ಕನ್ನಡ ಪ್ರಭ ವಾರ್ತೆ ಮಳವಳ್ಳಿ
ಜಿಲ್ಲೆಯಲ್ಲಿ ಬೆಳೆದು ನಿಂತಿರುವ ಬೆಳೆಗಳಿಗೆ ಕೆಆರ್ಎಸ್ ಅಣೆಕಟ್ಟೆಯಿಂದ ನೀರು ಹರಿಸದ ರಾಜ್ಯ ಸರ್ಕಾರ ತಮಿಳುನಾಡಿಗೆ ಕದ್ದು ಮುಚ್ಚಿ ನೀರು ಬಿಡುವುದರ ಮೂಲಕ ಕಿವುಡುತನ ಪ್ರದರ್ಶಿಸುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕಿಡಿ ಕಾರಿದರು.ತಾಲೂಕಿನ ಚಿಕ್ಕಮುಲಗೂಡು ಗ್ರಾಮದಲ್ಲಿ ಜಮೀನುಗಳಲ್ಲಿ ಒಣಗುತ್ತಿರುವ ಕಬ್ಬು ಬೆಳೆಗಳನ್ನು ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ದಿನಗಳಲ್ಲಿ ಜಲಾಶಯದಿಂದ ನಾಲೆಗಳಿಗೆ ನೀರು ಬಿಡುಗಡೆ ಮಾಡದಿದ್ದರೆ ಬಿಜೆಪಿ ಪಕ್ಷದ ವತಿಯಿಂದ ಕೆಆರ್ಎಸ್ಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈಗಾಗಲೇ ಬೆಳೆದು ನಿಂತಿರುವ ಬೆಳೆಗಳು ನೀರಿಲ್ಲದೇ ಸಂಪೂರ್ಣ ನೆಲಕಚ್ಚಿದ ಪರಿಣಾಮ ಲಕ್ಷಾಂತರ ರು. ನಷ್ಟವನ್ನು ರೈತರು ಅನುಭವಿಸಿದರೆ. ರಾಜ್ಯ ಸರ್ಕಾರ ಅಧಿಕಾರಿಗಳಿಂದ ಸರ್ವೇ ನಡೆಸಿ ಬರ ಎಂದು ಘೋಷಣೆ ಮಾಡಬೇಕು. ಆ ನಂತರ ಕೇಂದ್ರದಿಂದ ಪರಿಹಾರ ಕೇಳಬೇಕು. ಅದನ್ನು ಬಿಟ್ಟು ಕೇಂದ್ರದ ಕಡೆ ಬೊಟ್ಟು ಮಾಡುವುದು ಸರಿಯಲ್ಲ. ೧೦ ಸಾವಿರ ಕೋಟಿ ರು. ಹಣವನ್ನು ಯಾವ ಆಧಾರದ ಮೇಲೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕೆಂದು ಪ್ರಶ್ನಿಸಿದರು.ಜಲಾಶಯ ನೀರಿಲ್ಲದ ಸಂದರ್ಭದಲ್ಲಿ ಕುಡಿಯುವ ನೀರನ್ನು ಯಾವ ರೀತಿ ಪೂರೈಕೆ ಮಾಡಬೇಕು, ತಮಿಳುನಾಡಿನವರು ನ್ಯಾಯಾಲಯಕ್ಕೆ ಹೋದರೆ ನ್ಯಾಯಾಲಯದಲ್ಲಿ ಅದನ್ನು ಸಮರ್ಥವಾಗಿ ಎದುರಿಸಲು ಏನು ಮಾಡಬೇಕೆಂದು ಚರ್ಚಿಸಲು ಕೂಡಲೇ ಸರ್ವಪಕ್ಷ ಕರೆಯಬೇಕು. ವಿಪಕ್ಷವನ್ನು ಬಿಟ್ಟು ನೀರಾವರಿ ಸಭೆ ನಡೆಸಬಾರದು. ಎಲ್ಲರನ್ನೂ ಆಹ್ವಾನ ಮಾಡಬೇಕೆಂದು ತಿಳಿಸಿದರು.
