ಸಾರಾಂಶ
ಧಾರವಾಡ: ಕರ್ನಾಟಕ ರಾಜ್ಯದ ಪ್ರಮುಖ ಯೋಜನೆಗಳು ಎಲ್ಲ ವಲಯಗಳಲ್ಲಿ ಮುಂಚೂಣಿಯಲ್ಲಿದ್ದು, ಸಮಗ್ರ ಅಭಿವೃದ್ಧಿಗೆ ಪೂರಕವಾಗಿವೆ ಎಂದು ರಾಜ್ಯ ಹಣಕಾಸು ಇಲಾಖೆ ಕಾರ್ಯದರ್ಶಿ ವಿಶಾಲ್ ಆರ್. ಹೇಳಿದರು.
ಸೆಂಟರ್ ಫಾರ್ ಮಲ್ಟಿಡಿಸಿಪ್ಲೇನರಿ ಡೆವಲಪಮೆಂಟ್ ರಿಸರ್ಚ್ ಮತ್ತು ಸೆಂಟರ್ ಫಾರ್ ಏಜ್ಯುಕೇಶನಲ್ ಆಂಡ್ ಸೋಶಿಯಲ್ ಸೈನ್ಸ್ ಸ್ಟಡೀಸ್ ಸಹಯೋಗದಲ್ಲಿ ಓಸಿಯನ್ ಪರ್ಲ್ ದಲ್ಲಿ ಆಯೋಜಿಸಿದ ಎರಡು ದಿನಗಳ ಅಭಿವೃದ್ಧಿ ಸಮ್ಮೇಳನದಲ್ಲಿ ಬದಲಾದ ಭಾರತ ವಿಷಯದ ಕುರಿತು ಮಾತನಾಡಿದ ಅವರು, ಪ್ರಸ್ತುತ ಕರ್ನಾಟಕ ಉತ್ತಮ ತಲಾ ಆದಾಯ, ಜೀವನ ಶೈಲಿಯಿಂದ ಮುಂಚೂಣಿಯಲ್ಲಿದೆ. ಡಾ. ನಂಜುಂಡಪ್ಪ ಮತ್ತು ಪ್ರೊ. ಗೋವಿಂದರಾವ್ ನೀಡಿದ ವರದಿಗಳ ಅನುಗುಣವಾಗಿ ಪ್ರಾದೇಶಿಕ ಅಸಮತೋಲನ ತೊಡೆದು ಹಾಕಲು ಅನೇಕ ಯೋಜನೆ ರೂಪಿಸಲಾಗಿದೆ. ಜನರ ಕಲ್ಯಾಣಕ್ಕಾಗಿ ಉತ್ತಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗುತ್ತದೆ.ಸ್ಥಿರವಾದ ಆರ್ಥಿಕತೆ ಹೊಂದಲು ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಸಿ.ಎಂ.ಡಿ.ಆರ್.ಅಧ್ಯಕ್ಷ ಕೈಲಾಶಚಂದ್ರ ಶರ್ಮಾ ಮಾತನಾಡಿ, ಕಳೆದ ದಶಕದಿಂದ ಶಿಕ್ಷಣ ವಲಯದಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಆಗುತ್ತಿವೆ. ಪ್ರಮುಖವಾಗಿ ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯಿಂದ ಕೌಶಲ್ಯಯುತ ಶಿಕ್ಷಣವು ಉದ್ಯಮದ ಜತೆಗೆ ಹೊಸ ರೂಪ ನೀಡಿದೆ. ಜ್ಞಾನ ಆಧಾರಿತ ಶಿಕ್ಷಣ ನೀಡಲು ಬಹು ಶಿಸ್ತಿಯ ವ್ಯವಸ್ಥೆ ಬಹಳ ಉಪಯುಕ್ತವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸಿ.ಎಂ.ಡಿ.ಆರ್.ವತಿಯಿಂದ ಹೊರತರಲಾದ ನಿಯತಕಾಲಿಕೆ ಬಿಡುಗಡೆ ಮಾಡಲಾಯಿತು. ಭಾರತ ಜ್ಞಾನ ವ್ಯವಸ್ಥೆ ಎಂಬ ವಿಷಯದ ಕುರಿತು ಆಯೋಜಿಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.ಐಐಎಂ ನಾಗ್ಪುರ ನಿರ್ದೇಶಕ ಪ್ರೊ.ಭೀಮರಾಯ ಮೇತ್ರಿ, ಟೋಯೊಟಾ ಕಂಪನಿ ಸಲಹೆಗಾರ ಪರಶುರಾಮನ್, ನಿಟ್ಟೆ ಶಿಕ್ಷಣ ಸಂಸ್ಥೆಯ ಡಾ.ಸಂದೀಪ್ ಶಾಸ್ತ್ರೀ, ಬೆಂಗಳೂರು ವಿವಿ ಡಾ. ಎಸ್. ಆರ್.ಕೇಶವ, ಅರ್ಥಶಾಸ್ತ್ರಜ್ಞ ಡಾ. ಚರಣ್ ಸಿಂಗ್, ಗದಗ ಕೆ.ಎಸ್.ಅರ್.ಡಿ.ಪಿ ಕುಲಪತಿ ಪ್ರೊ.ವಿಷ್ಣುಕಾಂತ್ ಎಸ್. ಚಿಟಪಲ್ಲಿ, ಹೈದರಾಬಾದ್ ವಿಶ್ವವಿದ್ಯಾಲಯ ಕುಲಪತಿ ಡಾ.ಬಿ.ಜೆ. ರಾವ್ ಸಂವಾದದಲ್ಲಿ ಭಾಗವಹಿಸಿದ್ದರು.