ಮುಂಡರಗಿ: ರೈತರು ಕಡ್ಡಾಯವಾಗಿ ಆ್ಯಪ್‌ ಮೂಲಕ ಬೆಳೆಗಳ ಫೋಟೋ ತೆಗೆದು ಜಿಪಿಎಸ್ ಮಾಡಿ ಅಪ್‌ಲೋಡ್‌ ಮಾಡಬೇಕು ಎಂದು ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಸೂಚಿಸಿದ್ದಾರೆ.

ತಾಲೂಕಿನ ಜಾಲವಾಡಗಿ ಹತ್ತಿರ ರೈತರ ಜಮೀನುಗಳಿಗೆ ಶನಿವಾರ ಭೇಟಿ ನೀಡಿದ ಅವರು, ಅಲ್ಲಿನ ಬೆಳೆಗಳನ್ನು ವೀಕ್ಷಿಸಿ ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಜಿಲ್ಲೆಯ ಬಹುತೇಕ ಎಲ್ಲ ತಾಲೂಕುಗಳಿಗೂ ಭೇಟಿ ನೀಡಿ ಬೆಳೆ ವೀಕ್ಷಿಸಿದ್ದೇನೆ. ಜಿಲ್ಲೆಯಾದ್ಯಂತ ಮಳೆಯ ಕೊರೆತೆಯಾಗಿದೆ. ರೈತರು ಬೆಳೆದ ಬೆಳೆಗಳು ಎಲ್ಲಿಯೂ ಉತ್ತಮವಾಗಿಲ್ಲ ಎಂದು ಹೇಳಿದರು.ರೈತರು ನೈಜವಾದುದನ್ನು ಅಪ್‌ಲೋಡ್‌ ಮಾಡುವುದರಿಂದ ಮುಂದೆ ಸರ್ಕಾರ ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಲು ಅನುಕೂಲವಾಗುತ್ತದೆ. ಕೃಷಿ ಇಲಾಖೆ ಪಿಆರ್ ಬಂದು ನಿಮ್ಮ ಜಮೀನಿನಲ್ಲಿರುವ ಬೆಳೆಗಳ ಫೋಟೋ ತೆಗೆದು ಜಿಪಿಎಸ್ ಮಾಡಿ ಅಪ್‌ಲೋಡ್‌ ಮಾಡುವ ವರೆಗೂ ತುಂಬಾ ಸಮಯವಾಗುತ್ತದೆ ಎಂದು ಹೇಳಿದರು.

ರೈತರೇ ಜಿಪಿಎಸ್ ಮಾಡುವುದರಿಂದ ವಿಮಾ ಕಂಪನಿಗೆ ನೇರವಾಗಿ ಮಾಹಿತಿ ನೀಡಿದಂತಾಗುತ್ತದೆ. ರೈತರು ತಮ್ಮ ಜಮೀನಿನಲ್ಲಿನ ಬೆಳೆಗಳ ಸಮೀಕ್ಷೆ ಮಾಡಿದ ನಂತರವೇ ಜಮೀನುಗಳನ್ನು ಹರಗಬೇಕು. ಬೆಳೆ ಇಲ್ಲದೇ ಫೋಟೋ ಹಾಗೂ ಜಿಪಿಎಸ್ ಮಾಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ನಮ್ಮಲ್ಲಿ ಈಗಾಗಲೇ ವಾಡಿಕೆಗಿಂತ ಶೇ. 30-32ರಷ್ಟು ಮಳೆ ಕೊರತೆಯಾಗಿದೆ. ಸರ್ಕಾರ ಆಗಸ್ಟ್‌ ಮಧ್ಯವಾರದೊಳಗೆ ಎಲ್ಲ ಜಿಲ್ಲೆಗಳ ಬೆಳೆ ಸಮೀಕ್ಷೆ ಮಾಹಿತಿ ಪಡೆದು ಬರಗಾಲ ಘೋಷಿಸುವ ಸಾಧ್ಯತೆಗಳಿವೆ ಎಂದರು.

ಈಗಾಗಲೇ ಶೇ. 80ರಷ್ಟು ಬಿತ್ತನೆಯಾಗಿದ್ದು, ಒಂದು ವೇಳೆ ರೈತರು ತಮ್ಮ ಬೆಳೆಗಳ ಫೋಟೋ ತೆಗೆದು ಜಿಪಿಎಸ್ ಮಾಡಿ ಅಪ್‌ಲೋಡ್‌ ಮಾಡದಿದ್ದರೆ ಬಿತ್ತನೆ ಮಾಡಿದ ರೈತರಿಗೆ ಅನ್ಯಾಯವಾಗುತ್ತದೆ. ಮಾಹಿತಿ ಕಳುಹಿಸುವುದರಿಂದ ಬಿತ್ತನೆಗಾಗಿ ಮಾಡಿದ ಖರ್ಚಿನ ಹಣ ವಿಮೆ ಕಂಪನಿಯಿಂದ ದೊರೆಯುತ್ತದೆ ಎಂದರು.

ತಾಲೂಕಿನ ವಿವಿಧೆಡೆಗಳಲ್ಲಿ ಮಳೆ ಮಾಪನ ಕೇಂದ್ರಗಳು ಸ್ಥಗಿತಗೊಂಡಿದ್ದು, ಸರ್ಕಾರಕ್ಕೆ ಸರಿಯಾದ ಮಳೆ ಸಮೀಕ್ಷೆ ವರದಿ ಹೇಗೆ ಹೋಗುತ್ತದೆ ಎಂದು ರೈತರು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ, ಜಿಲ್ಲೆಯ ಹೆಚ್ಚಿನ ಕಡೆಗಳಲ್ಲಿ ಮಳೆ ಮಾಪನ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳಲ್ಲಿನ ಮಾಹಿತಿ ಆಧಾರದ ಮೇಲೆ ಸರ್ಕಾರ ನಿರ್ಧರಿಸುತ್ತದೆ ಎಂದರು.


ಜಿಲ್ಲಾ ಉಪವಿಭಾಗಾಧಿಕಾರಿ ಗಂಗಪ್ಪ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ, ಸಹಾಯಕ ಜಂಟಿ ನಿರ್ದೇಶಕಿ ಸ್ಫೂರ್ತಿ, ಮುಂಡರಗಿ ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್., ತಾಲೂಕು ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ, ಮಲ್ಲಿಕಾರ್ಜುನ ಹನಜಿ, ಕುಮಾರಸ್ವಾಮಿ ಹಿರೆಮಠ, ಚಂದ್ರಶೇಖರ ಹೊಸಮಠ, ದೇವಪ್ಪ ಹಾಡಕರ್, ಗುಡದಯ್ಯ ಯಳವತ್ತಿ, ರೇವಣಪ್ಪ ತಳವಾರ, ರಾಮಣ್ಣ ನವಲಿ, ದ್ಯಾಮನಗೌಡ ಪಾಟೀಲ, ಈರಣ್ಣ ಇಟಗಿ, ಸುಭಾಸ ಕ್ವಾಟಿ, ದ್ಯಾಮನಗೌಡ ಪಾಟೀಲ, ಡಿ.ಎಂ. ಪಾಟೀಲ, ಶ್ರೀಕಾಂತ ಕಟ್ಟಿ, ಸಿದ್ದೇಶಪ್ಪ ತಳವಾರ, ಮಲ್ಲಿಕಾರ್ಜುನ ಹೊಸಮಠ ಉಪಸ್ಥಿತರಿದ್ದರು.