ಹೊಸಕೋಟೆ: ಗ್ರಾಮಗಳಲ್ಲಿ ಪರಸ್ಪರ ಸಾಮರಸ್ಯ ಬೆಳೆಸುವಲ್ಲಿ ದೇವಾಲಯಗಳು ಸಹಕಾರಿ, ಧಾರ್ಮಿಕ ಕಾರ್ಯಗಳು ಎಲ್ಲಾ ವರ್ಗದ ಜನರನ್ನು ಒಗ್ಗೂಡಸಲಿವೆ ಎಂಬ ನಂಬಿಕೆ ಪುರಾತನ ಕಾಲದಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ಬೆಳೆದು ಬಂದಿದೆ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.

ತಾಲೂಕಿನ ನಂದಗುಡಿ ಹೋಬಳಿಯ ಬಾಣಮಾಕನಹಳ್ಳಿಯಲ್ಲಿ ಶ್ರೀ ವದಲಿ ರಾಮೇಶ್ವರಸ್ವಾಮಿ ದೊಡ್ಡ ದ್ಯಾವರ ಜಾತ್ರೆ ಹಾಗೂ ಕುಲದೇವತಾ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹತ್ತು ದೇವರನ್ನ ಪೂಜಿಸುವುದಕ್ಕಿಂತ ಮನೆಯ ದೇವರನ್ನ ಭಕ್ತಿಯಿಂದ ಪೂಜಿಸಿ, ಕೂಡಿ ಬಾಳಬೇಕು, ಮನಸ್ಸಿನಲ್ಲಿ ದ್ವೇಷ, ಅಸೂಯೆ ಇರಬಾರದು. ನಮ್ಮ ಸಂಸ್ಕೃತಿ ಉಳಿಸಿ ಬೆಳೆಸಬೇಕು. ಜನಾಂಗದವರು ಶಿಕ್ಷಣ ಸಂಸ್ಥೆಗಳನ್ನ ಕಟ್ಟಿ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಕುರುಬ ಜನಾಂಗದವರು ಎಲ್ಲಾ ಭಿನ್ನಾಭಿಪ್ರಾಯಗಳನ್ನು ಮರೆತು ಒಗ್ಗಟ್ಟಾಗಿ ಇಂತಹ ದೇವರ ಜಾತ್ರಾ ಮಹೋತ್ಸವ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.

ಹೊಸದುರ್ಗ ಗುರುಪೀಠ ಕನಕ ಶಾಖಾ ಮಠದ ಪೀಠಾಧಿಪತಿಗಳಾದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ತಲೆಯ ಮೇಲೆ ಕಾಯಿ ಒಡೆಯುವ ಪವಾಡದ ಸಂಪ್ರದಾಯ ಜಗತ್ತಿನಲ್ಲೆಲ್ಲೂ ಇಲ್ಲ, ದೀಪ ಕೊಡುವ ಸಂಪ್ರದಾಯ ಮದುವೆ ದಂಪತಿಗೆ ಒಂದಾಗಿ ಬಾಳಿ ಬೆಳಗಬೇಕೆಂದು ಹೇಳುವ ಪದ್ಧತಿಯಾಗಿದೆ. ಹಾಲುಮತದ ಎಲ್ಲಾ ಕುಟುಂಬದವರು ನಮ್ಮ ಮಠಗಳಿಗೆ ಬಂದು ಆಚಾರ ವಿಚಾರದ ಬಗ್ಗೆ ಮಕ್ಕಳಿಗೆ ತಿಳಿಸಿ ಮುಂದಿನ ಸಂಸ್ಕೃತಿ ಉಳಿಯುವಂತಾಗಲಿ ಎಂದು ನುಡಿದರು.

ಶ್ರೀವದಲಿ ರಾಮೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಕಾರ್ಯಕಾರಿ ಸಮಿತಿ ಅಧ್ಯಕ್ಷ ಎಂಎನ್‌ಅರ್ ರಮೇಶ್,

ಜಿಪಂ ಮಾಜಿ ಸದಸ್ಯ ಸಿ.ನಾಗರಾಜ್, ಬಮೂಲ್ ಮಾಜಿ ಅಧ್ಯಕ್ಷ ಹುಲ್ಲೂರು ಸಿ.ಮಂಜುನಾಥ್, ಕುರುಬರ ಸಂಘದ ಮಾಜಿ ಅಧ್ಯಕ್ಷ ಶ್ರೀನಿವಾಸಯ್ಯ, ಶ್ರೀವದಲಿ ರಾಮೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಕಂಬಿ ಯಜಮಾನರಾದ ಹಲಸಹಳ್ಳಿ ಚಿಕ್ಕನಾರಾಯಣಸ್ವಾಮಿ, ಎಂ.ಹೊಸಹಳ್ಳಿ ದಯಾನಂದ, ಗಡಿಗೇನಹಳ್ಳಿ ಮುನಿಯಪ್ಪ, ಇಂಜನಹಳ್ಳಿ ರವೀಂದ್ರಬಾಬು, ಶ್ರೀವದಲಿ ರಾಮೇಶ್ವರಸ್ವಾಮಿ ಸೇವಾ ಸಮಿತಿಯ ಪದಾಧಿಕಾರಿಗಳು, ನಾಲ್ಕೂ ಕಂಬಿಗಳ ಒಕ್ಕಲಿನ ಕುಲಸ್ಥರು, ಹಾಲುಮtಸ್ಥರು, ಬಾಣಮಾಕನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.


ಫೋಟೋ: 6 ಹೆಚ್‌ಎಸ್‌ಕೆ 3 ಮತ್ತು 4

ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ಬಾಣಮಾಕನಹಳ್ಳಿಯಲ್ಲಿ ಶ್ರೀ ವದಲಿ ರಾಮೇಶ್ವರಸ್ವಾಮಿ ದೊಡ್ಡ ದ್ಯಾವರ ಜಾತ್ರೆ ಹಾಗೂ ಕುಲದೇವತಾ ಜಾತ್ರಾ ಮಹೋತ್ಸವದಲ್ಲಿ ಮಾಜಿ ಸಚಿವ ಎಂಟಿಬಿ ನಾಗರಾಜ್ ಮಾತನಾಡಿದರು.

4: ಹೊಸದುರ್ಗ ಗುರುಪೀಠ ಕನಕ ಶಾಖಾ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಈಶ್ವರಾನಂದಪುರಿ ಸ್ವಾಮೀಜಿಯನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು.