ಲಕ್ಷ್ಮೇಶ್ವರ: ಸನಾತನ ಧರ್ಮದ ಪ್ರತಿಯೊಂದು ಆಚರಣೆ, ತಪಸ್ಸು, ಹೋಮ ಕೇವಲ ಹಿಂದೂಗಳಿಗೆ ಮಾತ್ರವಲ್ಲದೆ ಈ ಭೂಮಿಯ ಮೇಲಿನ ಪ್ರತಿಯೊಬ್ಬರಿಗೂ ಹೌದು. ಅಂತಹ ಸನಾತನ ಧರ್ಮ ನಾಶ ಮಾಡುವ ಪ್ರಯತ್ನ ನಡೆಯುತ್ತಿರುವುದು ತುಂಬಾ ಬೇಸರದ ಸಂಗತಿ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕ ಗುರುಪ್ರಸಾದ ಗೌಡ ಹೇಳಿದರು.

ಸಮೀಪದ ಶಿಗ್ಲಿ ಗ್ರಾಮದ ಶಾಖಾಂಬರಿ ಸಮುದಾಯ ಭವನದಲ್ಲಿ ಹಿಂದೂ ಜನ ಜಾಗೃತಿ ಸಮಿತಿಯಿಂದ ರಾಷ್ಟ್ರ-ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಹಿಂದೂ ಸಮಾಜದ ಮೇಲೆ ವಿವಿಧ ಪ್ರಕಾರದ ಆಘಾತ, ಅತ್ಯಾಚಾರ, ಹಲ್ಲೆಗಳು, ಗೋಹತ್ಯೆ, ದೇವರ ವಿಡಂಬನೆ, ಅಪಮಾನ ಮುಂತಾದ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ಸಮಿತಿ ಕಳೆದ 23 ವರ್ಷಗಳಿಂದ ಧರ್ಮಜಾಗೃತಿ ಕಾರ್ಯಕ್ರಮ ಆಯೋಜನೆ ಮಾಡುತ್ತಿದೆ. ಯಾವಾಗ ಅಯೋಧ್ಯೆ ರಾಮಮಂದಿರದ ಮೇಲೆ ಭಗವಾಧ್ವಜ ಸ್ಥಾಪಿಸಲಾಯಿತೋ ಆಗಿನಿಂದಲೇ ನಾವೆಲ್ಲರೂ ಹಿಂದೂರಾಷ್ಟ್ರ ಸ್ಥಾಪನೆಯ ಯುಗದ ಪ್ರಾರಂಭದ ಹೆಜ್ಜೆ ಇಟ್ಟಿದ್ದೇವೆ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.

ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಹಿಂದೂಗಳು ಜಾತಿ-ಪಂಥ ಮರೆತು ಸಂಘಟಿತರಾಗಬೇಕು. ಕೇವಲ ಭಾಷಣಕ್ಕೆ ಸೀಮಿತವಾಗದೆ, ಪ್ರತಿದಿನ ಒಂದು ಗಂಟೆ ಧರ್ಮಕಾರ್ಯಕ್ಕಾಗಿ ಸಮಯ ಮೀಸಲಿಡಬೇಕು. ಹಿಂದೂ ದೇವಸ್ಥಾನಗಳ ಸರ್ಕಾರೀಕರಣ, ದೇಶದಲ್ಲಿ ವಕ್ಫ್ ಕಾನೂನಿನ ದುರ್ಬಳಕೆ, ಲವ್ ಜಿಹಾದ್, ಹಲಾಲ್ ಜಿಹಾದ್, ಬಲವಂತದ ಮತಾಂತರದ ಮೂಲಕ ಹಿಂದೂ ಸಮಾಜದ ಮೇಲೆ ಆಘಾತಗಳು ಹೆಚ್ಚುತ್ತಿವೆ. ಹಿಂದೂ ದೇವಸ್ಥಾನಗಳ ರಕ್ಷಣೆ, ಧಾರ್ಮಿಕ ಸ್ವಾತಂತ್ರ್ಯ, ಸಾಂಸ್ಕೃತಿಕ ಮೌಲ್ಯಗಳ ಸಂರಕ್ಷಣೆಗಾಗಿ ಈ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಘೋಷಿಸುವುದಕ್ಕಾಗಿ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ''''ಹಿಂದವೀ ಸ್ವರಾಜ್ಯ''''ದ ಸಂಕಲ್ಪದೊಂದಿಗೆ ಹಿಂದೂ ರಾಷ್ಟ್ರದ ನಿರ್ಮಾಣ ಯಜ್ಞದಲ್ಲಿ ಕೈಜೋಡಿಸಿ ಎಂದು ಕರೆ ನೀಡಿದರು.

ಯುವ ಮುಖಂಡ ಆದೇಶ ಹುಲಗೂರು ಮಾತನಾಡಿ, ಭಾರತದಲ್ಲಿ ಗುರುಕುಲ ಪದ್ಧತಿ ಮರಳಿ ಸ್ಥಾಪಿಸುವ ಕಾಲ ಬಂದಾಗಿದೆ. ಇನ್ನಾದರೂ ಹಿಂದೂ ಸಮಾಜ ಜಾತಿ ಜಾತಿಯಲ್ಲಿ ಸಿಲುಕಿ ಹಾಕಿಕೊಳ್ಳದೆ ನಾವೆಲ್ಲ ಒಂದು ಎಂದು ಮುಂದೆ ಬಂದರೆ ಹಿಂದೂ ಸಮಾಜದ ಮೇಲೆ ಆಗುತ್ತಿರುವ ಅತ್ಯಾಚಾರ, ಹಲ್ಲೆ, ಅಪಮಾನಗಳ ವಿರುದ್ಧ ಹೋರಾಡಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ 200ಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು. ಹಿಂದೂ ಜನ ಜಾಗೃತಿ ಸಮಿತಿಯ ಲಕ್ಷ್ಮೀ ತಟ್ಟಿ, ಅಶೋಕ ಭೋಜ, ಶೋಭಾ ಇಟಗಿ, ಶಾಂತಾ ಹುಲಕೋಟಿ, ಪ್ರಕಾಶ ಬೆಟಗೇರಿ, ರಮೇಶ ಬೂದಿಹಾಳ, ಸುರೇಶ ಗೋಧಿ, ಕೃಷ್ಣ ಬಡ್ನಿ, ನೀಲಾಂಬಿಕಾ ಹಡಪದ ಇದ್ದರು. ಸುಮಾ ಕುಂಬಾರ, ಪ್ರವೀಣ ಬೆನ್ನೂರು ಕಾರ್ಯಕ್ರಮ ನಿರೂಪಿಸಿದರು.