ಬೆಂಗಳೂರು : ಮೊದಲ ಹಂತದ ಸಂಪುಟ ರಚನೆ ಹಾಗೂ ವಿಧಾನ ಪರಿಷತ್ ಚುನಾವಣೆಯಲ್ಲಿ ಪ್ರಬಲ ಲಿಂಗಾಯತ ಒಳ ಪಂಗಡಗಳಾದ ಪಂಚಮಸಾಲಿ, ಗಾಣಿಗ ಹಾಗೂ ರೆಡ್ಡಿ ಲಿಂಗಾಯತರಿಗೆ ಪ್ರಾಶಸ್ತ್ಯ ನೀಡದಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಮೊದಲ ಹಂತದ ಸಂಪುಟ ರಚನೆ ವೇಳೆ ಮೂವರಿಗೆ ಅವಕಾಶ ನೀಡಿದ್ದು, ಕೂಡು ಒಕ್ಕಲಿಗ ಲಿಂಗಾಯತರಾದ ಎಂ.ಬಿ.ಪಾಟೀಲ್, ಆದಿ ಲಿಂಗಾಯತ ಸಮುದಾಯದಿಂದ ಶರಣ್ಪ್ರಕಾಶ್ ಪಾಟೀಲ್, ವೀರಶೈವ ಲಿಂಗಾಯತರಿಂದ ಈಶ್ವರ್ ಖಂಡ್ರೆಗೆ ಅವರಿಗೆ ಅವಕಾಶ ನೀಡಲಾಗಿದೆ.
ಇನ್ನು ಏಳು ವಿಧಾನಪರಿಷತ್ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಐದು ಅಭ್ಯರ್ಥಿಗಳಿಗೆ ಅವಕಾಶ ನೀಡಿ ಕಾಂಗ್ರೆಸ್ ಗೆಲ್ಲಿಸಿಕೊಂಡಿದೆ. ಇದರಲ್ಲಿ ಲಿಂಗಾಯತರಿಗೆ ಅವಕಾಶವನ್ನೇ ನೀಡಿಲ್ಲ. ಇನ್ನು ಮೊದಲ ಹಂತದ ಸಂಪುಟ ರಚನೆ ವೇಳೆ ಜನಸಂಖ್ಯೆ ಹಾಗೂ ಪ್ರಭಾವದಲ್ಲಿ ಗಮನಾರ್ಹ ಸ್ಥಾನದಲ್ಲಿರುವ ಪಂಚಮಸಾಲಿ ಲಿಂಗಾಯತರಿಗೆ ಅವಕಾಶ ನೀಡಿಲ್ಲ. ಜತೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಭಾವ ಹೊಂದಿರುವ ಗಾಣಿಗ ಹಾಗೂ ರೆಡ್ಡಿ ಲಿಂಗಾಯತರಿಗೆ ಅವಕಾಶ ನೀಡಿಲ್ಲ.
ಪಂಚಮಸಾಲಿ ಸಮುದಾಯಕ್ಕೆ ಪ್ರಾತಿನಿಧ್ಯ ನೀಡದೇ ಇರುವುದು ಅಸಮಾಧಾನಕ್ಕೆ ಕಾರಣ
ಉತ್ತರ ಕರ್ನಾಟಕದಲ್ಲಿ ಪಂಚಮಸಾಲಿ, ಗಾಣಿಗ ಹಾಗೂ ರೆಡ್ಡಿ ಲಿಂಗಾಯತರ ಪ್ರಬಲ ಲಿಂಗಾಯತ ಒಳ ಪಂಗಡಗಳು. ಈಗ ಸಚಿವ ಸ್ಥಾನ ಗಿಟ್ಟಿಸಿರುವವರಲ್ಲಿ ಪ್ರಭಾವಿಗಳ ಶಿಪಾರಸು ಹಾಗೂ ಸಂಪನ್ಮೂಲ ಬಲಾಢ್ಯರು ಎಂಬ ಕಾರಣಕ್ಕೆ ದೊರಕಿದೆ. ಪ್ರಭಾವಿ ಒಳ ಪಂಗಡ ಅದರಲ್ಲೂ ಪಂಚಮಸಾಲಿ ಸಮುದಾಯಕ್ಕೆ ಇನ್ನೂ ಪ್ರಾತಿನಿಧ್ಯ ನೀಡದೇ ಇರುವುದು ಆ ಸಮುದಾಯದ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಬಿಜೆಪಿ ಪಕ್ಷ ಸಾಮಾನ್ಯವಾಗಿ ಪಂಚಮಸಾಲಿ ಹಾಗೂ ಗಾಣಿಗ ಒಕ್ಕಲಿಗರಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತದೆ. ಆದರೆ, ಕಾಂಗ್ರೆಸ್ ಈ ಒಳಪಂಗಡಗಳನ್ನು ಕಡೆಗಣಿಸುತ್ತಿದೆ ಎಂಬ ಅನಿಸಿಕೆ ಸಮುದಾಯದಲ್ಲಿ ಮೂಡಿದರೆ ಅದು ಪಕ್ಷಕ್ಕೆ ಹಾನಿಯುಂಟುಮಾಡುವ ಸಾಧ್ಯತೆ ಹೆಚ್ಚು.
ಶಿವಾನಂದ ಪಾಟೀಲ್ ಸಚಿವಗಿರಿಗೆ ಆಗ್ರಹ
ಹೀಗಾಗಿ ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲಿ ಪಂಚಮಸಾಲಿ ಲಿಂಗಾಯತರಲ್ಲಿ ಶಿವಾನಂದ ಪಾಟೀಲ್ ಅವರ ಹಿರಿಯ ನಾಯಕರನ್ನು ಪರಿಗಣಿಸಲೇಬೇಕು ಎಂಬ ಆಗ್ರಹ ಕೇಳಿ ಬಂದಿದೆ. ಇನ್ನು ಗಾಣಿಗರ ಪೈಕಿ ಲಕ್ಷ್ಮಣಸವದಿ, ಬಿ.ಆರ್. ಪಾಟೀಲ್, ಬಸವರಾಜ ರಾಯರೆಡ್ಡಿ, ರೆಡ್ಡಿ ಲಿಂಗಾಯತರ ಪೈಕಿ ಎಚ್.ಕೆ.ಪಾಟೀಲ್ ಸೇರಿ ವಿವಿಧ ಆಕಾಂಕ್ಷಿಗಳ ಪರ ದೊಡ್ಡಮಟ್ಟದ ಆಗ್ರಹ ಕೇಳಿ ಬಂದಿದೆ.
ಹೀಗಾಗಿ ಎರಡನೇ ಹಂತದ ಸಂಪುಟ ರಚನೆ ವೇಳೆ ಕಾಂಗ್ರೆಸ್ ಪಂಚಮಸಾಲಿ, ಗಾಣಿಗ ಹಾಗೂ ರೆಡ್ಡಿ ಲಿಂಗಾಯತರಿಗೆ ಅವಕಾಶ ಕಲ್ಪಿಸಬೇಕಾದ ಒತ್ತಡಕ್ಕೆ ಸಿಲುಕಿದೆ. ಇಲ್ಲದಿದ್ದರೆ ಪ್ರಬಲ ಲಿಂಗಾಯತ ಸಮುದಾಯಗಳ ವಿರೋಧ ಕಟ್ಟಿಕೊಳ್ಳುವ ಆತಂಕ ಕಾಂಗ್ರೆಸ್ ವಲಯದಲ್ಲಿ ವ್ಯಕ್ತವಾಗಿದೆ.
