ನವಲಗುಂದ:
ಮಹದಾಯಿ, ಕಳಸಾ-ಬಂಡೂರಿ ಜೋಡಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶುಕ್ರವಾರ ರೈತ ಹೋರಾಟಗಾರರು ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.ಮಹದಾಯಿ, ಕಳಸಾ-ಬಂಡೂರಿ ನ್ಯಾಯಾಧಿಕರಣದ ತೀರ್ಪಿನಂತೆ ಬಾಕಿ ಉಳಿದ ನಮ್ಮ ಪಾಲಿನ ನೀರಿನ ಹಕ್ಕು ಕೊಡಿಸಬೇಕು. ಸರ್ಕಾರಿ ವಕೀಲ ಮೋಹನ ಕಾತರಕಿ ಅವರು ಕಳಸಾ-ಬಂಡೂರಿಗೆ ಕಾನೂನಿನ ಅಡ್ಡಿಯಿಲ್ಲ ಎಂದು ಘೋಷಿಸಿದ್ದು ಅದರಂತೆ ಶೀಘ್ರ ಕಾಮಗಾರಿ ಆರಂಭಿಸಬೇಕೆಂದು ಒತ್ತಾಯಿಸಿದರು.
ರಾಜ್ಯ ನೀರಾವರಿ ಸಚಿವರು ಎತ್ತಿನಹೊಳೆ ಯೋಜನೆಯಲ್ಲಿ ಆಗಿದ್ದ ತೊಡಕನ್ನು ನಿವಾರಿಸಿದಂತೆ ಕಳಸಾ-ಬಂಡೂರಿ ಯೋಜನೆಗೆ ಎದುರಾಗಿರುವ ಅಡೆ-ತಡೆ ನಿವಾರಿಸಿ ಯೋಜನೆ ಸಾಕಾರಗೊಳಿಸಬೇಕೆಂದು ಆಗ್ರಹಿಸಿದರು.ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಬಿತ್ತಿದ್ದ ಬೆಳೆ ಕಮರಿದೆ. ಹೀಗಾಗಿ ತಾಲೂಕನ್ನು ಬರಪೀಡಿತವೆಂದು ಘೋಷಿಸಿ ಸೂಕ್ತ ಪರಿಹಾರ ನೀಡಬೇಕು. ಜತೆಗೆ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕೆಂದು ಮನವಿ ತಿಳಿಸಿದ್ದಾರೆ.
ಗುತ್ತಿಗೆದಾರ ಡಿ.ವೈ. ಉಪ್ಪಾರ ಮಾತನಾಡಿ, 2021-22ರಲ್ಲಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಕಾಲುವೆಗಳ ಅಭಿವೃದ್ಧಿಗೆ ಸಾವಿರಾರು ಕೋಟಿ ವ್ಯಯಿಸಲಾಗಿದೆ. ಆದರೂ ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲ. ಸಚಿವರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪುನಃ ಕಾಮಕಾರಿ ಆರಂಭಿಸಲು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.
ಈ ವೇಳೆ ರೈತ ಸಂಘದ ಅಧ್ಯಕ್ಷ ಯಲ್ಲಪ್ಪ ದಾಡಿಭಾವಿ, ಸುಭಾಸಗೌಡ ಪಾಟೀಲ, ಬಸನಗೌಡ ಫಕೀರಗೌಡ್ರ, ಬಾಂಬೆ ಮೇಸ್ತ್ರಿ, ಚಾಹುಸೇನಿ, ಭೀಮಪ್ಪ ಹಿರೇಗಣ್ಣವರ, ಕರಿಯಪ್ಪ ತಳವಾರ, ಯಲ್ಲಪ್ಪ ತಡಸಿ, ಮುರಗೆಪ್ಪ ಪಲ್ಲೇದ, ಗಂಗಪ್ಪ ಹಳ್ಳದ, ಗೋವಿಂದರಡ್ಡಿ ಮೊರಬದ, ರವಿ ತೋಟದ, ಉಳಿವೆಪ್ಪ ಉಳ್ಳಾಗಡ್ಡಿ, ಸಂಗಪ್ಪ ನಿಡವಣಿ ಸೇರಿದಂತೆ ಹಲವರಿದ್ದರು.