ಸಾರಾಂಶ
ಚಳ್ಳಕೆರೆ ತಾಲೂಕಿನ ಬೊಮ್ಮನಕುಂಟೆ ಗ್ರಾಮದ ಓಬಳನರಸಿಂಹಸ್ವಾಮಿ ದೇವಸ್ಥಾನದ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ಕೂ ಮುನ್ನ ಮಹಿಳೆಯರು ಪೂರ್ಣಕುಂಭ ಮೇಳದೊಂದಿಗೆ ಗಂಗಾಪೂಜೆಗೆ ತೆರಳಿದರು.
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ತಾಲೂಕಿನ ಪರಶುರಾಮಪುರ ಹೋಬಳಿ ಬೊಮ್ಮನಕುಂಟೆ ಗ್ರಾಮದ ಓಬಳನರಸಿಂಹಸ್ವಾಮಿ ದೇವಸ್ಥಾನದ ವಿಗ್ರಹ ಪ್ರತಿಷ್ಠಾಪನಾ ಕಾರ್ಯ ಅದ್ಧೂರಿಯಾಗಿ ನಡೆಯಿತು. ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಹಾಗೂ ಭಕ್ತರು ಸೇರಿ ವಿಗ್ರಹ ಪ್ರತಿಷ್ಠಾಪನಾ ಕಾರ್ಯ ಯಶಸ್ವಿಗೊಳಸಿದರು.ಈ ವೇಳೆ ಮಾತನಾಡಿದ ಪೂಜಾರಿನರಸಪ್ಪ, ಸ್ವಾಮಿ ದೇವಸ್ಥಾನಕ್ಕೆ ತನ್ನದೇಯಾದ ಇತಿಹಾಸವಿದೆ. ಈ ಭಾಗದ ಸಾವಿರಾರು ಭಕ್ತರ ಆರಾಧ್ಯದೈವ ಶ್ರೀಓಬಳನರಸಿಂಹಸ್ವಾಮಿ ವಿಗ್ರಹ ಪ್ರತಿಷ್ಠಾಪನಾ ಕಾರ್ಯದಲ್ಲಿ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸಿದ್ದಾರೆ. ಎಲ್ಲರಿಗೂ ಸ್ವಾಮಿ, ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ನೀಡಲಿ ಎಂದು ಗ್ರಾಮದ ಜನತೆ ಪರವಾಗಿ ಪ್ರಾರ್ಥಿಸಿರುವುದಾಗಿ ತಿಳಿಸಿದರು.
ವಿಗ್ರಹ ಪ್ರತಿಷ್ಠಾಪನೆಗೂ ಮುನ್ನ ಗ್ರಾಮದ ನೂರಾರು ಮಹಿಳೆಯರು ಕುಂಭಮೇಳದೊಂದಿಗೆ ಹಳ್ಳಕ್ಕೆ ತೆರಳಿ ಗಂಗಾಪೂಜೆ ನೆರವೇರಿಸಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಕುಂಭಹೊತ್ತ ಮಹಿಳೆಯರು ಮಂಗಳವಾದ್ಯದೊಂದಿಗೆ ಸಾಗಿದರು. ವಿವಿಧ ಗ್ರಾಮಗಳಿಂದ ಬಂದಿದ್ದ ಭಕ್ತರು ದೇವರ ದರ್ಶನ ಪಡೆದು ಪುನೀತರಾದರು.ವಿಗ್ರಹ ಪ್ರತಿಷ್ಠಾಪನಾ ಕಾರ್ಯದಲ್ಲಿ ಚಳ್ಳಕೆರೆ ತಾಲೂಕು ಸೇರಿ ರಾಜ್ಯದ ವಿವಿಧ ಭಾಗಗಳಿಂದ ನೂರಾರು ಭಕ್ತರು ಆಗಮಿಸಿದ್ದು, ದೇವಸ್ಥಾನದ ಆಡಳಿತ ಮಂಡಳಿ ಯಾವುದೇ ಸಮಸ್ಯೆ ಉಂಟಾಗದಂತೆ ಎಲ್ಲಾ ರೀತಿಯ ವ್ಯವಸ್ಥೆ ಕೈಗೊಂಡಿದ್ದರು.
ಈ ವೇಳೆ ಎಸ್.ಒ.ಚಿನ್ನೋಬಯ್ಯ, ಈ.ಅಂಜಿನಪ್ಪ, ಎನ್.ಎಂ.ಲಿಂಗಪ್ಪ, ರಾಮಣ್ಣ, ಅಂಜಿನಮೂರ್ತಿ, ಮೂರ್ತಿ, ಮಾರುತಿ, ಮಂಜಪ್ಪ, ಕಾಲುವೇಹಳ್ಳಿ ರಾಘವೇಂದ್ರ ಇತರರು ಭಾಗವಹಿಸಿದ್ದರು.