ಬಿಡದಿಯಲ್ಲಿ ರೈತರ ಭೂಮಿ-ಫಲವತ್ತತೆಯಿಂದ ಕೂಡಿದೆ. ತೆಂಗಿನ ಮರ, ಅಡಿಕೆ ಸೇರಿದಂತೆ ಅನೇಕ ಬೆಳೆಗಳು ಸಮೃದ್ಧಿಯಾಗಿ ಬೆಳೆದು ನಿಂತಿವೆ. ಈ ಸರ್ಕಾರ ರೈತರ ಜಮೀನನ್ನು ನುಂಗುವ ಕೆಲಸ ಮಾಡುತ್ತಿದೆ, ರಾಜ್ಯದಲ್ಲಿ ೫೦ರಿಂದ ೬೦ ಸಾವಿರ ಎಕರೆ ಭೂಮಿಯನ್ನು ವಶಕ್ಕೆ ಪಡೆಯಲು ರೈತರ ಮೇಲೆ ಸರ್ಕಾರ ದೌರ್ಜನ್ಯ ನಡೆಸುತ್ತಿದೆ ಎಂದು ದೂರಿದರು.
ಸರ್ಕಾರ ಮಂತ್ರಿಮಂಡಲ ವಿಸ್ತರಣೆಗಾಗಿ ಕಸರತ್ತು ಮುಂದುವರಿಸಿದರೆ. ಮಂತ್ರಿ ಸ್ಥಾನಕ್ಕಾಗಿ ಒಬ್ಬೊಬ್ಬರಿಗೆ ೧೦೦ ರಿಂದ ೧೫೦ ಕೋಟಿ ರು. ಫಿಕ್ಸ್ ಮಾಡಿದೆ. ರೈತರು ಬೆಳೆಗಳನ್ನು ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದರೆ ಇಲ್ಲಿನ ಶಾಸಕರು ಮಂತ್ರಿಗಿರಿಗಾಗಿ ಓಡಾಡುತ್ತಿದರೆ. ಸರ್ಕಾರ ಹಾಗೂ ಶಾಸಕರಿಗೆ ಜನರ ಹಿತ ಬೇಕಿಲ್ಲ ಎಂದು ವಿಷಾದಿಸಿದರು.
ಸ್ಥಳದಲ್ಲಿಯೇ ಇದ್ದ ತಹಸೀಲ್ದಾರ್ ಎಸ್.ವಿ.ಲೋಕೇಶ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶಾಂತರಾಜು, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಬಿ.ಸಂದೀಪ್ ಅವರಿಂದ ಬೆಳೆ ನಷ್ಟದ ಮಾಹಿತಿ ಪಡೆದುಕೊಂಡರು.ಇದೇ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಮಂಡಳಿ ಸದಸ್ಯ ಡಾ.ಸಿದ್ದರಾಮಯ್ಯ, ಬಿಜೆಪಿ ಜಿಲ್ಲಾ ಅಧ್ಯಕ್ಷ ಡಾ.ಇಂದ್ರೇಶ್, ಮುಖಂಡರಾದ ಇಂಡುವಾಳು ಸಚ್ಚಿದಾನಂದ, ಎಚ್.ಎಸ್.ಅಶೋಕ್ಕುಮಾರ್, ಎಸ್.ಪಿ.ಸ್ವಾಮಿ, ಶಕುಂತಲಾ ಮಲ್ಲಿಕ್, ಎಂ.ಎನ್.ಕೃಷ್ಣ, ಮಧು ಗಂಗಾಧರ್, ಕೆ.ಸಿ.ನಾಗೇಗೌಡ, ಕುಮಾರ್ ಇತರರಿದ್ದರು.