ಕಸದಿಂದ ರಸ ವಸ್ತು ಪ್ರದರ್ಶನ ಉದ್ಘಾಟಿಸಿದ ಡಯಟ್ ಉಪಪ್ರಾಚಾರ್ಯ ಕನ್ನಡಪ್ರಭ ವಾರ್ತೆ ಕುಮಟಾ
ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ ಮತ್ತು ಸೃಜನಶೀಲತೆ ಬೆಳೆಸುವುದು ಇಂದಿನ ಶಿಕ್ಷಣ ವ್ಯವಸ್ಥೆಯ ಪ್ರಮುಖ ಉದ್ದೇಶವಾಗಿದೆ ಎಂದು ಡಯಟ್ ಉಪಪ್ರಾಚಾರ್ಯ ಜಿ.ಎಸ್. ಭಟ್ಟ ಹೇಳಿದರು.ಇಲ್ಲಿನ ಕೊಂಕಣ ಎಜುಕೇಶನ್ ಟ್ರಸ್ಟ್ ರಂಗಾದಾಸ ಶಾನಭಾಗ ಹೆಗಡೆಕರ ಬಾಲಮಂದಿರದಲ್ಲಿ ವಿದ್ಯಾರ್ಥಿಗಳು ತಯಾರಿಸಿ ಪ್ರದರ್ಶಿಸಿದ ''''ಕಸದಿಂದ ರಸ'''' ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಇಂತಹ ಚಿಕ್ಕ ವಯಸ್ಸಿನಲ್ಲಿ ಆತ್ಮವಿಶ್ವಾಸ, ಅಭಿವ್ಯಕ್ತಿ ಸಾಮರ್ಥ್ಯ ಮತ್ತು ಸಂಸ್ಕಾರಗಳನ್ನು ಬೆಳೆಸುವುದು ಅತ್ಯಗತ್ಯ. ಕಸದಿಂದ ಉಪಯುಕ್ತ ವಸ್ತುಗಳನ್ನು ಸೃಷ್ಟಿಸುವ ಕಲಿಕೆ ಮಕ್ಕಳಲ್ಲಿ ಪರಿಸರ ಜಾಗೃತಿ ಮತ್ತು ಸಂಶೋಧನಾ ಮನೋಭಾವ ಬೆಳೆಸುತ್ತದೆ ಎಂದು ಶ್ಲಾಘಿಸಿದರು.ಟ್ರಸ್ಟ್ ಉಪಾಧ್ಯಕ್ಷ ದಾಮೋದರ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂತಹ ಕಾರ್ಯಕ್ರಮಗಳು ಮಕ್ಕಳ ಅಂತರಂಗದಲ್ಲಿರುವ ಪ್ರತಿಭೆ ಹೊರತರುವ ವೇದಿಕೆಯಾಗುತ್ತವೆ. ಕೇವಲ ಪಠ್ಯಪುಸ್ತಕದ ವಿದ್ಯೆ ಮಾತ್ರವಲ್ಲ, ಕೈಚಳಕ, ಕಲ್ಪನೆ ಮತ್ತು ತಂಡದ ಕೆಲಸದ ಮನೋಭಾವವೂ ಸಮಾನವಾಗಿ ಅಗತ್ಯ ಎಂದರು.
ಶೈಕ್ಷಣಿಕ ಸಲಹೆಗಾರ ಆರ್.ಎಚ್. ದೇಶಭಂಡಾರಿ, ಇಂತಹ ಪ್ರದರ್ಶನಗಳು, ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುತ್ತವೆ ಎಂದು ಮಕ್ಕಳನ್ನು ಪ್ರಶಂಸಿಸಿದರು.
ಪ್ರದರ್ಶನದಲ್ಲಿ ಬಗೆಬಗೆ ಮಾದರಿ ಮನೆಗಳು, ಹೂವಿನ ಕುಂಡಗಳು, ಆಟಿಕೆಗಳು, ಗೃಹೋಪಕರಣ ಮಾದರಿಗಳು, ಅಲಂಕಾರಿಕ ವಸ್ತುಗಳು ಮುಂತಾದವು, ಪ್ಲಾಸ್ಟಿಕ್ ಬಾಟಲಿ, ಕಾಗದದ ಪೆಟ್ಟಿಗೆ, ಹಳೆಯ ಸಿಡಿ, ಬಟ್ಟೆಯ ತುಂಡಿನಂತಹ ತ್ಯಾಜ್ಯ ವಸ್ತುಗಳಿಂದ ತಯಾರಿಸಲಾದ ಕಲಾಕೃತಿಗಳು ಗಮನ ಸೆಳೆಯಿತು.
ಮುಖ್ಯ ಶಿಕ್ಷಕಿ ಸಾವಿತ್ರಿ ಹೆಗಡೆ ಸ್ವಾಗತಿಸಿದರು. ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕರಾದ ಸುಜಾತಾ ನಾಯ್ಕ, ಗಣೇಶ ಜೋಶಿ, ಇತರ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಪಾಲಕರು ಮಕ್ಕಳ ಕಲಾಕೃತಿಗಳನ್ನು ವೀಕ್ಷಿಸಿ ಮಕ್ಕಳ ಸೃಜನಶೀಲತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.