ಕನ್ನಡಪ್ರಭ ವಾರ್ತೆ ಮೈಸೂರುರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ (ಎಸ್ಐಆರ್) ವಿಶೇಷ ಪರಿಷ್ಕರಣೆಯನ್ನು ಚುನಾವಣಾ ಆಯೋಗ ಪಾರದರ್ಶಕವಾಗಿ ನಡೆಸಿ ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿಹಿಡಿಯಬೇಕು ಎಂದು ನಗರಪಾಲಿಕೆ ಮಾಜಿ ಸದಸ್ಯ ಕೆ.ವಿ. ಮಲ್ಲೇಶ್‌ ಹೇಳಿದ್ದಾರೆ.ಎಸ್ಐಆರ್ ಉದ್ದೇಶ ಒಳ್ಳೆಯದೇ ಆದರೂ ಅಳವಡಿಕೆಯಲ್ಲಿ ವ್ಯತ್ಯಾಸವಾದರೆ ಪ್ರಜಾಪ್ರಭುತ್ವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಯಾರೂ ಮತದಾನದಿಂದ ವಂಚಿತರಾಗಬಾರದು ಎಂಬುದು ಎಸ್ಐಆರ್‌ ಮೂಲ ಮಂತ್ರವಾಗಲಿ ಎಂದು ಅವರು ತಿಳಿಸಿದ್ದಾರೆ.ಎಸ್ಐಆರ್ ಪ್ರಕ್ರಿಯೆ ವ್ಯವಸ್ಥಿತ ಮತಪಟ್ಟಿ ರಚನೆಗೆ ಕಾರಣವಾಗಬೇಕೇ ಹೊರತು ಯಾವುದೋ ಒಂದು ಸಮುದಾಯವನ್ನೋ, ಒಂದು ವರ್ಗವನ್ನೋ ಹೊರಗಿಡುವ ದುರುದ್ದೇಶವಿರಬಾರದು. ಈ ಎರಡೂ ರಾಜ್ಯದಲ್ಲಿ ಸುಮಾರು 1.5 ಕೋಟಿ ಜನರನ್ನು ಮತಪಟ್ಟಿಯಿಂದ ಹೊರಗಿಡಲಾಗಿದೆ ಎಂದರು. ಎಸ್ಐಆರ್ ಪ್ರಕ್ರಿಯೆಗೆ ದಾಖಲೆ ಕಡ್ಡಾಯ ಮಾಡಿರುವ ಚುನಾವಣಾ ಆಯೋಗದ ನಡೆಗೆ ಆಕ್ಷೇಪದ ಜತೆಗೆ ಅನುಮಾನಕ್ಕೆ ಕಾರಣವಾಗಿದೆ. ಇಂದಿಗೂ ರಾಜ್ಯದ ಸಾಕಷ್ಟು ಹಳ್ಳಿಗಳಲ್ಲಿ, ಎಚ್.ಡಿ.ಕೋಟೆ, ಹುಣಸೂರು, ಪಿರಿಯಾಪಟ್ಟಣ ತಾಲೂಕಿನ ಸಾಕಷ್ಟು ಹಾಡಿಗಳಲ್ಲಿ ಸೂಕ್ತ ದಾಖಲೆಗಳು ಇಲ್ಲ ಎಂದರು.ಗುಟ್ಟುಗುಟ್ಟಾಗಿ ಪಟ್ಟಿ ಪರಿಷ್ಕರಣೆ ಮಾಡುವುದು ರಾಜಕೀಯ ದುರುದ್ದೇಶದ ಭಾಗವಾಗುತ್ತದೆಯೇ ಹೊರತು ಅದರಲ್ಲಿ ಬೇರಾವುದೇ ಹಿತಾಸಕ್ತಿ ಕಾಣಿಸುವುದಿಲ್ಲ ಪ್ರಜಾಪ್ರಭುತ್ವದಲ್ಲಿ ಮತದಾರನಿಗೆ ಮಾಹಿತಿ ಸಿಗದಿದ್ದರೆ ಹೇಗೆ? ಈ ಬಗ್ಗೆ ಕೇಂದ್ರ ಸರ್ಕಾರ, ಚುನಾವಣಾ ಆಯೋಗ ಎಚ್ಚೆತ್ತು ನಿರ್ಭೀತ, ಮುಕ್ತ, ನ್ಯಾಯಸಮ್ಮತ ಮತಪಟ್ಟಿ ಪರಿಷ್ಕರಣೆ ನಡೆಸುವತ್ತ ಗಮನಹರಿಸಬೇಕು ಎಂದು ಅವರು ತಿಳಿಸಿದ್ದಾರೆ.