ಕನ್ನಡಪ್ರಭ ವಾರ್ತೆ, ತುಮಕೂರುಈಡಿಗ ಸಮಾಜದ ಉನ್ನತ ಸ್ಥಾನದಲ್ಲಿ ಇರುವ ವ್ಯಕ್ತಿಗಳು ಸ್ವಾರ್ಥ ಚಿಂತೆಯನ್ನು ಬಿಟ್ಟು ಸಮಾಜಮುಖಿಯಾಗಿ ಸೇವಾ ಪ್ರವೃತ್ತರಾಗಬೇಕು. ಸಮಾಜದ ದುರ್ಬಲರಿಗೆ ಶಕ್ತಿ ತುಂಬುವ ಪ್ರಯತ್ನ ಮಾಡಬೇಕು ಎಂದು ಅನಿವಾರ್ಯ ಎಂದು ಸೋಲೂರಿನ ಆರ್ಯ ಈಡಿಗ ಮಹಾಸಂಸ್ಥಾನ ಮಠದ ವಿಖ್ಯಾತಾನಂದ ಸ್ವಾಮೀಜಿ ಸಲಹೆ ಮಾಡಿದರು.ನಗರದಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ರಾಜ್ಯ ಮತ್ತು ಜಿಲ್ಲೆಯ ಪದಾಧಿಕಾರಿಗಳ ಚಿಂತನಾ, ನಾಯಕತ್ವ ಶಿಬಿರದಲ್ಲಿ ಮಾತನಾಡಿದ ಸ್ವಾಮೀಜಿ, ಈಡಿಗ ಸಮಾಜ ಒಗಟ್ಟಾಗಬೇಕು, ಸಮಾಜದವರು ವೈಮನಸ್ಯಗಳನ್ನು ದೂರ ಮಾಡಿ ಸಮಾಜದ ಹಿತಕ್ಕಾಗಿ ಒಂದಾಗಬೇಕು. ಸಂಘಟಿತರಾದಾಗ ಮಾತ್ರ ನಾವು ಏನನ್ನಾದರೂ ಸಾಧಿಸಲು ಸಾಧ್ಯಎಂದು ಹೇಳಿದರು. ನೂತನವಾಗಿ ಈಡಿಗ ಮಹಾಮಂಡಳಿಯ ರಾಜ್ಯದ ಅಧ್ಯಕ್ಷರು ಮತ್ತು 24 ಜಿಲ್ಲಾ ಅಧ್ಯಕ್ಷರ ಆಯ್ಕೆ ಆಗಬೇಕಾಗಿದೆ.ಮತ್ತು ರಾಷ್ಟ್ರೀಯ ಸಮಿತಿಯಿಂದ ರಾಜ್ಯದಲ್ಲಿ ರಚನೆಯಾಗುವ ಸಮಿತಿ ಸಮಾಜದ ಸಂಘಟನೆಗೆ ಶ್ರಮಿಸಬೇಕು.ಸಂಘದ ಸದಸ್ಯತ್ವ ನೋಂದಣಿ ಕಾರ್ಯ ಆಗಬೇಕು, ಎಲ್ಲರನ್ನೂ ಸಂಘದ ಒಳಗೆ ತರುವ ಪ್ರಯತ್ನ ಮಾಡಬೇಕು. ಈಡಿಗ ಮಹಾಮಂಡಳಿ ಸಂಘಟನೆಯು ರಾಜ್ಯದ ಎಲ್ಲಾ ತಾಲೂಕು, ಗ್ರಾಮಮಟ್ಟ ತಲುಪಿದರೆ ಸಮಾಜ ಸಂಘಟನೆಗೆ ಶಕ್ತಿ ಬರುತ್ತದೆ ಎಂದು ಹೇಳಿದ ವಿಖ್ಯಾನಂದ ಸ್ವಾಮೀಜಿ, ನಾರಾಯಣ ಗುರು ಕೋ-ಆಪರೇಟಿವ್ ಸೊಸೈಟಿ ಆರಂಭಿಸುವ ಬಗ್ಗೆ ತಿಳಿಸಿದರು.ಮುಂದಿನ ದಿನಗಳಲ್ಲಿ ಪ್ರತಿ ಜಿಲ್ಲೆಯಲ್ಲೂ ಚಿಂತನ ಶಿಬಿರಗಳು, ಮಹಾ ಮಂಡಳಿಯ ಮಹಿಳಾ ಪದಾಧಿಕಾರಿಗಳ ಶಿಬಿರವನ್ನು ಆಯೋಜಿಸಬೇಕು.ಆಗಸ್ಟ್ ತಿಂಗಳಲ್ಲಿ ಸಿಗಂಧೂರು ದೇವಸ್ಥಾನದ ಆವರಣದಲ್ಲಿ ಚಿಂತನಾ ಸಭೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಕಲಬುರ್ಗಿ ಜಿಲ್ಲೆಯ ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಡಾ.ಪ್ರಣವಾನಂದ ಸ್ವಾಮೀಜಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಆಗಸ್ಟ್ 16 ರಿಂದ ಪ್ರಣವಾನಂದ ಸ್ವಾಮಿಗಳ ನೇತೃತ್ವದಲ್ಲಿ ಶಿವಗಿರಿ ಮತ್ತು ಶಬರಿಮಲೆ ತೀರ್ಥಯಾತ್ರೆ ಕೈಗೊಳ್ಳಲು ತೀರ್ಮಾನಿಸಲಾಯಿತು. ರಾಜ್ಯ ಪ್ರಧಾನ ಕಾರ್ಯದರ್ಶಿ ಹನುಮಂತರಾಜು, ಮುಖಂಡರಾದ ತಿಪ್ಪೆಸ್ವಾಮಿ, ಮಂಚೆ ಗೌಡ, ಮಣಿಕಂಠ, ಯಶೋದಮ್ಮ, ಸೇರಿದಂತೆ ಹಲವು ಪದಾಧಿಕಾರಿಗಳು ಭಾಗವಹಿಸಿದ್ದರು.