ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮನೆ ದೇವರು ತಾಲೂಕಿನ ಬೂಕನಕೆರೆ ಹೋಬಳಿಯ ಕಾಪನಹಳ್ಳಿ ಗವಿಮಠದ ಶ್ರೀಸ್ವತಂತ್ರ ಸಿದ್ದಲಿಂಗೇಶ್ವರ ದೇವಾಲಯಕ್ಕೆಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು.

ಬೆಳಗ್ಗೆ 10 ಗಂಟೆಗೆ ಹುಟ್ಟೂರಿಗೆ ಆಗಮಿಸಿದ ಯಡಿಯೂರಪ್ಪ ಅವರನ್ನು ಗ್ರಾಮಸ್ಥರು ಸಂಭ್ರಮದಿಂದ ಬರಮಾಡಿಕೊಂಡರು. ನಂತರ ಕಾಪನಹಳ್ಳಿ ಗವಿಮಠಕ್ಕೆ ಆಗಮಿಸಿದ ಮಾಜಿ ಸಿಎಂಗೆ ಮಠದ ಅರ್ಚಕ ವೃಂದದಿಂದ ಪೂರ್ಣ ಕುಂಭ ಕಳಸದೊಂದಿಗೆ ಪೂರ್ಣಕುಂಭ ಸ್ವಾಗತ ಕೋರಲಾಯಿತು.

ನಂತರ ದೇವಾಲಯದಲ್ಲಿ ವಿಧಿ ವಿಧಾನಗಳೊಂದಿಗೆ ಸ್ವತಂತ್ರ ಸಿದ್ದಲಿಂಗೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಠದ ಪೀಠಾಧ್ಯಕ್ಷ ಶ್ರೀಚನ್ನವೀರಯ್ಯ ಸ್ವಾಮೀಜಿಗಳು ಶ್ರೀಮಠದ ಪರ ಶಾಲು ಹೊದಿಸಿ, ಹಾರ ಹಾಕಿ ಯಡಿಯೂರಪ್ಪ ಅವರನ್ನು ಗೌರವಿಸಿದರು.

ಮನೆ ದೇವರ ದರ್ಶನ ಪಡೆದ ನಂತರ ಹುಟ್ಟೂರು ಬೂಕನಕೆರೆ ಗ್ರಾಮಕ್ಕೆ ಆಗಮಿಸಿ ಬಿ.ಎಸ್.ಯಡಿಯೂರಪ್ಪ, ಗ್ರಾಮ ದೇವತೆ ಗೋಗಾಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ದೇವಿ ಆಶೀರ್ವಾದ ಪಡೆದರು. ನಂತರ ಗ್ರಾಮಸ್ಥರ ಅನುಕೂಲಕ್ಕಾಗಿ ಹುಟ್ಟೂರು ಬೂಕನಕೆರೆಯಲ್ಲಿ ಪತ್ನಿ ಮೈತ್ರಾದೇವಿ ನೆನಪಿಗಾಗಿ ನೂತನವಾಗಿ ಮೈತ್ರಾದೇವಿ ಬಿ.ಎಸ್.ಯಡಿಯೂರಪ್ಪ ಅವರ ಹೆಸರಿನಲ್ಲಿ ಯಡಿಯೂರಪ್ಪನವರ ಕುಟುಂಬಸ್ಥರು ನಿರ್ಮಿಸಿರುವ ಸಮುದಾಯ ಭವನ ಲೋಕಾರ್ಪಣೆ ಮಾಡಿದರು. ನೂತನ ಸಮುದಾಯ ಭವನದಲ್ಲಿ ವಿಶೇಷ ಪೂಜೆ, ಹೋಮ ಹವನ ನೆರವೇರಿಸಿದರು.


ಗವಿಮಠದ ಪೀಠಾಧ್ಯಕ್ಷ ಚನ್ನವೀರಯ್ಯ ಶ್ರೀಗಳು ಆಶೀರ್ವಚನ ನೀಡಿ, ಯಡಿಯೂರಪ್ಪ ಅವರು ರಾಜ್ಯ ಕಂಡ ಧೀಮಂತ ನಾಯಕರು. ಹುಟ್ಟೂರಿನ ಬಗ್ಗೆ ಅವರಿಗಿರುವ ಕಾಳಜಿ ಶ್ಲಾಘನೀಯ. ಈ ಸಮುದಾಯ ಭವನ ಗ್ರಾಮದ ಸವಾಂಗೀಣ ಅಭಿವೃದ್ಧಿಗೆ ಪೂರಕವಾಗಲಿ ಎಂದು ಹಾರೈಸಿದರು.

ಈ ವೇಳೆ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಬಿಜೆಪಿ ತಾಲೂಕು ಅಧ್ಯಕ್ಷ ಸಾರಂಗಿ ನಾಗಣ್ಣ, ಮುಡಾ ಮಾಜಿ ಅಧ್ಯಕ್ಷ ಕೆ.ಶ್ರೀನಿವಾಸ್, ತಾಪಂ ಮಾಜಿ ಸದಸ್ಯೆ ಮೀನಾಕ್ಷಿ ಪುಟ್ಟರಾಜು, ಬೂಕನಕೆರೆ ಹುಲ್ಲೆಗೌಡ, ಪ್ರಧಾನ ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್, ಮೈಮುಲ್ ಜಂಟಿ ನಿರ್ದೇಶಕ ಎಸ್.ಸಿ.ಅರವಿಂದ್, ಬಿಎಸ್ ವೈ ಪುತ್ರಿಯರಾದ ಅರುಣದೇವಿ, ಪದ್ಮ, ಉಮಾದೇವಿ, ಸೊಸೆ ಪ್ರೇಮ ವಿಜಯೇಂದ್ರ, ಎಂಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ವಿಠಲಾಪುರ ತೋಂಟಪ್ಪಶೆಟ್ಟಿ, ಯಡಿಯೂರಪ್ಪ ಅಭಿಮಾನಿಗಳ ಸಂಘದ ಅಧ್ಯಕ್ಷ ಬೂಕನಕೆರೆ ಮಧು, ಬಿಜೆಪಿ ಮೋರ್ಚಾಗಳ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.