ಮಾಗಡಿ: ರಾಜ್ಯದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ವಿರೋಧ ಪಕ್ಷಗಳು ಈ ಬಗ್ಗೆ ಸುಳ್ಳು ಪ್ರಚಾರ ಮಾಡುತ್ತಿದ್ದು, ಸಾರ್ವಜನಿಕರು ಇದಕ್ಕೆ ಕಿವಿಗೊಡಬಾರದು ಎಂದು ರಾಜ್ಯ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ₹ 1.44.000 ಕೋಟಿ ನೇರ ವರ್ಗಾವಣೆಯನ್ನು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ರಾಜ್ಯದ ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಮತ್ತು ಜೀವನದಲ್ಲಿ ಹೊಸ ಆಶಾಭಾವನೆ ಮೂಡಿಸಲು ಈ ಪಂಚ ಗ್ಯಾರಂಟಿಗಳನ್ನು ತರಲಾಗಿದೆ. ಬಜೆಟ್ನಲ್ಲಿ ವಾರ್ಷಿಕ ₹52.000 ಸಾವಿರ ಕೋಟಿ ರುಪಾಯಿ ಮುಂಗಡವಾಗಿ ಮೀಸಲಿಟ್ಟು, ಕಳೆದ ಮೂರು ವರ್ಷಗಳಿಂದ ಈ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ ಎಂದು ತಿಳಿಸಿದರು.ಇಡೀ ದೇಶದಲ್ಲೇ ಯಾವುದೇ ರಾಜ್ಯ ಮಾಡದ ಸಾಧನೆಯನ್ನು ಕರ್ನಾಟಕ ಮಾಡಿದೆ. ಕೃಷಿಕರು ಸೇರಿದಂತೆ ಒಟ್ಟು ಫಲಾನುಭವಿಗಳಿಗೆ ಇದುವರೆಗೆ 1.44.000 ಕೋಟಿ ರುಪಾಯಿಗಳಿಗೂ ಹೆಚ್ಚು ಹಣವನ್ನು ಯಾವುದೇ ಮಧ್ಯವರ್ತಿಗಳಿಲ್ಲದೆ, ಲಂಚದ ಹಾವಳಿಯಿಲ್ಲದೆ ನೇರವಾಗಿ ಡಿಬಿಟಿ ಮೂಲಕ ತಲುಪಿಸಲಾಗಿದೆ. ಮುಂಬರುವ ದಿನಗಳಲ್ಲಿ ಇದು 2 ಲಕ್ಷ ಕೋಟಿ ರೂಪಾಯಿಗಳನ್ನು ದಾಟುವ ನಿರೀಕ್ಷೆಯಿದೆ ಎಂದು ರೇವಣ್ಣ ವಿವರಿಸಿದರು.
ಲೋಪದೋಷಗಳ ತಿದ್ದುಪಡಿ ಮಾತ್ರ, ಯೋಜನೆ ನಿಲ್ಲಲ್ಲ:ಪ್ರಸ್ತುತ ಗೃಹಲಕ್ಷ್ಮಿ ಯೋಜನೆಯಡಿ ಮೃತಪಟ್ಟ ಕುಟುಂಬಗಳಿಗೂ ಹಣ ತಲುಪುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳ ಜೊತೆ ಚರ್ಚಿಸಿ ಪರಿಶೀಲಿಸಿ ಸೂಕ್ತ ಫಲಾನುಭವಿಗಳಿಗೆ ನೀಡಲಾಗುವುದು. ಯಾವುದೇ ಕಾರಣಕ್ಕೂ ಯೋಜನೆ ನಿಲ್ಲುವುದಿಲ್ಲ. ವಿರೋಧ ಪಕ್ಷದವರು ಇದನ್ನೇ ದೊಡ್ಡದಾಗಿ ಬಿಂಬಿಸುತ್ತಿದ್ದು ಯೋಜನೆಗಳನ್ನು ನಿಲ್ಲಿಸುವ ಯಾವುದೇ ಉದ್ದೇಶ ಸರ್ಕಾರಕ್ಕಿಲ್ಲ. ಆದರೆ, ಎಲ್ಲೆಲ್ಲಿ ಹಣ ಪೋಲಾಗುತ್ತಿದೆಯೋ ಅಥವಾ ದುರುಪಯೋಗವಾಗುತ್ತಿದೆಯೋ ಅದನ್ನು ಸರಿಪಡಿಸುವುದು ನಮ್ಮ ಮುಖ್ಯ ಉದ್ದೇಶ ಎಂದರು.
