ಮಾಗಡಿ: ಪಟ್ಟಣದ ಹೊಸಪೇಟೆ ನಿವಾಸಿ ರೈತ ನರಸಿಂಹಯ್ಯ ಅವರಿಗೆ ಸೇರಿದ 2 ರಾಗಿ ಮೆದೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟು ಭಸ್ಮವಾಗಿ ಅಪಾರ‌ ನಷ್ಟ ಉಂಟಾಗಿದೆ. ರೈತ ನರಸಿಂಹಯ್ಯ 2 ಎಕರೆ ಜಮೀನಿನಲ್ಲಿ ಪಾಲು ಪದ್ಧತಿಯಲ್ಲಿ ರಾಗಿ ಬೆಳೆದಿದ್ದರು. ಈಗಾಗಲೇ ರಾಗಿ ಒಕ್ಕಣೆ ಕಾರ್ಯ ಮುಗಿದಿದ್ದು, ತಮ್ಮ ಜಾನುವಾರುಗಳ ಮೇವಿಗಾಗಿ ಎರಡು ದೊಡ್ಡ ರಾಗಿ ಮೆದೆಗಳನ್ನು ಹಾಕಿದ್ದರು. ಮಳೆಗಾಲದಲ್ಲಿ ಜಾನುವಾರುಗಳ ಹಸಿವು ನೀಗಿಸಲು ಸಂಗ್ರಹಿಸಿಟ್ಟಿದ್ದ ಮೇವು ಸಂಪೂರ್ಣ ನಾಶವಾಗಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ನಂದಿಸಲು ಪ್ರಯತ್ನಿಸಿದರಾದರೂ, ಗಾಳಿಯ ವೇಗಕ್ಕೆ ಬೆಂಕಿ ಕ್ಷಣಾರ್ಧದಲ್ಲಿ ಹರಡಿ ಎರಡು ಮೆದೆಗಳೂ ಬೂದಿಯಾಗಿವೆ.

ಸಹಾಯಕ್ಕೆ ರೈತನ ಮೊರೆ: ಕಷ್ಟಪಟ್ಟು 2 ಎಕರೆ ಜಮೀನಿನಲ್ಲಿ ರಾಗಿ ಬೆಳೆದಿದ್ದೆವು ರಾಸುಗಳಿಗಾಗಿ ಎತ್ತಿಟ್ಟಿದ್ದ ಮೇವು ಈಗ ಬೆಂಕಿಗೆ ಆಹುತಿಯಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು, ಅಂದಾಜು 80 ಸಾವಿರ ರು. ನಷ್ಟವಾಗಿದೆ ಎಂದು ಸಂತ್ರಸ್ಥ ರೈತ ನರಸಿಂಹಯ್ಯ ಅಳಲು ತೋಡಿಕೊಂಡಿದ್ದಾರೆ. ಸಂಬಂಧಪಟ್ಟ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸೂಕ್ತ ಪರಿಹಾರ ಒದಗಿಸಿಕೊಡಬೇಕೆಂದು ಹೊಸಪೇಟೆ ಗ್ರಾಮಸ್ಥರು ಹಾಗೂ ರೈತರು ಒತ್ತಾಯಿಸಿದ್ದಾರೆ.