ಜಿ.ಸೋಮಶೇಖರ
ಕೊಟ್ಟೂರು: ಸರ್ಕಾರ ಕೊಟ್ಟೂರಿನಲ್ಲಿ ರಾಗಿ ಬೆಂಬಲ ಬೆಲೆಯ ಖರೀದಿ ಕೇಂದ್ರ ಆರಂಭಿಸಿದೆಯಾದರೂ ರೈತರು ಮಾರಾಟಕ್ಕೆ ತರುತ್ತಿರುವ ರಾಗಿ ಟ್ರ್ಯಾಕ್ಟರ್ಗಳ ಸಾಲು ದಿನದಿನಕ್ಕೂ ನೂರಾರು ಮೀಟರ್ಗಳಷ್ಟು ಉದ್ದವಾಗುವ ಮೂಲಕ ರೈತರನ್ನು ಬಸವಳಿಯುವಂತೆ ಮಾಡಿದೆ.ಮೇ 31ರ ವರೆಗೆ ರಾಗಿ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಲು ಅವಕಾಶವಿದೆ. ಅಷ್ಟರೊಳಗೆ ಮಾರಾಟ ಮಾಡಿ ಬೆಂಬಲ ಬೆಲೆಯ ಲಾಭ ಪಡೆಯಬೇಕು ಎಂಬ ರೈತರ ಆಶಯ ಈಡೇರುವಂತೆ ಕಾಣುತ್ತಿಲ್ಲ. ಸರ್ಕಾರ ರಾಗಿಗೆ ₹4886 ಬೆಂಬಲ ಬೆಲೆ ಘೋಷಿಸಿದೆ. ಮುಕ್ತ ಮಾರುಕಟ್ಟೆಯಲ್ಲಿ ರಾಗಿ ದರ ಕಡಿಮೆ ಇರುವ ಕಾರಣ ರೈತರು ನಿತ್ಯ ಲೋಡ್ ತುಂಬಿದ ಟ್ರ್ಯಾಕ್ಟರ್ಗಳೊಂದಿಗೆ ಕೊಟ್ಟೂರು ಎಪಿಎಂಸಿ ಆವರಣದಲ್ಲಿ ಜಮಾವಣೆಯಾಗುತ್ತಿದ್ದಾರೆ.
ಕೊಟ್ಟೂರು ಕೇಂದ್ರದಲ್ಲಿ ನೋಂದಣಿ ಮಾಡಿಸಿರುವ 2761 ರೈತರು ಈಗಾಗಲೇ 79,968.5 ಕ್ವಿಂಟಲ್ ರಾಗಿ ಮಾರಾಟ ಮಾಡಿದ್ದಾರೆ. ಇದೀಗ ಮತ್ತೆ 25 ಸಾವಿರ ಕ್ವಿಂಟಲ್ ರಾಗಿ ಖರೀದಿ ಕೇಂದ್ರದಲ್ಲಿ ಖರೀದಿಯಾಗಿದೆ. ರಾಗಿಗೆ ಬಂಪರ್ ಬೆಲೆ ಘೋಷಣೆಯ ನಂತರದಲ್ಲಿ ಕೊಟ್ಟೂರು ಭಾಗದಲ್ಲಿ ಹೆಚ್ಚಿನ ರೈತರು ಬೆಳೆಯಲಾರಂಭಿಸಿದ್ದಾರೆ. ಕಳೆದ ವರ್ಷ ರಾಗಿ ಖರೀದಿ ಕೇಂದ್ರದಲ್ಲಿ ₹4322 ಬೆಂಬಲ ಬೆಲೆಗೆ 1,05,388 ಕ್ವಿಂಟಲ್ ರಾಗಿ ಮಾರಾಟಕ್ಕೆ ರೈತರು ನೋಂದಣಿ ಮಾಡಿದ್ದರು. ಈ ಬಾರಿ ಬೆಂಬಲ ಬೆಲೆಯನ್ನು ಮತ್ತಷ್ಟು ಏರಿಸಿರುವುದರಿಂದ ರೈತರಿಗೆ ಹೆಚ್ಚು ಲಾಭ ಸಿಗುವಂತಾಗಿದೆ.ಕೊಟ್ಟೂರಿನ ಖರೀದಿ ಕೇಂದ್ರದಲ್ಲಿ ಮೊದಲು ಒಂದೇ ಕೌಂಟರ್ನಲ್ಲಿ ಮಾರಾಟ ಪ್ರಕ್ರಿಯೆ ನಡೆಯುತ್ತಿತ್ತು. ಈ ವರ್ಷ ಹೆಚ್ಚುವರಿ ಕೌಂಟರ್ ತೆರೆಯಲಾಗಿದೆ. ಆದರೂ ಟ್ರ್ಯಾಕ್ಟರ್ ಸಾಲು ಕರಗುತ್ತಿಲ್ಲ. ಟ್ರ್ಯಾಕ್ಟರ್ ಬಾಡಿಗೆ, ಊಟ, ತಿಂಡಿ ಖರ್ಚು ರೈತರಿಗೆ ಹೊರೆ ಆಗುತ್ತಿದೆ. ಜತೆಗೆ ಪ್ರತಿ ದಿನ ರಾತ್ರಿ ನಿದ್ರೆ ಇಲ್ಲದೇ ಟ್ರ್ಯಾಕ್ಟರ್ ಕಾಯಬೇಕಾಗಿದೆ.
ಸರ್ಕಾರದ ಬೆಂಬಲ ಬೆಲೆಯ ಸಂಪೂರ್ಣ ಲಾಭ ಪಡೆಯಲು ತ್ವರಿತವಾಗಿ ಮಾರಾಟವಾಗಿ ಅದರ ಮೊತ್ತ ಕೂಡಲೇ ಕೈ ಸೇರಬೇಕೆನ್ನುವುದು ರೈತರ ಆಶಯವಾಗಿದೆ.
ಕೊಟ್ಟೂರು ಖರೀದಿ ಕೇಂದ್ರದಲ್ಲಿ 79,968 ಕ್ವಿಂಟಲ್ ರಾಗಿ ಮಾರಾಟಕ್ಕೆ ನೋಂದಣಿಯಾಗಿತ್ತು. ಈವರೆಗೆ 49,155 ಕ್ವಿಂಟಲ್ ರಾಗಿ ಖರೀದಿಸಲಾಗಿದೆ. ಈ ಪೈಕಿ 11 ಸಾವಿರ ಕ್ವಿಂಟಲ್ ರಾಗಿಗೆ ಸರ್ಕಾರದ ಬೆಂಬಲ ಬೆಲೆಯ ಮೊತ್ತ ಜಮಾ ಆಗಿದೆ ಎನ್ನುತ್ತಾರೆ ಕೊಟ್ಟೂರು ಖರೀದಿ ಕೇಂದ್ರದ ವ್ಯವಸ್ಥಾಪಕ ಜಿ.ಕೊಟ್ರೇಶ್.