ರಾಜ್ಯದ ತೆರಿಗೆ ಹಣ ಬಿಹಾರ ಚುನಾವಣೆ, ಎಐಸಿಸಿಗೆ

| Published : Jul 10 2025, 12:48 AM IST

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಲಕ್ಷ ಕೋಟಿ ಬಜೆಟ್ ಮಂಡಿಸಿದ್ದಾರೆ. ಬೆಲೆ ಏರಿಕೆಯನ್ನೂ ಮಾಡಿದ್ದರಿಂದ ರಾಜ್ಯದಲ್ಲಿ ತೆರಿಗೆ ಹಣ ಸಾಕಷ್ಟುಸಂಗ್ರಹವಾಗಿದೆ. ಆದಾಯವು ಹೆಚ್ಚಿದೆ. ಬಿಹಾರ ಚುನಾವಣೆ ಮತ್ತು ಎಐಸಿಸಿಗೆ ರಾಜ್ಯದ ಹಣ ಹರಿದು ಹೋಗುತ್ತಿರುವುದರಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎಂದು ಬಿಜೆಪಿ ಮುಖಂಡ ಹಾಗೂ ನಿವೃತ್ತ ಎಡಿಜಿಪಿ ಭಾಸ್ಕರ ರಾವ್‌ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಲಕ್ಷ ಕೋಟಿ ಬಜೆಟ್ ಮಂಡಿಸಿದ್ದಾರೆ. ಬೆಲೆ ಏರಿಕೆಯನ್ನೂ ಮಾಡಿದ್ದರಿಂದ ರಾಜ್ಯದಲ್ಲಿ ತೆರಿಗೆ ಹಣ ಸಾಕಷ್ಟು

ಸಂಗ್ರಹವಾಗಿದೆ. ಆದಾಯವು ಹೆಚ್ಚಿದೆ. ಬಿಹಾರ ಚುನಾವಣೆ ಮತ್ತು ಎಐಸಿಸಿಗೆ ರಾಜ್ಯದ ಹಣ ಹರಿದು ಹೋಗುತ್ತಿರುವುದರಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎಂದು ಬಿಜೆಪಿ ಮುಖಂಡ ಹಾಗೂ ನಿವೃತ್ತ ಎಡಿಜಿಪಿ ಭಾಸ್ಕರ ರಾವ್‌ ಆರೋಪಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗೆ ₹55,000 ಕೋಟಿ ತೆಗೆದಿರಿಸಿದ್ದಾರೆ. ಅದನ್ನೂ ಸರಿಯಾಗಿ ಪೂರೈಕೆ ಮಾಡುತ್ತಿಲ್ಲ. ಸಾರ್ವಜನಿಕರ ತೆರಿಗೆ ಹಣದಲ್ಲಿ ಸಾಕಷ್ಟು ಆದಾಯ ಸಂಗ್ರಹವಾಗಿದೆ. ಈ ಹಿನ್ನೆಲೆಯಲ್ಲಿ ಗ್ಯಾರಂಟಿಯಿಂದ ಕುಂಠಿತ ಎನ್ನುವುದು ತಪ್ಪು. ತೆರಿಗೆ ಹಣ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.33 ಪದಾರ್ಥಗಳ, ಸೇವೆಗಳ, ವಿದ್ಯುತ್, ಕೆಎಸ್‌ಆರ್‌ಟಿಸಿ, ಹಾಲು ಇತರೆ ಬೆಲೆ ಏರಿಕೆಯಾಗಿದೆ. ಪೆಟ್ರೋಲ್ ಮೇಲೆ ತೆರಿಗೆ ಹೆಚ್ಚಳ ಮಾಡಿದ್ದಾರೆ. ಆದಾಯ ಹೆಚ್ಚಳವಾಗಿದ್ದರೂ ಕನ್ನಡಿಗರಿಗೆ ಕೊಡುಗೆ ಇಲ್ಲದಂತಾಗಿದೆ. ಬಿಹಾರ ಸೇರಿದಂತೆ ಬೇರೆ ರಾಜ್ಯಗಳ ಚುನಾವಣೆಗೆ ಹಾಗೂ ಎಐಸಿಸಿಗೆ ಇಲ್ಲಿಯ ದುಡ್ಡು ಹರಿದು ಹೋಗುತ್ತಿದೆ. ಆದ್ದರಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಆರೋಪಿಸಿದರು.

ಗ್ಯಾರಂಟಿ ಯೋಜನೆಗಳಿಂದ ದುಡ್ಡು ಪೋಲಾಗುತ್ತಿದೆ ಎಂದು ಹೇಳುವುದು ತಪ್ಪು. ವಾಲ್ಮೀಕಿ ಸೇರಿದಂತೆ ಅನೇಕ ಹಗರಣಗಳಾಗಿದ್ದು ಯಾರ ಮೇಲೂ ಕ್ರಮಗಳನ್ನು ತೆಗೆದುಕೊಂಡಿಲ್ಲ. ಮುಖ್ಯಮಂತ್ರಿಗಳು ಗೊಂದಲದಲ್ಲಿದ್ದು ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳಲು ಹಿಂಜರಿಯುತ್ತಿದ್ದಾರೆ. ಆಡಳಿತದ ಮೇಲೆ ಹಿಡಿತ ಮತ್ತು ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ. ಕಾಲ್ತುಳಿತ ಪ್ರಕರಣದಲ್ಲಿ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದು ಉದ್ಧಟತನ. ಕುರ್ಚಿ ಬದಲಾವಣೆಯ ಭಯದಲ್ಲಿದ್ದಾರೆ ಎಂದರು.ಬೆಂಗಳೂರಿನಲ್ಲಿಯೂ ಸಂಪೂರ್ಣ ವ್ಯವಸ್ಥೆ ಹದಿಗೆಟ್ಟಿದ್ದು ಮಳೆಗಾಲವನ್ನು ಸರಿಯಾಗಿ ನಿಭಾಯಿಸುವುದಕ್ಕೆ ಆಗಿಲ್ಲ. ಜಲಜೀವನ್ ಮಿಷನ್ ಅನುಷ್ಠಾನದಲ್ಲಿ ಎಡವಿದ್ದಾರೆ. ರಾಜ್ಯದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಬಸ್‌ಗಳು ಕಡಿಮೆಯಾಗಿವೆ. ರೈತರು ಸೇರಿದಂತೆ ಯಾರಿಗೂ ನ್ಯಾಯ ದೊರೆಯುತ್ತಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಸಚಿವ ಪರಮೇಶ್ವರ ಇಲಾಖೆ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದಾರೆ. ಯಾವುದೇ ರೀತಿಯ ನಾಯಕತ್ವ ನಿಭಾಯಿಸುವುದಕ್ಕೆ ಆಗುತ್ತಿಲ್ಲ. ಪೊಲೀಸರೆಂದರೆ ಭಯ ಮತ್ತು ಗೌರವ ಇಲ್ಲದಂತಾಗಿದೆ ಎಂದರು.