ಸಾರಾಂಶ
ಕನ್ನಡಪ್ರಭ ವಾರ್ತೆ ಮೂಲ್ಕಿ
ಯಕ್ಷಗಾನಕ್ಕೆ ಇಂದು ಬಹಳಷ್ಟು ಗೌರವವಿದ್ದು ಯಕ್ಷಗಾನ ಕಲೆ ಎಲ್ಲರಿಗೂ ಒಲಿಯುವುದಿಲ್ಲ. ಯಕ್ಷಗಾನ ಮಕ್ಕಳ ಸ್ಮರಣಶಕ್ತಿಯ ಜೊತೆ ಜ್ಞಾನವನ್ನೂ ಹೆಚ್ಚಿಸುತ್ತದೆ. ಮಕ್ಕಳಿಗೆ ನಮ್ಮ ಸಂಸ್ಕೃತಿ ಪರಿಚಯಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಯಬೇಕೆಂದು ಸುರತ್ಕಲ್ ಬಂಟರ ಸಂಘದ ನಿರ್ದೇಶಕ, ಉದ್ಯಮಿ ಗಿರೀಶ್ ಎಂ.ಶೆಟ್ಟಿ ಕಟೀಲು ಹೇಳಿದ್ದಾರೆ.ಸುರತ್ಕಲ್ ನ ಬಂಟರ ಭವನದಲ್ಲಿ ಜರಗಿದ ಸುರತ್ಕಲ್ ನ ಯಕ್ಷಗಾನ ತರಬೇತಿ ಕೇಂದ್ರ ಯಕ್ಷಸಿರಿ ದ್ವಿತೀಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಸುರತ್ಕಲ್ ಬಂಟರ ಸಂಘದ ಮಾಜಿ ಅಧ್ಯಕ್ಷ ಉಲ್ಲಾಸ್ ಆರ್ ಶೆಟ್ಟಿ ಮಾತನಾಡಿ, ಯಕ್ಷಗಾನಕ್ಕೆ ಜಾತಿ, ಮತದ ಹಂಗಿಲ್ಲ. ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಕ್ಷಗಾನ ಕಲೆಗೆ ಮನ್ನಣೆ ಸಿಗುತ್ತಿದೆ. ಕಲಾಮಾತೆಯ ಅನುಗ್ರಹವಿದ್ದಲ್ಲಿ ಕಲಾವಿದರು ತಮ್ಮನ್ನು ತಾವು ಗುರುತಿಸಿಕೊಳ್ಳಬಹುದು. ಯಕ್ಷಗಾನ ಕಲೆಗೆ ಪಟ್ಲ ಫೌಂಡೇಶನ್ ನಂತಹ ಸಂಘಟನೆಗಳು ಸಾಕಷ್ಟು ಶ್ರಮವಹಿಸುತ್ತಿವೆಯೆಂದು ಹೇಳಿದರು.ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು ಅಧ್ಯಕ್ಷತೆ ವಹಿಸಿದ್ದರು.
ಉದ್ಯಮಿ ರಾಘವೇಂದ್ರ ರಾವ್, ಸುರತ್ಕಲ್ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅಶೋಕ್ ಶೆಟ್ಟಿ ತಡಂಬೈಲ್ ಶುಭ ಹಾರೈಸಿದರು.ಸುರತ್ಕಲ್ ಸುಭಾಷಿತ ನಗರ ಅಸೋಸಿಯೇಶನ್ ಕೋಶಾಧಿಕಾರಿ ನರಸಿಂಹ ಸುವರ್ಣ, ಪಟ್ಲ ಫೌಂಡೇಶನ್ ಟ್ರಸ್ಟ್ ಟ್ರಸ್ಟಿ ಧನಂಜಯ ಶೆಟ್ಟಿ ಕಟ್ಲ, ಎಚ್ಪಿಸಿಎಲ್ ನ ಅಧಿಕಾರಿ ವಾಸು ನಾಯ್ಕ ಎಸ್, ಯಕ್ಷಗುರು ರಾಕೇಶ್ ರೈ ಅಡ್ಕ, ಸಂಘದ ನಿಕಟಪೂರ್ವ ಅಧ್ಯಕ್ಷ ಸುಧಾಕರ ಎಸ್. ಪೂಂಜ ಉಪಾಧ್ಯಕ್ಷ ಪುಷ್ಪರಾಜ ಶೆಟ್ಟಿ ಕುಡುಂಬೂರು, ಜೊತೆ ಕಾರ್ಯದರ್ಶಿ ಸುಜೀರ್ ಶೆಟ್ಟಿ ಸೂರಿಂಜೆ, ಮಹಿಳಾ ವೇದಿಕೆ ಅಧ್ಯಕ್ಷೆ ಭವ್ಯಾ ಎ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಯಕ್ಷಸಿರಿಯ ಸಂಘಟಕಿ ಕವಿತಾ ಪುಷ್ಪರಾಜ ಶೆಟ್ಟಿ ಅವರನ್ನು ಗೌರವಿಸಲಾಯಿತು.ಸಂಘದ ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಸ್ವಾಗತಿಸಿದರು. ಕೋಶಾಧಿಕಾರಿ ಅವಿನಾಶ್ ಶೆಟ್ಟಿ ವಂದಿಸಿದರು. ಬಿಂದಿಯಾ ಶೆಟ್ಟಿ ಸನ್ಮಾನಿತರ ಪತ್ರ ವಾಚಿಸಿದರು.
ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ ಯಕ್ಷಸಿರಿ ಕೇಂದ್ರದ ೬ ಮಂದಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಭಿಜ್ಞಾ ಶೆಟ್ಟಿ ದೇವರನ್ನು ಸ್ತುತಿಸಿದರು. ಅಕ್ಷತಾ ನವೀನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.ಬಳಿಕ ಯಕ್ಷಸಿರಿಯ ವಿದ್ಯಾರ್ಥಿಗಳು ಮತ್ತು ಕಲಾವಿದರ ಕೂಡುವಿಕೆಯೊಂದಿಗೆ
‘ಕೃಷ್ಣಂ ವಂದೇ ಜಗದ್ಗುರು’ ಯಕ್ಷಗಾನ ಬಯಲಾಟ ನಡೆಯಿತು.