ಸಾರಾಂಶ
ಹಾವೇರಿ: ವೇಗದ ಜಗತ್ತು ಬೇಡ, ವಿದ್ಯಾರ್ಥಿಗಳಿಗೆ ಸಂಯಮ ಮತ್ತು ಸಮಯ ಪ್ರಜ್ಞೆಯನ್ನು ಶಿಕ್ಷಕರು ಕಲಿಸಿಕೊಡಬೇಕು. ಪಠ್ಯಗಳ ಜೊತೆಗೆ ಸೃಜನೇತರ ಬರಹಗಳ ಕಲಿಕೆ ಕೂಡ ಅಗತ್ಯವಾಗಿದೆ. ವರ್ಗಕೋಣೆಗಳ ಹೊರಗಡೆ ಶಿಕ್ಷಕರು ಕಲಿಯುವುದು ಸಾಕಷ್ಟಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ ಹೇಳಿದರು. ನಗರದ ಕಾಲಕಾಂಬಾ ದೇವಸ್ಥಾನದ ಆವರಣದಲ್ಲಿ ಹಾವನೂರು ಪ್ರತಿಷ್ಠಾನ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ರಾಣೇಬೆನ್ನೂರಿನ ಶ್ರೀ ವಿದ್ಯಾನಿಧಿ ವಿದ್ಯಾಲಯದ ಶಿಕ್ಷಕಿ ದ್ರಾಕ್ಷಾಯಿಣಿ ಉದಗಟ್ಟಿ (ಪ್ರಥಮ), ಬಂಕಾಪೂರ ಲಯನ್ಸ್ ನವಭಾರತ ಶಿಕ್ಷಣ ಸಂಸ್ಥೆಯ ಶಿಕ್ಷಕಿ ಲಕ್ಷ್ಮಿ ಮಾಲತೇಶ ನರಗುಂದ (ದ್ವಿತೀಯ ) ಹಾಗೂ ಗೆಳೆಯರ ಬಳಗದ ಜ್ಞಾನಗಂಗಾ ಶಿಕ್ಷಣ ಸಮಿತಿಯ ಉಮಾ ಹೊರಡಿ (ಸಮಾಧಾನಕರ) ಅವರಿಗೆ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.ಪ್ರಶಸ್ತಿ ಸ್ವೀಕರಿಸಿದ ದ್ರಾಕ್ಷಾಯಿಣಿ ಉದಗಟ್ಟಿ ಮಾತನಾಡಿ, ಪ್ರಬಂಧ ಸ್ಪರ್ಧೆ ನಮ್ಮ ಕೌಶಲ್ಯ ಮತ್ತು ಹೊಸದನ್ನು ಹುಡುಕಲು ಪ್ರೇರಣೆ ನೀಡಿತು ಎಂದರೆ, ಲಕ್ಷ್ಮಿ ನರಗುಂದ ಪ್ರತಿವರ್ಷ ಇಂತಹ ಸ್ಪರ್ಧೆಗಳನ್ನು ಏರ್ಪಡಿಸಬೇಕೆಂದು ಸಲಹೆ ನೀಡಿದರು. ಸ್ಪರ್ಧೆಗಿಂತ ನಮ್ಮ ನಿತ್ಯ ಒತ್ತಡದ ನಡುವೆ ಸೃಜನಶೀಲತೆಯತ್ತ ಗಮನ ಸೆಳೆಯಲು ಪ್ರಬಂಧ ಸ್ಪರ್ಧೆ ಸಹಕಾರಿಯಾಯಿತೆಂದು ಉಮಾ ಹೊರಡಿ ಹೇಳಿದರು. ಹಾವನೂರ ಪ್ರತಿಷ್ಠಾನದ ಅಧ್ಯಕ್ಷ ವಿರೂಪಾಕ್ಷ ಹಾವನೂರ ಮಾತನಾಡಿ, ನಮಗೆ ಒಂದು ಕಾಲದಲ್ಲಿ ದಾರಿ ತೋರಿ ಅಕ್ಷರ ಕಲಿಸಿದ ಗುರುವೃಂದಕ್ಕೆ ಒಂದು ರೀತಿಯಲ್ಲಿ ಕೃತಜ್ಞತೆ ತೋರಲು ಈ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು ಎಂದರು.ಪ್ರಾಸ್ತಾವಿಕ ನುಡಿಗಳನ್ನಾಡಿದ ಪ್ರತಿಷ್ಠಾನದ ಸಂಚಾಲಕ ಎಸ್. ಆರ್. ಹಿರೇಮಠ ಸ್ಪರ್ಧೆಯ ವಿವರ ನೀಡಿದರು. ವೇದಿಕೆಯಲ್ಲಿ ಲಯನ್ಸ್ ಅಧ್ಯಕ್ಷ ಸುಭಾಸ ಹುಲ್ಯಾಳದ, ಲಯನ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿ.ಜಿ. ಬಣಕಾರ, ಸಾಹಿತಿ ಸತೀಶ ಕುಲಕರ್ಣಿ ಇದ್ದರು. ಮಾನಸಾ ಎಸ್. ಎಚ್. ಪ್ರಾರ್ಥಿಸಿದರು. ಎ.ಎಚ್.ಕಬ್ಬಿಣಕಂತಿಮಠ ನಿರೂಪಿಸಿದರು. ಮಾಲತೇಶ ಕರ್ಜಗಿ ವಂದಿಸಿದರು.