ತಾಲೂಕಿನ ಬೆಳಕೆಯ ಗ್ರಾಮೀಣ ವ್ಯವಸಾಯ ಸಂಘದ 4ನೇ ಶಾಖೆ ಮುರುಡೇಶ್ವರದ ಬಸ್ ನಿಲ್ದಾಣದ ಎದುರಿನ ಸ್ನೇಹಲ್ ಬಿಲ್ಡಿಂಗ್‌ನಲ್ಲಿ ಮೇ 6ರ ಬೆಳಗ್ಗೆ ಗಣಹೋಮದೊಂದಿಗೆ ಉದ್ಘಾಟನೆಗೊಳ್ಳಲಿದೆ.

ಕನ್ನಡಪ್ರಭ ವಾರ್ತೆ ಭಟ್ಕಳ

ತಾಲೂಕಿನ ಬೆಳಕೆಯ ಗ್ರಾಮೀಣ ವ್ಯವಸಾಯ ಸಂಘದ 4ನೇ ಶಾಖೆ ಮುರುಡೇಶ್ವರದ ಬಸ್ ನಿಲ್ದಾಣದ ಎದುರಿನ ಸ್ನೇಹಲ್ ಬಿಲ್ಡಿಂಗ್‌ನಲ್ಲಿ ಮೇ 6ರ ಬೆಳಗ್ಗೆ ಗಣಹೋಮದೊಂದಿಗೆ ಉದ್ಘಾಟನೆಗೊಳ್ಳಲಿದೆ.

ಬೆಳಕೆ ಗ್ರಾಮೀಣ ವ್ಯವಸಾಯ ಸಂಘ ತಾಲೂಕಿನ ಪ್ರತಿಷ್ಠಿತ ಸಹಕಾರಿ ಸಂಘಗಳಲ್ಲೊಂದಾಗಿದ್ದು ವರ್ಷದಿಂದ ವರ್ಷಕ್ಕೆ ಉತ್ತಮ ಅಭಿವೃದ್ಧಿ ಹೊಂದುತ್ತಿದೆ. ಸಂಘ ಪ್ರಧಾನ ಕಚೇರಿಯಲ್ಲಿ ಮುಖ್ಯಶಾಖೆ ಹೊಂದಿದ್ದು, ಸರ್ಪನಕಟ್ಟೆ, ಶಿರೂರಿನಲ್ಲೂ ಶಾಖೆ ಹೊಂದಿದೆ. ಇದೀಗ ತನ್ನ ವ್ಯವಹಾರ ವಿಸ್ತರಿಸಿ ಮುರುಡೇಶ್ವರದಲ್ಲಿ ಶಾಖೆ ಆರಂಭಿಸುತ್ತಿದೆ. ಮುರುಡೇಶ್ವರ ಶಾಖೆಯಲ್ಲಿ ಸುಸಜ್ಜಿತ ವ್ಯವಸ್ಥೆ ಅಳವಡಿಸಲಾಗಿದೆ. ಬೆಳಕೆ ಗ್ರಾಮೀಣ ವ್ಯವಸಾಯ ಸಹಕಾರಿ ಸಂಘ 8677 ಶೇರುದಾರ ಸದಸ್ಯರನ್ನು ಹೊಂದಿದೆ. ಸಂಘ ₹659.12 ಲಕ್ಷ ಶೇರು ಬಂಡವಾಳ, ₹1368.34 ಲಕ್ಷ ನಿಧಿಗಳು, ₹9151.47 ಲಕ್ಷ ಠೇವಣಿ, ₹1403.15 ಲಕ್ಷ ಹೂಡಿಕೆ, ₹10992.98 ಲಕ್ಷ ಹೊರಬಾಕಿ ಸಾಲ ಹೊಂದಿದೆ. ಸಂಘ ಠೇವಣಿಗಳ ಮೇಲೆ ಆಕರ್ಷಕ ಬಡ್ಡಿದರವನ್ನೂ ಕೂಡ ನೀಡಿ ಗ್ರಾಹಕರ ವಿಶ್ವಾಸಗಳಿಸಿದೆ. ಸಂಘ ಆರ್ಥಿಕ ವ್ಯವಹಾರದ ಜತೆಗೆ ಸಮಾಜಮುಖಿಯಾಗಿಯೂ ಸ್ಪಂದಿಸುತ್ತಿದೆ. ಬೆಳಕೆಯಲ್ಲಿ ಜನರ ಅನುಕೂಲಕ್ಕಾಗಿ ಬಸ್ ನಿಲ್ದಾಣ, ಮುಖ್ಯ ಕಚೇರಿಯಲ್ಲಿ ಇ-ಸ್ಟಾಂಪಿಂಗ್ ವ್ಯವಸ್ಥೆ, ಸಂಘದ ಕಾರ್ಯ ವ್ಯಾಪ್ತಿಯಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚಿನ ಅಂಕ ಪಡೆದವರಿಗೆ ಪ್ರತಿಭಾ ಪುರಸ್ಕಾರ, ಅನಾರೋಗ್ಯ ಪೀಡಿತರಿಗೆ ನೆರವು ಸೇರಿ ಹಲವು ಕಾರ್ಯಗಳನ್ನು ಮಾಡುತ್ತಿದೆ.

ಮುರುಡೇಶ್ವರದಲ್ಲಿ ಸಂಘದ ನೂತನ ಶಾಖೆ ಮಾಡಬೇಕೆಂಬ ಬೇಡಿಕೆ ಬಂದ ಹಿನ್ನೆಲೆ ಜನರ ಅನುಕೂಲಕ್ಕಾಗಿ ತನ್ನ ಶಾಖೆ ಆರಂಭ ಮಾಡುತ್ತಿದ್ದು, ಇದರ ಸದುಪಯೋಗ ಪಡೆಯಬೇಕು. ಮುಂದಿನ ದಿನಗಳಲ್ಲಿ ಸಂಘದಿಂದ ಮತ್ತೆ ಎರಡು ಶಾಖೆಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಗ್ರಾಹಕರ ಉತ್ತಮ ವ್ಯವಹಾರದಿಂದ ಸಂಘ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಲಾಭಗಳಿಸಲು ಕಾರಣವಾಗಿದ್ದು, ಇದೀಗ ಮುರುಡೇಶ್ವರ ಶಾಖೆಯಲ್ಲೂ ಸಹ ಈ ಭಾಗದ ಜನರು ವ್ಯವಹಾರ ಮಾಡುವುದರ ಮೂಲಕ ಸಂಘದ ಅಭಿವೃದ್ಧಿ ಸಹಕಾರ ನೀಡಬೇಕು ಎಂದು ಸಂಘದ ಅಧ್ಯಕ್ಷ ಮಾದೇವ ನಾಯ್ಕ, ಉಪಾಧ್ಯಕ್ಷ ಪಾಂಡು ಜಿ. ನಾಯ್ಕ ಹಾಗೂ ಪ್ರಧಾನ ವ್ಯವಸ್ಥಾಪಕ ಅಣ್ಣಪ್ಪ ನಾಯ್ಕ ಹಾಗೂ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.