ಕನ್ನಡಪ್ರಭ ವಾರ್ತೆ ಮಂಡ್ಯ
ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿಯ ೨೫ನೇ ವರ್ಷದ ಬೆಳ್ಳಿಹಬ್ಬದ ಅಂಗವಾಗಿ ಶಾಲೆಗೊಂದು ಸುಗಮ ಸಂಗೀತ ಕಾರ್ಯಕ್ರಮ ಸುಮಧುರ ಹಾಡುಗಳೊಂದಿಗೆ ಮಧುರವಾಗಿ ಮೂಡಿಬಂದಿತು.ವಿವಿಧ ಶಾಲೆಗಳ ಪ್ರತಿಭಾವಂತ ಗಾಯಕರಾದ ಕರಣ್ವೀರ್ ಗಹನಗೌಡ, ವಂದನ, ವಿ.ಆಧ್ಯ, ಎಂ.ಮೌಲಶ್ರೀ ಮತ್ತು ಪ್ರತಿಭಾಂಜಲಿ ಡೇವಿಡ್ ಇವರು ಭಾವಗೀತೆ, ಚಿತ್ರಗೀತೆ, ಸುಗಮಸಂಗೀತ, ಕುವೆಂಪು, ಪುತಿನ, ಕೆ.ಎಸ್.ನರಸಿಂಹಸ್ವಾಮಿ, ಎಚ್.ಎಸ್.ವೆಂಕಟೇಶಮೂರ್ತಿ, ಕಾವ್ಯಶ್ರೀ ರಚಿತ ಗೀತೆಗಳನ್ನು ಹಾಡಿ ರಂಜಿಸಿದರು.
ನಗರದ ಟ್ವಿಂಕಲ್ ಯುನೈಟೆಡ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಪ್ರತಿಭಾಂಜಲಿ ಸುಗಮ ಸಂಗೀತ ಆಕಾಡೆಮಿ, ಟಿಂಕಲ್ ಯುನೈಟೆಡ್ ಪಬ್ಲಿಕ್ ಸ್ಕೂಲ್ ಸಹಯೋಗದಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮವನ್ನು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಉದ್ಘಾಟಿಸಿ ಮಾತನಾಡಿದರು.ಪ್ರಸ್ತುತ ವಿದ್ಯಾರ್ಥಿಗಳು ಓದಿನ ಜೊತೆಯಲ್ಲೇ ಸಂಗೀತ, ನೃತ್ಯ, ಕ್ರೀಡೆಯಂತಹ ಸೃಜನಾತಕ್ಮ ಪ್ರೌಢಿಮೆಯನ್ನು ಮೈಗೂಡಿಸಿಕೊಳ್ಳಬೇಕು.
ನಮ್ಮ ಮನಸ್ಸುಗಳನ್ನು ಕಟ್ಟುವುದು ಪಠ್ಯಗಳಲ್ಲ, ವೃತ್ತಿಗೆ ಪಠ್ಯಗಳು ಬೇಕು, ಪ್ರವೃತ್ತಿಯೂ ಅತ್ಯವಶ್ಯಕ, ಸೃಜನಾತ್ಮಕ ಕಲೆಗ ಮನಸ್ಸಿಗೆ ಸಂತೋಷ, ಉಲ್ಲಾಸವನ್ನು ನೀಡುತ್ತವೆ ಎಂದರು.
ವಿದ್ಯಾರ್ಥಿಗಳಿಗೆ ಬೌದ್ದಿಕ ಮತ್ತು ಭೌತಿಕ ಬೆಳವಣಿಗೆ ಬಹಳ ಅವಶ್ಯ, ಬುದ್ದಿ ಮತ್ತು ಮನಸ್ಸನ್ನು ವಿಕಾಸಗೊಳಿಸುವ ಪ್ರವೃತ್ತಿಗಳನ್ನು ಮೈಗೂಡಿಸಿಕೊಂಡಾಗ ಬದುಕನ್ನು ರೂಪಿಸಿಕೊಳ್ಳಬಹುದು. ನೆಮ್ಮದಿಯಿಂದ ಸಂಸ್ಕೃತಿ, ವಿನಯ, ಏಕಾಗ್ರತೆ, ತಾಳ್ಮೆಯನ್ನು ಕಲಿಯಬೇಕು ಎಂದರು.
