ಬಂಗಾರಪೇಟೆ: ಇರಾನ್ ಹಾಗೂ ಅಮೆರಿಕ ನಡುವೆ ಯುದ್ಧ ನಡೆಯುತ್ತಿರುವ ಹಿನ್ನೆಲೆ ದೇಶದಲ್ಲಿ ಎಲ್ಪಿಜಿ ಸಿಲೆಂಡರ್ಗಳ ಕೊರತೆ ಉಂಟಾಗಿ ನಾಗರಿಕರು ಪರದಾಡುತ್ತಿರುವ ಹೊತ್ತಲ್ಲಿ ಬೇಕರಿಗಳು ಹಾಗೂ ಹೋಟೆಲ್ಗಳಲ್ಲಿ ಗೃಹಬಳಕೆ ಎಲ್ಪಿಜಿ ಸಿಲೆಂಡರ್ಗಳನ್ನು ಬಳಕೆ ಮಾಡಲಾಗುತ್ತಿದೆ ಎಂಬ ಆರೋಪದ ಮೇರೆಗೆ ಭಾನುವಾರ ತಹಸೀಲ್ದಾರ್ ಸುಜಾತ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಹಲವು ಕಡೆ ದಾಳಿ ಮಾಡಿ 6 ಸಿಲೆಂಡರ್ಗಳನ್ನು ವಶಕ್ಕೆ ಪಡೆಯಲಾಗಿದೆ. ಪಟ್ಟಣದ ಮುಬಾರಕ್, ಸುರಭಿ, ಬಿಜಿಟಿ ಸೇರಿದಂತೆ ಇತರೆ ಹೋಟೆಲ್ಗಳ ಮೇಲೆ ದಿಢೀರನೆ ದಾಳಿ ಮಾಡಿದಾಗ ಅಕ್ರಮವಾಗಿ ಗೃಹಬಳಕೆ ಸಿಲೆಂಡರ್ಗಳನ್ನು ಬಳಕೆ ಮಾಡುತ್ತಿರುವುದು ಬೆಳಕಿಗೆ ಬಂತು. ಅಲ್ಲದೆ ಸುರಭಿ ಹೋಟೆಲ್ನಲ್ಲಿ ಅಡುಗೆಗೆ ಬಳಸುವ ನೀರು ಹಾಗೂ ಗ್ರಾಹಕರಿಗೆ ನೀಡುವ ನೀರು ಸ್ವಚ್ಛವಾಗಿರದೆ ಇರುವುದು ಕಂಡು ಬಂತು. ಹೋಟೆಲ್ನಲ್ಲಿ ಸನ್ಚ್ಛತೆಗೆ ಆದ್ಯತೆ ನೀಡದೆ ಕಡೆಗಣಿಸಲಾಗಿತ್ತು, ಇದರಿಂದ ಆಕ್ರೋಶಗೊಂಡ ತಹಸೀಲ್ದಾರ್ ಸುಜಾತ ಮಾಲೀಕರನ್ನು ತರಾಟೆಗೆ ತೆಗೆದುಕೊಂಡರು.
ಬಳಿಕ ತಹಸೀಲ್ದಾರ್ ಸುಜಾತಾ ಮಾತನಾಡಿ, ಜಿಲ್ಲಾಧಿಕಾರಿಗಳ ಆದೇಶದಂತೆ ಇಂದು ಪಟ್ಟಣದ ವಿವಿಧ ಆರು ಹೋಟೆಲ್ಗಳ ಮೇಲೆ ದಾಳಿ ನಡೆಸಿ ಅನಧಿಕೃತವಾಗಿ ಬಳಸುತ್ತಿದ್ದ ಆರು ಗೃಹಬಳಕೆ ಸಿಲಿಂಡರ್ಗಳನ್ನು ವಶಕ್ಕೆ ಪಡೆದುಕೊಂಡಿದ್ದೇವೆ. ಅವರ ವಿರುದ್ಧ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳುತ್ತೇವೆ ಎಂದರು.ಪಟ್ಟಣದ ಸುರುಬಿ ಹೋಟೆಲ್ಗಳಲ್ಲಿ ಸ್ವಚ್ಛತೆ ಇಲ್ಲದೆ ಇರುವುದು ಕಂಡು ಬಂದಿದೆ. ಅಡಿಗೆಗೆ ಬಳಸುತ್ತಿರುವ ನೀರು ಸಹ ಶುದ್ಧವಾಗಿಲ್ಲದೆ ಇರುವುದು ಕಂಡುಬಂದಿದೆ. ಹೋಟೆಲ್ನಲ್ಲಿ ಬಳಸುತ್ತಿದ್ದ ನೀರನ್ನು ಪರೀಕ್ಷೆ ಮಾಡಲು ತೆಗೆದುಕೊಂಡಿದ್ದೇವೆ. ಪರೀಕ್ಷೆಯಲ್ಲಿ ಲೋಪ ದೋಷ ಕಂಡು ಬಂದಲ್ಲಿ ಅವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಪುರಸಭೆಯ ಮುಖ್ಯ ಅಧಿಕಾರಿ ಸತ್ಯನಾರಾಯಣ, ಆಹಾರ ನಿರೀಕ್ಷಕ ಚೌಡಪ್ಪ ಇದ್ದರು.