ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ರಾಜ್ಯ ಸರ್ಕಾರದ ತೀರ್ಮಾನದಂತೆ ತಾಲೂಕಿನ ಹೇಮಗಿರಿ ಷುಗರ್ಸ್ ಕಂಪನಿ ತಾಲೂಕಿನ ಕಬ್ಬು ಬೆಳೆಗಾರರ ಪ್ರತಿ ಟನ್ ಕಬ್ಬಿಗೆ ನೀಡಬೇಕಾದ ಹೆಚ್ಚುವರಿ ಪ್ರೋತ್ಸಾಹ ಧನ 50 ರು. ತಕ್ಷಣವೇ ಬಿಡುಗಡೆ ಮಾಡುವಂತೆ ತಾಲೂಕು ರೈತಸಂಘ ಆಗ್ರಹಿಸಿದೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ಈ ಹಿಂದೆ ರಾಜ್ಯ ಸರ್ಕಾರದ ಸಮ್ಮುಖದಲ್ಲಿ ನಡೆದ ತೀರ್ಮಾನದಂತೆ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಕೆ ಮಾಡಿರುವ ರೈತರ ಪ್ರತಿ ಟನ್ ಕಬ್ಬಿಗೆ ರಾಜ್ಯ ಸರ್ಕಾರದಿಂದ 50 ರು. ಮತ್ತು ಸಕ್ಕರೆ ಕಾರ್ಖಾನೆಗಳ ವತಿಯಿಂದ 50 ರು. ಸೇರಿ ಒಟ್ಟು 100 ರು. ನೀಡಲು ತೀರ್ಮಾನಿಸಲಾಗಿತ್ತು.
ಅದರಂತೆ ಸರ್ಕಾರ ತನ್ನ ಪಾಲಿನ 50 ರು. ಬಿಡುಗಡೆ ಮಾಡಿದೆ. ಆದರೆ, ತಾಲೂಕಿನ ಹೇಮಗಿರಿ ಷುಗರ್ಸ್ ಕಂಪನಿ ತನ್ನ ಪಾಲಿನ 50 ರು. ನೀಡಿಲ್ಲ. ರೈತರ ಹಿಂಬಾಕಿ ನೀಡದೆ ಕಾರ್ಖಾನೆ ಜುಲೈ 2ರಂದು ಕಬ್ಬು ಅರೆಯುವಿಕೆ ಕಾರ್ಯಕ್ಕೆ ಚಾಲನೆ ನೀಡಿದೆ. ಇದಕ್ಕೆ ತಾಲೂಕು ರೈತಸಂಘದ ವಿರೋಧವಿದೆ ಎಂದು ಹೇಳಿದ್ದಾರೆ.ಹಿಂಬಾಕಿ ಪ್ರೋತ್ಸಾಹ ಧನ ನೀಡುವಂತೆ ತಾಲೂಕು ರೈತಸಂಘ ಕಳೆದ ಜೂನ್ 15 ರಂದು ಪಟ್ಟಣದ ಮಿನಿ ವಿದಾನಸೌಧದ ಮುಂದೆ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಪತ್ರ ಅರ್ಪಿಸಿತ್ತು. ನಮ್ಮ ಮವಿಗೆ ಸ್ಪಂದಿಸಿದ ತಹಸೀಲ್ದಾರರು 50 ರು. ಪ್ರೋತ್ಸಾಹ ಧನ ನೀಡುವ ಬಗ್ಗೆ ಕಾರ್ಖಾನೆ ಕೈಗೊಂಡಿರುವ ಕ್ರಮದ ಬಗ್ಗೆ ಮಾಹಿತಿ ನೀಡುವಂತೆ ಪತ್ರ ಬರೆದಿದ್ದರೂ ಕಾರ್ಖಾನೆ ಆಡಳಿತ ಮಂಡಳಿ ತಹಸೀಲ್ದಾರರ ಪತ್ರಕ್ಕೆ ಸ್ಪಂದಿಸುವ ಗೋಜಿಗೆ ಹೋಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ರಾಜ್ಯದಲ್ಲಿ ತೀವ್ರ ಬರಗಾಲವಿದೆ. ರೈತರು ತಮ್ಮ ಬೆಳೆ ಉಳಿಸಿಕೊಳ್ಳಲು ಸಾಲ ಮಾಡಿ ತಮ್ಮ ಕೊಳವೆ ಬಾವಿಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕಿದೆ. ಈ ವೇಳೆ ಹೇಮಗಿರಿ ಸಕ್ಕರೆ ಕಾರ್ಖಾನೆ ರೈತರಿಗೆ ಹೆಚ್ಚುವರಿ 50 ರು. ಪ್ರೋತ್ಸಾಹ ಧನ ನೀಡದೆ ಕಬ್ಬು ಅರೆಯುವಿಕೆಗೆ ಮುಂದಾಗಿದ್ದು, ಬಾಕಿ ನೀಡಿದ್ದರೆ ಬೀದಿ ಹೋರಾಟಕ್ಕಿಳಿಯಬೇಕಾಗುತ್ತದೆಂದು ಎಚ್ಚರಿಸಿದ್ದಾರೆ.