ಹೊಸದುರ್ಗ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಪಕ್ಷ ಸಂಸ್ಥಾಪನಾ ದಿನ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಹೊಸದುರ್ಗ
1951ರಲ್ಲಿ ಕಾಂಗ್ರೆಸ್ಸಿನ ಧೋರಣೆಗಳಿಂದ ಹೊರಬಂದ ಶ್ಯಾಮ ಪ್ರಸಾದ್ ಮುಖರ್ಜಿ ಅವರು ಸ್ಥಾಪಿಸಿದ ಭಾರತೀಯ ಜನಸಂಘ ದೇಶದ ರಾಜಕೀಯ ಇತಿಹಾಸದ ದಿಕ್ಕನ್ನೇ ಬದಲಿಸಿದೆ ಎಂದು ಕರ್ನಾಟಕ ರಾಜ್ಯ ಖನಿಜ ನಿಗಮ ಮಾಜಿ ಅಧ್ಯಕ್ಷ ಎಸ್.ಲಿಂಗಮೂರ್ತಿ ತಿಳಿಸಿದರು.ನಗರದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಬಿಜೆಪಿ ಸಂಸ್ಥಾಪನಾ ಕಾರ್ಯಕ್ರಮದಲ್ಲಿ ಮಾತನಾಡಿ, 1977ರಲ್ಲಿ ಮುರಾರ್ಜಿ ನೇತೃತ್ವದ ಜನತಾ ಪಕ್ಷಕ್ಕೆ ಕೈಜೋಡಿಸಿ ಪ್ರಪ್ರಥಮ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ಬರಲು ಕಾರಣರಾದರು.
1980ರಲ್ಲಿ ಸ್ಥಾಪಿತವಾದ ಬಿಜೆಪಿ ಪ್ರಪಂಚದಾದ್ಯಂತ ಹೆಚ್ಚು ಕಾರ್ಯಕರ್ತರನ್ನು ಹೊಂದಿರುವ ಪ್ರಾಮಾಣಿಕ ಹಾಗೂ ನಿಷ್ಠಾವಂತ ರಾಜಕೀಯ ಪಕ್ಷವಾಗಿ ಇಂದು ಬಿಜೆಪಿ ಬೆಳೆದಿದೆ. ನಂತರ ಇದರ ಉತ್ತರಾಧಿಕಾರಿಯಾಗಿ, ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್.ಕೆ.ಅಡ್ವಾಣಿ ನೇತೃತ್ವದಲ್ಲಿ ಬೆಳೆದ ಬಿಜೆಪಿ, ಹಿಂದುತ್ವ ಮತ್ತು ರಾಷ್ಟ್ರೀಯತೆಯನ್ನು ಮೂಲ ಸಿದ್ಧಾಂತವಾಗಿಸಿಕೊಂಡು, ದೇಶದಾದ್ಯಂತ ಪಕ್ಷ ಸಂಘಟನೆಗೊಂಡಿದೆ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಪ್ರಸ್ತುತ ಪ್ರಪಂಚದ ಅತಿದೊಡ್ಡ ಪಕ್ಷವಾಗಿದೆ ಎಂದರು.ಬೂತ್ ಮಟ್ಟದ ಕಾರ್ಯಕರ್ತರು ಪಕ್ಷದ ಆಸ್ತಿ, ಒಬ್ಬ ಸಾಮಾನ್ಯ ಚಹಾ ಮಾರುವ ಕಾರ್ಯಕರ್ತ ದೇಶದ ಪ್ರಧಾನಿಯಾಗಿದ್ದಾರೆ, ಪಕ್ಷ ನಿಷ್ಠೆ ಇದ್ದರೆ ಸಾಮಾನ್ಯ ಕಾರ್ಯಕರ್ತನನ್ನು ಸಹ ಎತ್ತರಕ್ಕೆ ಬೆಳೆಸಿದ ಜವಾಬ್ದಾರಿ ಬಿಜೆಪಿ ಪಕ್ಷಕ್ಕಿದೆ ಎಂದರು.
ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎಸ್.ಕಲ್ಮಠ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಕೆಲ ಕಿಡಿಗೇಡಿಗಳು ಕೀಳಾಗಿ ಮಾತನಾಡುತ್ತಾರೆ. ಒಮ್ಮೆ ಅವರು ಆತ್ಮವಲೋಕನ ಮಾಡಿಕೊಳ್ಳಲಿ ನರೇಂದ್ರ ಮೋದಿ ಪ್ರಸ್ತುತ ದಿನಮಾನದಲ್ಲಿ ಈ ದೇಶದ ಪ್ರಧಾನಿಯಾಗದಿದ್ದರೆ ದೇಶದ ಪರಿಸ್ಥಿತಿ ಊಹಿಸಿಕೊಳ್ಳಲೂ ಸಾಧ್ಯವಾಗುತ್ತಿರಲಿಲ್ಲ. ದೇಶದಲ್ಲಿಯೇ ಇದ್ದುಕೊಂಡು, ದೇಶ ವಿರೋಧಿ ಚಟುವಟಿಕೆ ಮಾಡುವ ದೇಶದ್ರೋಹಿಗಳನ್ನು ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ಎಂದಿಗೂ ಸಹಿಸುವುದಿಲ್ಲ ಎಂದರು.ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಅಣ್ಣಪ್ಪಸ್ವಾಮಿ, ಮಾಜಿ ಅಧ್ಯಕ್ಷ ಗೂಳಿಹಟ್ಟಿ ಜಗದೀಶ್, ಜಿಲ್ಲಾ ಉಪಾಧ್ಯಕ್ಷ ವಕೀಲ ರವಿಕುಮಾರ್, ಕೊಂಡಾಪುರ ಮಂಜುನಾಥ್, ಪ್ರಧಾನ ಕಾರ್ಯದರ್ಶಿಗಳಾದ ಬೋಕಿಕೆರೆ ನಾಗರಾಜ್, ಚಿತ್ತಪ್ಪ, ಪನ್ನಗ ರಾಯ್ಕರ್, ಉಪಾಧ್ಯಕ್ಷ ನಾಗಯ್ಯನಹಟ್ಟಿ ರಾಜಪ್ಪ, ಶಶಿಧರ್, ಕಾರ್ಯದರ್ಶಿ ವಿರೂಪಾಕ್ಷಪ್ಪ, ದೇವಿಗೆರೆ ಮಲ್ಲಿಕಾರ್ಜುನ್ ದೊಡ್ಡಘಟ್ಟ ಲಕ್ಷ್ಮಣ್, ಕೊಡಿಹಳ್ಳಿ ತಮ್ಮಣ್ಣ, ಶಿವು ಮಠ, ಸ್ವಾಮಿ, ಹೆಗ್ಗೆರೆ ಶಂಕ್ರಪ್ಪ, ಹುಣಿವಿನಡು ಕುಬೇರಪ್ಪ, ಹೇಮಂತ್ ಜಗದೀಶ್ ಕೊಂಡಾಪುರ ಚಂದ್ರಶೇಖರ್ ಪರಪ್ಪ, ನಾಗರಕಟ್ಟೆ ರಾಜಾಹುಲಿ ಇದ್ದರು.