ಆಕಾಡೆಮಿ ಅಧ್ಯಕ್ಷ ಪ್ರತಿಭಾಂಜಲಿ ಪ್ರೊ.ಡೇವಿಡ್ ಮಾತನಾಡಿ, ಇತ್ತೀಚಿನ ವಿದ್ಯಾರ್ಥಿಗಳು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಲು ನಿರಂತರವಾಗಿ ಸಂಗೀತಾಭ್ಯಾಸ ಮಾಡಬೇಕು. ಸುಗಮಸಂಗೀತ ಕೌಶಲ್ಯತೆಯನ್ನು ಬೆಳೆಸುತ್ತದೆ. ಸುಗಮ ಸಂಗೀತ ಕ್ಷೇತ್ರದಲ್ಲಿ ಬಾಳಪ್ಪ ಹುಕ್ಕೇರಿ, ಕಾಳಿಂಗರಾವ್, ಮೈಸೂರು ಅನಂತಸ್ವಾಮಿ, ಸಿ.ಅಶ್ವಥ್ ಇವರ ಸಾಧನೆ ದೊಡ್ಡದು ಎಂದು ನುಡಿದರು.ಯುವಗಾಯಕರು, ಸಂಗೀತಗಾರರು ಸುಗಮಸಂಗೀತದ ಬೆಳೆವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ, ಸಂಗೀತ ಕ್ಷೇತ್ರಕ್ಕೆ ಶತಮಾನೋತ್ಸವದ ಸಂಭ್ರಮದ ಹೊತ್ತಿನಲ್ಲಿ ವಿವಿಧ ಶಾಲಾ ಕಾಲೇಜು, ಸಾರ್ವಜನಿಕ ಸ್ಥಳಗಳಲ್ಲಿ ಸಂಗೀತ-ಸುಗಮಸಂಗೀತ ಕಾರ್ಯಕ್ರಮ ಏರ್ಪಡಿಸುವ ಮೂಲಕ ಸಂಗೀತ ಕ್ಷೇತ್ರದ ಬೆಳವಣಿಗೆಗೆ ಬೆನ್ನೆಲುಬಾಗಿ ನಿಂತಿರುವುದಾಗಿ ಹೇಳಿದರು.
ಟ್ವಿಂಕಲ್ ಯುನೈಟೆಡ್ ಪಬ್ಲಿಕ್ ಶಾಲೆಯ ಸಂಸ್ಥೆಯ ಸ್ಥಾಪಕ ಅಧ್ಯಕ್ಷೆ ಅಜ್ರ ಮಾತನಾಡಿ, ಸಂಗೀತವು ನಮ್ಮ ಜೀವನಕ್ಕೆ ಸಂತೋಷ, ನೆಮ್ಮದಿ ಹಾಗೂ ಹೊಸ ಚೈತನ್ಯವನ್ನು ನೀಡುತ್ತದೆ. ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸುವುದರ ಜೊತೆಗೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ ಎಂದರು.ಸಂಗೀತವು ಹೃದಯಗಳನ್ನು ಬೆಸೆಯುವ ಶಕ್ತಿ ಹೊಂದಿದೆ. ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ. ಎಂದು ನುಡಿದರು.
ಕಾರ್ಯಕ್ರಮದಲ್ಲಿ ಕವಿಯತ್ರಿ ಪುಷ್ಪಲತಾ, ಹಂಸ, ವಿಶ್ವಾಸ್, ಮುಖ್ಯಶಿಕ್ಷಕಿಯರು ಹಾಜರಿದ್ದರು.