ಉದಾಹರಣೆಗೆ, ಗೃಹಜ್ಯೋತಿ ಯೋಜನೆಯಡಿ ಒಂದೇ ಮನೆಯನ್ನು ಮೂರು ಭಾಗ ಮಾಡಿಕೊಂಡು, ಮೂರು ಪ್ರತ್ಯೇಕ ಮೀಟರ್ಗಳನ್ನು ಪಡೆದು ಸೌಲಭ್ಯ ದುರುಪಯೋಗ ಪಡಿಸಿಕೊಳ್ಳುವಂತಹ ಕೆಲವು ಲೋಪಗಳು ಕಂಡುಬಂದಿವೆ. ಇಂತಹ ಲೋಪದೋಷಗಳನ್ನು ಮಾತ್ರ ಸರಿಪಡಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಮನೆ ಬಾಗಿಲಿಗೆ ಅಧಿಕಾರಿಗಳು:
ಗ್ಯಾರಂಟಿ ಯೋಜನೆಗಳ ಜಾರಿಯಲ್ಲಿ ಮತ್ತಷ್ಟು ಪಾರದರ್ಶಕತೆ ತರಲು ಕಾರ್ಯದರ್ಶಿಗಳು ನೇರವಾಗಿ ಸಾರ್ವಜನಿಕರ ಮನೆ ಬಾಗಿಲಿಗೆ ಭೇಟಿ ನೀಡಿ ಮಾಹಿತಿ ಭರ್ತಿ ಮಾಡಿಕೊಳ್ಳಲಿದ್ದಾರೆ. ಇದರಲ್ಲಿ ಕೇವಲ ಅರ್ಹತೆ ಮತ್ತು ಹೊಣೆಗಾರಿಕೆ ಮುಖ್ಯವಾಗಿದೆಯೇ ಹೊರತು ಯಾವುದೇ ಜಾತಿ ರಾಜಕಾರಣವಿಲ್ಲ. ನಮ್ಮ ಸರ್ಕಾರ ನುಡಿದಂತೆ ನಡೆಯುವ ಸರ್ಕಾರವಾಗಿದ್ದು, ತಲಾದಾಯದಲ್ಲಿ ರಾಷ್ಟ್ರಕ್ಕೆ ಮೊದಲ ಸ್ಥಾನದಲ್ಲಿ ನಮ್ಮ ರಾಜ್ಯವಿದೆ. ಬೇರೆ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿದ್ದರೂ ಕೂಡ ಗ್ಯಾರಂಟಿ ಯೋಜನೆ ಕೊಡುತ್ತೇವೆ ಎಂದು ಘೋಷಣೆ ಮಾಡಿ ಅಲ್ಲಿ ಕೊಡದ ಪರಿಸ್ಥಿತಿ ನಿರ್ಮಾಣವಾಗಿದೆ ವಿವರಿಸಿದರು.ಈ ವೇಳೆ ಪುರಸಭೆ ಮಾಜಿ ಅಧ್ಯಕ್ಷ ಮಂಜುನಾಥ್, ಗ್ರಾಮದ ಮುಖಂಡರಾದ ನಾರಾಯಣಪ್ಪ, ಸಿದ್ದರಾಜು, ಜಯಣ್ಣ, ನರಸಿಂಹಮೂರ್ತಿ, ರಂಗನಾಥ್, ಗುರುಸಿದ್ದಪ್ಪ, ರವಿಕುಮಾರ್, ಅಶ್ವತ್ಥ್, ಶ್ರೀನಿವಾಸ್, ಶಿವಲಿಂಗಯ್ಯ, ಸಂತೋಷ್ ಇತರರು ಭಾಗವಹಿಸಿದ್ದರು.