ಕನ್ನಡಪ್ರಭ ವಾರ್ತೆ ಹಾಸನ
ಗೃಹಲಕ್ಷ್ಮೀ ಯೋಜನೆಯ ಅನುಷ್ಠಾನದಲ್ಲಿ ಕೇಳಿಬಂದಿರುವ ಹಣಕಾಸು ಅವ್ಯವಹಾರ ಹಾಗೂ ಆಡಳಿತಾತ್ಮಕ ಲೋಪಗಳ ಕುರಿತು ರಾಜ್ಯ ಸರ್ಕಾರ ತಕ್ಷಣ ಶ್ವೇತಪತ್ರ ಬಿಡುಗಡೆ ಮಾಡಿ ಜನರಿಗೆ ಸತ್ಯಾಂಶ ತಿಳಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಪ್ರೀತಂ ಗೌಡ ಆಗ್ರಹಿಸಿದರು.ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಿಯಂತ್ರಕ ಮತ್ತು ಮಹಾಲೇಖಪರಿಶೋಧಕರ (ಸಿಎಜಿ) ವರದಿಯಲ್ಲಿ ಹಲವು ಗಂಭೀರ ಅಂಶಗಳು ಬೆಳಕಿಗೆ ಬಂದಿವೆ. ಆದರೂ ಸರ್ಕಾರ ಈವರೆಗೆ ಸಮರ್ಪಕ ಸ್ಪಷ್ಟನೆ ನೀಡದೆ ವಿಷಯವನ್ನು ಮರೆಮಾಚುವ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದರು. ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಕೇಳಿದ್ದ ಪ್ರಶ್ನೆಗಳಿಗೆ ಸರ್ಕಾರ ಇದುವರೆಗೂ ಸ್ಪಷ್ಟ ಉತ್ತರ ನೀಡಿಲ್ಲ. ವಿಷಯದ ಮೂಲವನ್ನು ವಿವರಿಸುವ ಬದಲು ತಪ್ಪಿಸಿಕೊಳ್ಳುವ ಧೋರಣೆ ಅನುಸರಿಸುತ್ತಿದೆ. ಸರ್ಕಾರದ ಈ ಮೌನ ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದರು. ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಸಿಗಬೇಕಾದ ಹಣ ಅನರ್ಹರ ಖಾತೆಗಳಿಗೆ ವರ್ಗಾವಣೆಯಾಗಿರುವುದು, ಕೆಲವು ಖಾತೆಗಳಿಗೆ ಒಂದಕ್ಕಿಂತ ಹೆಚ್ಚು ಬಾರಿ ಹಣ ಜಮೆಯಾಗಿರುವುದು, ಮೃತಪಟ್ಟವರ ಖಾತೆಗಳಿಗೆ ಹಣ ವರ್ಗಾವಣೆಯಾಗಿರುವುದು ಸೇರಿದಂತೆ ಹಲವು ಗಂಭೀರ ಅಕ್ರಮಗಳ ಆರೋಪಗಳು ಕೇಳಿಬಂದಿವೆ. ಈ ಎಲ್ಲ ಪ್ರಕರಣಗಳ ಕುರಿತು ಸರ್ಕಾರ ಸಿಎಜಿಗೆ ಸಂಪೂರ್ಣ ದಾಖಲೆಗಳನ್ನು ಸಲ್ಲಿಸಿ, ರಾಜ್ಯದ ಜನರ ಮುಂದೆ ಪಾರದರ್ಶಕವಾಗಿ ಉತ್ತರಿಸಬೇಕು ಎಂದು ಒತ್ತಾಯಿಸಿದರು.ಜನರು ಪ್ರಶ್ನಿಸುವ ಮುನ್ನವೇ ಸರ್ಕಾರವೇ ಮುಂದಾಗಿ ಯೋಜನೆಯ ಸಂಪೂರ್ಣ ಹಣಕಾಸಿನ ವಿವರಗಳನ್ನು ಒಳಗೊಂಡ ಶ್ವೇತಪತ್ರ ಬಿಡುಗಡೆ ಮಾಡಬೇಕು. ಸಾರ್ವಜನಿಕರ ತೆರಿಗೆ ಹಣ ಹೇಗೆ ಬಳಕೆಯಾಯಿತು, ಎಷ್ಟು ಹಣ ಬಿಡುಗಡೆಯಾಯಿತು, ಯಾರಿಗೆ ತಲುಪಿತು ಹಾಗೂ ಎಲ್ಲಿ ಲೋಪಗಳಾಗಿವೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು. ಗೃಹಲಕ್ಷ್ಮಿ ಯೋಜನೆ ಮಹಿಳೆಯರ ಬದುಕಿಗೆ ಆಸರೆಯಾಗಬೇಕಾಗಿತ್ತು. ಆದರೆ ಈಗ ಅದೇ ಯೋಜನೆ ಅಕ್ರಮ ಮತ್ತು ಅವ್ಯವಹಾರದ ಆರೋಪಗಳಿಂದ ಸುದ್ದಿಯಾಗಿರುವುದು ವಿಷಾದನೀಯ. ಅರ್ಹ ಮಹಿಳೆಯರನ್ನು ಕಡೆಗಣಿಸಿ ಅನರ್ಹರಿಗೆ ಸೌಲಭ್ಯ ನೀಡಿರುವ ಆರೋಪಗಳು ಸತ್ಯವಾಗಿದ್ದರೆ ಅದು ಗಂಭೀರ ಆಡಳಿತ ವೈಫಲ್ಯವಾಗುತ್ತದೆ ಎಂದು ಹೇಳಿದರು. ಈ ವಿಚಾರದಲ್ಲಿ ಸರ್ಕಾರ ಸಮಯೋಚಿತ ಕ್ರಮ ಕೈಗೊಳ್ಳದಿದ್ದರೆ ರಾಜ್ಯದ ಮಹಿಳೆಯರು ಸ್ವಯಂಪ್ರೇರಿತವಾಗಿ ಬೀದಿಗಿಳಿದು ಹೋರಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಎಚ್ಚರಿಸಿದರು.