ಕೇಂದ್ರ ಸರ್ಕಾರದ ಕೊಡುಗೆ ಮನದಟ್ಟು ಮಾಡುವ ಸಂಕಲ್ಪ

| Published : Feb 12 2024, 01:36 AM IST

ಸಾರಾಂಶ

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ಮನೆ ಮನೆಗಳಿಗೆ ತಲುಪಿಸುವ ನಿಟ್ಟಿನಲ್ಲಿ ಜಿಲ್ಲಾ ಬಿಜೆಪಿಯಿಂದ ಹಮ್ಮಿಕೊಂಡಿರುವ ಗ್ರಾಮ ಚಲೋ ಅಭಿಯಾನಕ್ಕೆ ನಗರದ ಕೆಂಪನಹಳ್ಳಿಯಲ್ಲಿ ಭಾನುವಾರ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ಮನೆ ಮನೆಗಳಿಗೆ ತಲುಪಿಸುವ ನಿಟ್ಟಿನಲ್ಲಿ ಜಿಲ್ಲಾ ಬಿಜೆಪಿಯಿಂದ ಹಮ್ಮಿಕೊಂಡಿರುವ ಗ್ರಾಮ ಚಲೋ ಅಭಿಯಾನಕ್ಕೆ ನಗರದ ಕೆಂಪನಹಳ್ಳಿಯಲ್ಲಿ ಭಾನುವಾರ ಚಾಲನೆ ನೀಡಲಾಯಿತು.

ಇದೇ ಸಂದರ್ಭದಲ್ಲಿ ಗ್ರಾಮ ಚಲೋ ಅಭಿಯಾನದ ಸಂಚಾಲಕ ಬಿ.ರಾಜಪ್ಪ ಮಾತನಾಡಿ, ಪಕ್ಷದ ರಾಜ್ಯಾಧ್ಯಕ್ಷರ ಸೂಚನೆ ಮೇರೆಗೆ ಗ್ರಾಮ ಚಲೋ ಅಭಿಯಾನ ಜಿಲ್ಲೆಯಲ್ಲಿಂದು ಚಾಲನೆ ನೀಡಿದ್ದು, ಪ್ರತಿ ಮನೆಗಳಿಗೆ ಕೇಂದ್ರ ಸರ್ಕಾರದ ಸಾಧನೆ ಕುರಿತ ಕರಪತ್ರ ಹಂಚಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇನ್ನಷ್ಟು ಹೆಚ್ಚಿನ ಸ್ಥಾನ ದೊರೆಯುವಂತಾಗಲಿ ಎನ್ನುವ ಸಂಕಲ್ಪ ಹೊಂದಲಾಗಿದೆ ಎಂದರು.

ಆಯುಷ್ಮಾನ್ ಭಾರತ್, ಜಲಜೀವನ ಮಿಷನ್, ಕಿಸಾನ್ ಸಮ್ಮಾನ್, ನಾರಿಶಕ್ತಿ ಅಧಿನಿಯಮ, ಉಜ್ವಲಾ ಯೋಜನೆ, ಜನೌಷಧಿ ಕೇಂದ್ರಗಳು ಸೇರಿದಂತೆ ಮೋದಿ ನೇತೃತ್ವದ ಸರ್ಕಾರದಲ್ಲಿ ಹಲವಾರು ಜನಪರ ಅಭಿವೃದ್ಧಿ ಕೆಲಸಗಳಾಗಿವೆ. ಇವುಗಳನ್ನು ಪ್ರಾಮಾಣಿಕವಾಗಿ ಜನತೆಗೆ ತಲುಪಿಸುವ ಕಾರ್ಯಕ್ಕೆ ಮುಂದಾಗಿ ಮತ್ತೊಮ್ಮೆ ಮೋದಿ 3.0 ಎಂಬ ಧ್ಯೇಯೋದ್ದೇಶವನ್ನು ಹೊಂದಿದೆ ಎಂದು ಹೇಳಿದರು.

ಜಿಲ್ಲೆಯಾದ್ಯಂತ ಒಟ್ಟಾರೆ 1,222 ಬೂತ್‌ಗಳಿಗೂ ಪ್ರವಾಸಿ ಕಾರ್ಯಕರ್ತ ಹಾಗೂ ಸಂಚಾಲಕರನ್ನು ನೇಮಕಗೊಳಿಸಿದ್ದು ಕೇಂದ್ರ ಸರ್ಕಾರದ ಹತ್ತು ವರ್ಷಗಳ ಸಾಧನೆ ಕುರಿತ ಮಾಹಿತಿಯನ್ನು ಆಯಾ ಭಾಗಗಳ ಸಮಾಜದ ಮುಖಂಡರು, ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು, ಸಂಘದ ಕಾರ್ಯಕರ್ತರನ್ನು ಭೇಟಿ ಮಾಡಿ ಕೇಂದ್ರ ಸರ್ಕಾರದ ಕೊಡುಗೆಗಳನ್ನು ಮನದಟ್ಟು ಮಾಡಲಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಎ. ನರೇಂದ್ರ ಮಾತನಾಡಿ, ಮುಂದಿನ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜನೋಪಯೋಗಿ ಯೋಜನೆಗಳ ಕುರಿತ ಕರಪತ್ರ ಹಂಚಲಾಗಿದ್ದು ಪ್ರತಿಯೊಬ್ಬರೂ ಕೂಡಾ ಸದೃಢ ದೇಶಕ್ಕಾಗಿ ದೈನಂದಿನ ಚಟುವಟಿಕೆಯಲ್ಲಿ ಕೇಂದ್ರದ ಯೋಜನೆ ಕುರಿತು ಅಲ್ಲಲ್ಲಿ ಚರ್ಚಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ನಿಯೋಜಿತ ನಗರಾಧ್ಯಕ್ಷ ಪುಷ್ಪರಾಜ್, ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಸಂತೋಷ್ ಕೋಟ್ಯಾನ್, ನಗರಸಭಾ ಸದಸ್ಯೆ ಲಲಿತಾ ರವಿನಾಯ್ಕ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪರಮೇಶ್, ಬೂತ್ ಅಧ್ಯಕ್ಷ ಮಹೇಶ್‌ಕುಮಾರ್, ಮುಖಂಡರಾದ ರಾಜಕುಮಾರ್, ರಾಕೇಶ್, ಜಯಪ್ರಕಾಶ್, ರಾಜಣ್ಣ, ನವೀನ್ ಹಾಜರಿದ್ದರು.