ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಪಟ್ಟಣದ ಕಕ್ಕೆಹೊಳೆ ಬಳಿಯಿರುವ ಶ್ರೀ ಮುತ್ತಪ್ಪಸ್ವಾಮಿ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವವು ಮಾ.22 ರಿಂದ 24 ರವರೆಗೆ ಜರುಗಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಎನ್.ಡಿ.ವಿನೋದ್ ಕುಮಾರ್ ತಿಳಿಸಿದ್ದಾರೆ.22ರಂದು ಬೆಳಗ್ಗೆ ಗಣಪತಿ ಹೋಮ, ಶುದ್ದೀ ಪುಣ್ಯ ನಡೆಯಲಿದೆ. ನಂತರ ಧ್ವಜಾರೋಹಣ ನೆರವೇರಲಿದೆ. ಸಂಜೆ 6.30ಕ್ಕೆ ಕೊಳಪುರಂ ಮನಹಿಲ್ಲಂ ತಂತ್ರಿಗಳಾದ ಕೃಷ್ಣಕುಮಾರ್ ಅವರ ನೇತೃತ್ವದಲ್ಲಿ ವಿಶೇಷ ಆಶ್ಲೇಷ ಬಲಿ ಪೂಜೆ ನೆರವೇರಲಿದೆ. ಮಾ.23 ರ ಸೋಮವಾರದಂದು ಮಧ್ಯಾಹ್ನ 12.30 ಕ್ಕೆ ಜಾತ್ರಾ ಮಹೋತ್ಸವವನ್ನು ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಹಾಗೂ ಮಾಜಿ ಸಚಿವರಾದ ಅಪ್ಪಚ್ಚುರಂಜನ್ ಅವರುಗಳು ಉದ್ಘಾಟಿಸಲಿರುವರು. ಜಿಪಂ ಮಾಜಿ ಅಧ್ಯಕ್ಷ ವಿ.ಎಂ.ವಿಜಯನ್, ಉದ್ಯಮಿ ಬಿ.ಎಸ್.ಸುಂದರ್ ಪಾಲ್ಗೊಳ್ಳಲಿರುವರು.
ಮಧ್ಯಾಹ್ನ ಜಾತ್ರಾ ಉತ್ಸವಕ್ಕೆ ಚಾಲನೆ ದೊರೆತ ನಂತರ ಕ್ಷೇತ್ರದ ಪ್ರಧಾನ ಅರ್ಚಕರಿಂದ ಕಳಶ ಪೂಜೆ ನಂತರ ಅಪರಾಹ್ನ 3.30ಕ್ಕೆ ಶ್ರೀ ಮುತ್ತಪ್ಪ ದೇವರ ವೆಳ್ಳಾಟಂ ಆರಂಭವಾಗಲಿದೆ.ಸಂಜೆ 4.30ಕ್ಕೆ ಕೇರಳದ ಖ್ಯಾತ ಸಿಂಗಾರಿ ಮೇಳದೊಂದಿಗೆ ಕಳಶದ ಮೆರವಣಿಗೆ ನಡೆಯಲಿದೆ. ನಂತರ ಸಂಜೆ 6.30ಕ್ಕೆ ವಿಷ್ಣುಮೂರ್ತಿ ದೇವರ ವೆಳ್ಲಾಟಂ, ಕರಿಂಗುಟ್ಟಿ ಚಾತನ್ ದೇವರು, ಕಂಡಕರ್ಣ ದೇವರು, ಭಗವತಿದೇವಿ, ರಕ್ತ ಚಾಮುಂಡಿ, ಪೊಟ್ಟನ್ ದೇವರ ವೆಳ್ಳಾಟಂ ಜರುಗಲಿದೆ. ರಾತ್ರಿ 11.30ಕ್ಕೆ ದೇವರ ಕಳಿಕ್ಕಾಪಾಟ್ ನಡೆಯಲಿದೆ. ಸೋಮವಾರದಂದು ರಾತ್ರಿ ಭಕ್ತಾದಿಗಳಿಗೆ ಅನ್ನದಾನದ ವ್ಯವಸ್ಥೆ ಮಾಡಲಾಗಿದೆ.
ಮಂಗಳವಾರ ಬೆಳಗಿನ ಜಾವ ಭಗವತಿ ದೇವಿಯ ಕೋಲ ನಂತರ ಕ್ರಮವಾಗಿ ಕಂಡಕರ್ಣನ್, ಪೊಟ್ಟನ್, ಕರಿಂಗುಟ್ಟಿ ಚಾತನ್ ದೇವರ ಕೋಲ ಜರುಗಲಿದೆ. ಬೆಳಗಿನ ಜಾವ 4.30ಕ್ಕೆ ಪೊಟ್ಟನ್ ದೇವರು ಅಗ್ನಿಗೇರುವುದು. ನಂತರ ಶ್ರೀ ಮುತ್ತಪ್ಪನ್ ಮತ್ತು ತಿರುವಪ್ಪನ್ ದೇವರುಗಳ ಕೋಲಗಳು ನಡೆಯುತ್ತವೆ. ಬೆಳಗ್ಗೆ 7 ಗಂಟೆಯಿಂದ ರಕ್ತ ಚಾಮುಂಡಿದೇವಿಯ ಕೋಲ ನಂತರ ವಿಷ್ಣುಮೂರ್ತಿ ದೇವರ ಕೋಲ , ಬೆಳಗ್ಗೆ 10 ಗಂಟೆಗೆ ಕಂಡಕರ್ಣದೇವರ ಗುರು ಶ್ರೀ ದರ್ಪಣ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಗುಳಿಗ ದೇವರ ಕೋಲದ ನಂತರ ಗುಳಿಗ ದೇವರಿಗೆ ಬಲಿ ಅರ್ಪಣೆ ನಡೆಯಲಿದ್ದು, ಅಪರಾಹ್ನ 3 ಗಂಟೆಗೆ ಕೋಲಗಳ ಮುಕ್ತಾಯವಾಗಲಿದೆ ಎಂದು ಪ್ರಧಾನ ಕಾರ್ಯದರ್ಶಿ ಪ್ರಸನ್ನ ನಾಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.