ಅಡ್ಡ ಮತದಾನದ ವರದಿ ಆಂತರಿಕ ದಾಖಲೆ:ಬಿಜೆಪಿಯ ಅಡ್ಡ ಮತದಾನಕ್ಕೆ ಸಂಬಂಧಿಸಿದ ವರದಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಪಕ್ಷದ ಆಂತರಿಕ ವರದಿಯಾಗಿದ್ದು ಸಾರ್ವಜನಿಕವಾಗಿ ಬಹಿರಂಗಪಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಸಿ.ಟಿ. ರವಿ ನೇತೃತ್ವದ ತಂಡ ವಾಸ್ತವಾಂಶಗಳನ್ನು ಪರಿಶೀಲಿಸಿ ವರದಿ ಸಿದ್ಧಪಡಿಸಿದ್ದು, ಅದನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಸಲ್ಲಿಸಲಾಗುತ್ತದೆ. ವರದಿಯಲ್ಲಿರುವ ಅಂಶಗಳ ಆಧಾರದ ಮೇಲೆ ರಾಷ್ಟ್ರೀಯ ನಾಯಕತ್ವ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದರು. ಪಕ್ಷದಲ್ಲಿ ಯಾರೂ ನಿಯಮಗಳಿಗಿಂತ ಮೇಲಲ್ಲ. ಯಾರೇ ತಪ್ಪು ಮಾಡಿದ್ದರೂ ಪಕ್ಷದ ಶಿಸ್ತು ಕ್ರಮಕ್ಕೆ ಒಳಪಡಬೇಕಾಗುತ್ತದೆ. ಈ ವಿಚಾರವನ್ನು ಪಕ್ಷದ ಆಂತರಿಕ ವ್ಯವಸ್ಥೆಯಲ್ಲಿಯೇ ಬಗೆಹರಿಸಿಕೊಳ್ಳಲಾಗುವುದು ಎಂದು ಹೇಳಿದರು.
ಬಿಡದಿ ಟೌನ್ಶಿಪ್ ವಿಚಾರದಲ್ಲಿ ರೈತರ ಪರ ಬಿಜೆಪಿ:ಬಿಡದಿ ಟೌನ್ಶಿಪ್ ಯೋಜನೆ ಕುರಿತು ಪ್ರತಿಕ್ರಿಯಿಸಿದ ಪ್ರೀತಂ ಗೌಡ, ಈ ಹೋರಾಟವನ್ನು ರಾಜಕೀಯವಾಗಿ ನೋಡುವ ಅಗತ್ಯವಿಲ್ಲ. ಇದು ರೈತರ ಬದುಕು ಮತ್ತು ಭೂಮಿಗೆ ಸಂಬಂಧಿಸಿದ ವಿಚಾರವಾಗಿದ್ದು, ಬಿಜೆಪಿ ಸದಾ ರೈತರ ಹಿತಾಸಕ್ತಿಯ ಪರವಾಗಿ ನಿಲ್ಲಲಿದೆ ಎಂದು ಹೇಳಿದರು. ರೈತರಿಗೆ ಯಾವುದೇ ಪಕ್ಷವಿಲ್ಲ. ಬಹುಸಂಖ್ಯಾತ ರೈತರು ಯಾವ ನಿಲುವು ತೆಗೆದುಕೊಳ್ಳುತ್ತಾರೋ ಅದಕ್ಕೆ ಬಿಜೆಪಿ ಬೆಂಬಲ ನೀಡುತ್ತದೆ. ರೈತರು ಟೌನ್ಶಿಪ್ ಬೇಕು ಎಂದರೆ ಅವರ ಪರ, ಬೇಡ ಎಂದರೆ ಅವರ ಪರವೇ ನಿಲ್ಲುತ್ತೇವೆ. ನಮ್ಮ ಪಕ್ಷದ ನಿಲುವು ಯಾವತ್ತೂ ರೈತರ ಹಿತವನ್ನು ಕಾಪಾಡುವುದಾಗಿದೆ ಎಂದು ಹೇಳಿದರು.ಭವಿಷ್ಯದಲ್ಲಿ ಟೌನ್ಶಿಪ್ಗೆ ಹೆಚ್ಚಿನ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದರೂ ಅವರ ಬೇಡಿಕೆಗೆ ಬೆಂಬಲ ನೀಡಲಾಗುವುದು. ರೈತರ ಹೋರಾಟಕ್ಕೆ ಜಾತಿ ಅಥವಾ ರಾಜಕೀಯ ಬಣ್ಣ ಬಳಿಯುವ ಅಗತ್ಯವಿಲ್ಲ. ರೈತರ ಧ್ವನಿಯೇ ಬಿಜೆಪಿಯ ಧ್ವನಿಯಾಗಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಮುಖಂಡರಾದ ಎಸ್.ಡಿ. ಚಂದ್ರು, ಯೋಗೀಶ್ ಜಿಲ್ಲಾ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.