ಉಡುಪಿ: ಪ್ರಕೃತಿಯ ಪರಿವೀಕ್ಷಣೆಯೇ ಎಲ್ಲ ಸಂಶೋಧನೆಗಳ ಮೂಲ ಹಾಗೂ ಕೃತಕ ಬುದ್ಧಿಮತ್ತೆಯ ಪ್ರಾಮಾಣಿಕತೆಯು ಚರ್ಚಾಸ್ಪದ ಎಂದು ಮೈಸೂರಿನ ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ಅಧೀಕ್ಷಕ ಡಾ. ಲಕ್ಷ್ಮೀನಾರಾಯಣ ಶೆಣೈ ಹೇಳಿದ್ದಾರೆ.

ಇಲ್ಲಿನ ಉದ್ಯಾವರದ ಎಸ್‌ಡಿಎಂ ಆಯುರ್ವೇದ ಕಾಲೇಜಿನಲ್ಲಿ ರಾಷ್ಟ್ರ ಮಟ್ಟದ ಸಂಶೋಧನಾ ವಿಚಾರ ಸಂಕಿರಣ ‘ಅನ್ವೇಷಣಾ-2026’ನ್ನು ಉದ್ಘಾಟಿಸಿ ಮಾತನಾಡಿದರು. ಮೈಸೂರಿನ ರಾಷ್ಟ್ರೀಯ ಎಂಜಿನಿಯರಿಂಗ್ ಸಂಸ್ಥೆಯ ಪ್ರಾಧ್ಯಾಪಕ ಡಾ. ಶ್ರೀನಾಥ್ ರಾಮ್ ಪುರೆ ಅವರು, ಇಂದು ವೈದ್ಯಕೀಯ ಹಾಗೂ ಮಾಹಿತಿ ತಂತ್ರಜ್ಞಾನದ ಸದ್ಬಳಕೆಯ ಅನಿವಾರ್ಯತೆಯನ್ನು ಒತ್ತಿ ಹೇಳಿದರು.

ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಮತಾ ಕೆ.ವಿ., ವೈದ್ಯಕೀಯ ಕ್ಷೇತ್ರಕ್ಕೆ ತಂತ್ರಜ್ಞಾನದ ಹಾಗೂ ಸಂಶೋಧನೆಯ ಅಗತ್ಯತೆಯೇ ಈ ವಿಚಾರ ಸಂಕಿರಣದ ಸಂಘಟನೆಯ ಮೂಲೋದ್ದೇಶ ಎಂದು ನುಡಿದರು. ಸಮ್ಮೇಳನದ ಮುಖ್ಯ ಸಂಘಟಕರಾದ ಡಾ. ಅಶೋಕ್ ಕುಮಾರ್ ಬಿ. ಎನ್. ಸ್ವಾಗತಿಸಿದರು. ಸಂಸ್ಥೆಯ ಬಾಲರೋಗ ವಿಭಾಗದ ಸಹ ಪ್ರಾಧ್ಯಾಪಕಿ ಸಹನಾ ಶಂಕರಿ ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ. ಕಾವ್ಯ ಕಾರ್ಯಕ್ರಮ ನಿರೂಪಿಸಿದರು.

ಮಣಿಪಾಲದ ಮುನಿಯಾಲ ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಡಾ. ಸತ್ಯನಾರಾಯಣ ಭಟ್, ಮೈಸೂರಿನ ಸರಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ಅಧೀಕ್ಷಕಿ ಡಾ. ಲಕ್ಷ್ಮೀನಾರಾಯಣ ಶೆಣೈ, ಹಾಸನದ ಎಸ್‌ಡಿಎಂ ಆಯುರ್ವೇದ ಕಾಲೇಜು ಹಾಸನದ ದ್ರವ್ಯಗುಣ ವಿಭಾಗದ ಮುಖ್ಯಸ್ಥ ಡಾ. ಪ್ರಕಾಶ್ ಎಲ್. ಹೆಗ್ಡೆ, ಸಂಸ್ಥೆಯ ಅಗದತಂತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ರವಿಕೃಷ್ಣ ಎಸ್. ಹಾಗೂ ಇಂಟೆಗ್ರೇಟೆಡ್ ಹೆಲ್ತ್ ಅಂಡ್ ಟ್ರಾನ್ಸಿಷನಲ್ ರಿಸರ್ಚ್ ವಿಭಾಗದ ಮುಖ್ಯಸ್ಥ ಡಾ. ಸಂದೇಶ್ ಕುಮಾರ್ ಸಂಪನ್ಮೂಲ ವ್ಯಕ್ತಿಗಳಾಗಿ ಉಪನ್ಯಾಸ ನೀಡಿದರು.