಚ್ಚರಿಕೆ ವಹಿಸಿದ್ದರ ಪರಿಣಾಮ ಭಾರತವು ಪೋಲಿಯೋ ಮುಕ್ತವಾಗಿದೆ. ಇದು ಹೀಗೆ ಮುಂದುವರಿಯಬೇಕಾದರೆ ಪೋಲಿಯೋ ಲಸಿಕೆಯನ್ನು ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಹಾಕಿಸಬೇಕು ಎಂದು ತಿಳಿಸಿದರು.ತಾಲೂಕು ಆರೋಗ್ಯಾಧಿಕಾರಿ ಡಾ. ನಿಸಾರ್‌ ಫಾತೀಮಾ ಮಾತನಾಡಿ, ಪೋಲಿಯೊ ಬಗ್ಗೆ ಜನರಲ್ಲಿ ಜಾಗೃತಿ ಬಂದಿದ್ದು, ಮಕ್ಕಳಲ್ಲಿ ಅಂತಹ ಪ್ರಕರಣ ಕಂಡು ಬಂದಿಲ್ಲ. ನೂರಕ್ಕೆ ನೂರರಷ್ಟು ಪೋಲೀಯೋ ಮುಕ್ತವಾಗಬೇಕು ಎಂಬುದು ನಮ್ಮ ಗುರಿಯಾಗಿದೆ, ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬಸ್‌ ನಿಲ್ದಾಣ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಅಂಗನವಾಡಿ ಶಿಕ್ಷಕಿಯರು ಹಾಗೂ ಮಹಿಳಾ ಆರೋಗ್ಯ ಸಹಾಯಕಿಯರು ಪಲ್ಸ್‌ ಪೋಲಿಯೋ ಲಸಿಕೆ ಹಾಕಿಸಲು ಜನತೆಗೆ ತಿಳಿವಳಿಕೆ ನೀಡಿದ್ದು ಜನರು ಉತ್ಸಾಹದಿಂದ ಲಸಿಕಾ ಕೇಂದ್ರಗಳಿಗೆ ಮಕ್ಕಳನ್ನು ಕರೆತಂದು ಲಸಿಕೆ ಹಾಕಿಸುತ್ತಿರುವುದು ಗಣನೀಯ ಪ್ರಗತಿ ಕಂಡುಬಂದಿದೆ. ಜನರು ಕೂಡ ನಮ್ಮೊಂದಿಗ ಕೈಜೋಡಿಸುವ ಮೂಲಕ ಮುಂದೆ ಯಾವ ಮಗುವು ಪೋಲಿಯೋದಿಂದ ವಂಚಿತರಾಗಿ ಅಂಗವಿಕಲರಾಗಿ ನರಳಬಾರದು ಎಂದು ಹೇಳಿದರು. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಕೆ. ಎಸ್ ಹರಿನಾಕ್ಷಿ, ಕಣತೂರು ಅಂಗನವಾಡಿ ಕಾರ್ಯಕರ್ತೆ ಎಂ.ಎನ್ ಹೇಮಾವತಿ, ಆಶಾ ಕಾರ್ಯಕರ್ತೆ ಹೇಮಾವತಿ, ಮೇಲ್ವಿಚಾರಕರು ರಾಜು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.