ಸಾರಾಂಶ
ಮೈಲಾರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಫೆ. 4 ರಥ ಸಪ್ತಮಿಯಂದು ಹಾಲು ಉಕ್ಕಿಸುವ ಮೂಲಕ 11 ದಿನಗಳ ಕಾಲ ಜರುಗುವ ಜಾತ್ರೆಗೆ ಚಾಲನೆ ನೀಡಲಾಯಿತು.
ಹೂವಿನಹಡಗಲಿ: ನಾಡಿನ ಐತಿಹಾಸಿಕ ಮೈಲಾರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಫೆ. 4 ರಥ ಸಪ್ತಮಿಯಂದು ಹಾಲು ಉಕ್ಕಿಸುವ ಮೂಲಕ 11 ದಿನಗಳ ಕಾಲ ಜರುಗುವ ಜಾತ್ರೆಗೆ ಚಾಲನೆ ನೀಡಲಾಯಿತು.
ಈ ಬಾರಿ ದೇವಸ್ಥಾನದ ಆವರಣದಲ್ಲಿ ಆಕಳ ಸಗಣಿಯ ಕುಳ್ಳಿನಿಂದ (ಬೆರಣಿ) ಕಾಯಿಸಿದ ಹಾಲು, ಪೂರ್ವ ಈಶಾನ್ಯ ದಿಕ್ಕಿನ ಕಡೆಗೆ ಹರಿದಿದ್ದು, ಕಾಯ್ದ ಹಾಲು ಯಾವ ದಿಕ್ಕಿನ ಕಡೆಗೆ ಹರಿಯುತ್ತದೆಯೋ, ಆ ದಿಕ್ಕಿನ ಪ್ರದೇಶದಲ್ಲಿ ಮಳೆ ಬೆಳೆ ಹುಲುಸಾಗುತ್ತದೆ ಎಂಬ ನಂಬಿಕೆ ಭಕ್ತರದ್ದು. ಕಳೆದ ಬಾರಿ ದಕ್ಷಿಣ ದಿಕ್ಕಿನ ಕುಬೇರನ ಮೂಲೆಯ ಕಡೆಗೆ ಹರಿದಿತ್ತು.ಫೆ.14 ರಂದು ಐತಿಹಾಸಿಕ ಪ್ರಸಿದ್ಧ ಮೈಲಾರಲಿಂಗೇಶ್ವರನ ಕಾರ್ಣಿಕ ನೆರವೇರಲಿದ್ದು ಲಕ್ಷಾಂತರ ಭಕ್ತರು ಸೇರಲಿದ್ದಾರೆ.
ದೇವಸ್ಥಾನದ ರಂಗ ಮಂಟಪದಲ್ಲಿ ದೇವಸ್ಥಾನದ ವಂಶ ಪಾರಂಪರ್ಯ ಧರ್ಮಕರ್ತ ಗುರು ವೆಂಕಪ್ಪಯ್ಯ ಒಡೆಯರ್, ದೇವಸ್ಥಾನದ ಅರ್ಚಕ ಪ್ರಮೋದ್ ಭಟ್ ಉಪಸ್ಥಿತರಿದ್ದರು. ಕಾರ್ಣಿಕ ನುಡಿಯಲು ಗೊರವಪ್ಪ ಏರುವ ಐತಿಹಾಸಿಕ ಬಿಲ್ಲಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಸ್ಥಾನದ ಬಾಬುದಾರರು, ಮೈಲಾರ ಗ್ರಾಮದ ಭಕ್ತರ ಸಮ್ಮುಖದಲ್ಲಿ ಧಾರ್ಮಿಕ ಸಂಪ್ರದಾಯದ ಪ್ರಕಾರ ಕಾರ್ಣಿಕ ನುಡಿಯುವ ಗೊರವಯ್ಯ ರಥಸಪ್ತಮಿ ದಿನದಿಂದ 11 ದಿನಗಳ ಕಾಲ ಉಪವಾಸ ವ್ರತ ಮಾಡುತ್ತಾನೆ. ಜತೆಗೆ ಭಂಡಾರದ ನೀರು ಮಾತ್ರ ಸೇವಿಸುತ್ತಾನೆ. ಸ್ವಾಮಿಯ ಪಲ್ಲಕಿಯ ಮೌನ ಸವಾರಿ ಉತ್ಸವ ಡೆಂಕಣ ಮರಡಿಗೆ ತೆರಳಿ 11 ದಿನಗಳ ಕಾಲ ಅಲ್ಲಿಯೇ ಇಡಲಾಗುತ್ತಿದೆ. ನಿತ್ಯ ದೇವಸ್ಥಾನದ ಅರ್ಚಕರು, ಡೆಂಕಣ ಮರಡಿಗೆ ದಿನಕ್ಕೆರಡು ಬಾರಿ ಪೂಜೆ ಸಲ್ಲಿಸುತ್ತಾರೆ. ಸಂಪ್ರದಾಯದಂತೆ ದೇವಸ್ಥಾನದಲ್ಲಿ ಹಾಕಲಾಗಿರುವ ಗಂಟೆಗಳನ್ನು ತೆಗೆಯಲಾಗುತ್ತದೆ. ಜತೆಗೆ ದೇವಸ್ಥಾನದಲ್ಲಿ ಯಾವುದೇ ಪೂಜೆ ಜರುಗುವುದಿಲ್ಲ. ಡೆಂಕಣ ಮರಡಿಯನ್ನು ಹಗಲು ರಾತ್ರಿ ಕಾಯುವ ಕಾಯಕದಲ್ಲಿ ಹರಕೆ ತೀರಿಸುವ ಭಕ್ತರಿಗೆ ಅಂಬಲಿ ಮಜ್ಜಿಗೆ, ಬೆಲ್ಲದ ಪಾನಕವನ್ನು ನೀಡಲಾಗುತ್ತಿದೆ. ಇಂದಿನಿಂದ 11 ದಿನಗಳ ಕಾಲ ಉಪವಾಸ ವ್ರತ ಮಾಡುತ್ತೇವೆ ಎಂದು ದೇವಸ್ಥಾನದ ಧರ್ಮಕರ್ತ ಗುರು ವೆಂಕಪ್ಪಯ್ಯ ಒಡೆಯರ್ ಹೇಳಿದರು.ಫೆ. 4ರಂದು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಂಪ್ರದಾಯದಂತೆ ಹಾಲು ಉಕ್ಕಿಸಲಾಯಿತು. ಈ ಧಾರ್ಮಿಕ ಕಾರ್ಯಕ್ಕೆ ಭಕ್ತರು ಅಕ್ಕಿ, ಬೆಲ್ಲ, ದವಸ, ಧ್ಯಾನಗಳನ್ನು ತಂದು ದೇವರಿಗೆ ಅರ್ಪಿಸುತ್ತಾರೆ. ಆಕಳು ಸಗಣಿಯಿಂದ ಮಾಡಿದ ಕುಳ್ಳುಗಳಿಂದ ದೇವರ ಸನ್ನಿಧಾನದಲ್ಲಿ ಹಾಲು ಕಾಯಿಸಲಾಯಿತು.
ಮೈಲಾರಲಿಂಗೇಶ್ವರ ದೇವಸ್ಥಾನದಿಂದ ಕೂಗಳತೆ ದೂರದ ಡೆಂಕಣ ಮರಡಿಗೆ, ದೇವಲೋಕದ 7 ಕೋಟಿ ದೇವಾನುದೇವತೆಗಳು ಮಾರು ವೇಷದಲ್ಲಿ ರಥಸಪ್ತಮಿ ದಿನವೇ ಬಂದಿರುತ್ತಾರೆ. 11 ದಿನಗಳ ಕಾಲ ಡೆಂಕಣ ಮರಡಿ ಪಕ್ಕದಲ್ಲಿರುವ ಅವ್ವನ ಮರಡಿ (ಗಂಗಿಮಾಳಮ್ಮ ಮರಡಿ) ಯಲ್ಲಿ ರಾಕ್ಷಸರೊಂದಿಗೆ ಕದನ ಮಾಡುವ ಮೈಲಾರಲಿಂಗ (ಶಿವ), ಗಂಗಿಮಾಳಮ್ಮ (ಪಾರ್ವತಿ) ಸೇರಿದಂತೆ 7 ಕೋಟಿ ದೇವಾನುದೇವತೆಗಳು, ಪೌರಾಣಿಕ ಹಿನ್ನೆಲೆಯಂತೆ ರಥಸಪ್ತಮಿಯ ದಿನದಂದು ಭಕ್ತರು, ನೈವೇದ್ಯಕ್ಕೆ ತರುವ ಸಜ್ಜೆ ಕಡಬು ಮತ್ತು ಗೊರವಯ್ಯನ ಬಳಿ ಇರುವ ಬಿಲ್ಲು, ಗುರುಗಳ ಕೈಯಲ್ಲಿ ಬತ್ತಳಿಕೆಗಳನ್ನು ಇಟ್ಟುಕೊಂಡು ಪರಸ್ಪರ ಹೊಡೆದಾಡಿಕೊಳ್ಳುವ, ಕಡುಬಿನ ಕಾಳಗೆ ಕೂಡಾ ಮಂಗಳವಾರ ರಾತ್ರಿ ದೇವಸ್ಥಾನದಿಂದ ಡೆಂಕಣ ಮರಡಿಗೆ ಹೋಗುವ ಸಂದರ್ಭದಲ್ಲಿ ನಡೆಯುತ್ತದೆ.ಈ ಸಂದರ್ಭದಲ್ಲಿ ದೇವಸ್ಥಾನದ ವಂಶ ಪಾರಂಪರ್ಯ ಕಾರ್ಯಕರ್ತ ಗುರು ವೆಂಕಪ್ಪಯ್ಯ ಒಡೆಯರ್, ಕಾರ್ಣಿಕ ನುಡಿಯುವ ಗೊರವಯ್ಯ, ಕಾರ್ಣಿಕದ ರಾಮಣ್ಣ, ಅರ್ಚಕ ಪ್ರಮೋಧ ಭಟ್, ದೇವಸ್ಥಾನದ ಇಒ ಹನುಮಂತಪ್ಪ ದೇವಸ್ಥಾನದ ಬಾಬುದಾರರು, ಸಾವಿರಾರು ಭಕ್ತರು ಆಗಮಿಸಿದ್ದರು.