ಸಾರಾಂಶ
ಮೈಸೂರು : ನಗರದ ಜಲಪುರಿಯಲ್ಲಿರುವ ಎಸ್ಪಿ ಕಚೇರಿ ವೃತ್ತದಿಂದ ಮಹದೇವಪುರ ರಸ್ತೆಯ ಕಾಳಿಕಾಂಬ ದೇವಸ್ಥಾನದವರೆಗೆ ಹೈದರಾಲಿ ರಸ್ತೆ ವಿಸ್ತರಣೆಗಾಗಿ 40 ಹೆಚ್ಚೂ ಮರಗಳನ್ನು ಕಡಿದಿರುವ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ. ಮರಗಳ ಹನನಕ್ಕೆ ಪರಿಸರ ಪ್ರೇಮಿಗಳಿಂದ ಆಕ್ರೋಶ ವ್ಯಕ್ತವಾಗಿದೆ.
ಮೈಸೂರು ಮಹಾನಗರ ಪಾಲಿಕೆ ವತಿಯಿಂದ ರಸ್ತೆ ವಿಸ್ತರಣೆ ನಡೆಯುತ್ತಿದ್ದು, ಲೋಕೋಪಯೋಗಿ ಇಲಾಖೆಯು ಕಾಮಗಾರಿ ಉಸ್ತುವಾರಿ ಹೊತ್ತುಕೊಂಡಿದೆ. ಸುಮಾರು 30 ಮೀಟರ್ ಉದ್ದದ ರಸ್ತೆಯನ್ನು 50 ಅಡಿಯಿಂದ 100 ಅಡಿಗೆ ಪರಿವರ್ತನೆ ಮಾಡುವ ಸಲುವಾಗಿ, ರಸ್ತೆ ಬದಿಯಲ್ಲಿ ಬೆಳೆದಿದ್ದ ಮರಗಳನ್ನು ಕಡಿಯಲಾಗಿದೆ.
ಮರಗಳನ್ನು ಕಡಿಯುವ ಸಂದರ್ಭದಲ್ಲಿ ರಸ್ತೆಯ ಎರಡೂ ತುದಿಯಲ್ಲೂ ಬ್ಯಾರಿಕೇಡ್ ಗಳನ್ನು ಅಳವಡಿಸಿ, ವಾಹನಗಳ ಸಂಚಾರವನ್ನು ಬಂದ್ ಮಾಡಲಾಗಿತ್ತು. ಮರ ಕಡಿಯಲು ಗುತ್ತಿಗೆ ಪಡೆದಿದ್ದವರು ಬೆಳಗ್ಗೆ ಜೆಸಿಬಿ ಸೇರಿದಂತೆ ಮರ ಕತ್ತರಿಸುವ ಆಧುನಿಕ ಯಂತ್ರಗಳಿಂದ ಸಮರೋಪಾದಿಯಲ್ಲಿ ಮರಗಳನ್ನು ಕತ್ತರಿಸಿ ನೆಲಕ್ಕೆ ಉರುಳಿಸಿದರು. ಬಳಿಕ ರಂಬೆ-ಕೊಂಬೆಗಳನ್ನು ಬೇರ್ಪಡಿಸಿ, ದೊಡ್ಡ- ದೊಡ್ಡ ದಿಮ್ಮಿಗಳಾಗಿ ಮಾಡಿದರು.
ರಸ್ತೆಯ ಇಕ್ಕೆಲಗಳಲ್ಲಿ ಹಲವು ವರ್ಷಗಳಿಂದ ನೆರಳು ನೀಡುತ್ತಿದ್ದ, ಪಕ್ಷಿಗಳಿಗೆ ಆಶ್ರಯ ನೀಡಿದ್ದ ಹಾಗೂ ಎಲ್ಲದಕ್ಕಿಂತ ಮಿಗಿಲಾಗಿ ಶುದ್ಧ ಆಮ್ಲಜನಕವನ್ನು ನೀಡುತ್ತಿದ್ದ ಮರಗಳಿಗೆ ಕೊಡಲಿಪೆಟ್ಟು ನೀಡಲಾಗಿದೆ. ನಗರ ಪಾಲಿಕೆಯ ಈ ಕ್ರಮಕ್ಕೆ ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮರಗಳನ್ನು ಕಡಿಯಲು ಅನುಮತಿ ನೀಡಿರುವ ಅರಣ್ಯ ಇಲಾಖೆಯ ವಿರುದ್ಧವೂ ಕಿಡಿಕಾರಿದ್ದಾರೆ.
ನಗರದ ಎಸ್ಪಿ ಕಚೇರಿ ವೃತ್ತದಿಂದ ಕಾಳಿಕಾಂಬ ದೇವಸ್ಥಾನದವರೆಗೆ ರಸ್ತೆ ವಿಸ್ತರಣೆಗೆ ಸಂಬಂಧಿಸಿದಂತೆ ಮೈಸೂರು ಮಹಾನಗರ ಪಾಲಿಕೆಯು ಸಲ್ಲಿಸಿರುವ ಕೋರಿಕೆಯಂತೆ ಅರಣ್ಯ ಇಲಾಖೆಯು ರಸ್ತೆ ವಿಸ್ತರಣೆಗೆ ಅತ್ಯವಶ್ಯಕವಾದ 40 ಫೆಲ್ಟೋಫೋರಮ್ ಜಾತಿಯ ಮರಗಳ ತೆರವಿಗೆ ನಿಯಮಾನುಸಾರ ಅನುಮತಿ ನೀಡಲಾಗಿದೆ.
- ಡಾ.ಕೆ.ಎನ್. ಬಸವರಾಜ, ಡಿಸಿಎಫ್, ಮೈಸೂರು ಪ್ರಾದೇಶಿಕ ವಿಭಾಗ