ಹೊಸಕೋಟೆ: ಸಮಾಜದಲ್ಲಿ ಹೆಣ್ಣು ಹೆಣ್ಣನ್ನು ದೂಷಿಸುವ ಬದಲು ಪರಸ್ಪರ ಗೌರವಿಸುವಂತಾಗಬೇಕು. ಆ ರೀತಿ ಗೌರವಿಸುವ ಮನಸ್ಸು ಮಾಡಿದಾಗ ಮಾತ್ರ ಹೆಣ್ಣು ಮತ್ತಷ್ಟು ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯ ಎಂದು ಸಮಸ್ತ ಫೌಂಡೇಷನ್ ಸಂಸ್ಥಾಪಕಿ ಪ್ರತಿಭಾ ಶರತ್ ಬಚ್ಚೇಗೌಡ ತಿಳಿಸಿದರು.
ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ದೇವನಗೊಂದಿ ಗ್ರಾಪಂ ವ್ಯಾಪ್ತಿಯ ಡಿ.ಹೊಸಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕುಟುಂಬದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು. ಜೊತೆಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲೂ ಅವಿರತ ಶ್ರಮಿಸುತ್ತಿದ್ದಾಳೆ. ಇದರ ನಡುವೆ ಸಮಾಜ ಮತ್ತು ಕುಟುಂಬವನ್ನು ಸಮತೋಲನದಿಂದ ನಿರ್ವಹಿಸಿ ನಿಭಾಯಿಸುವ ಹೊಣೆಯಲ್ಲಿ ಮಹಿಳೆಯರು ಎದೆಗುಂದದೆ ಯಶಸ್ವಿ ಜೀವನ ನಡೆಸುತ್ತಿರುವುದು ಪ್ರಶಂಶನೀಯ. ಆದರೆ ಹೆಣ್ಣು ಹೆಣ್ಣನ್ನೆ ಪರಸ್ಪರ ಟೀಕಿಸುವುದನ್ನು ಬಿಟ್ಟು ಗೌರವಿಸಬೇಕು. ಆಗ ಕುಟುಂಬದ ಜೊತೆಗೆ ಸಮಾಜದ ಅಭಿವೃದ್ಧಿಯೂ ಸಾಧ್ಯ ಎಂದರು.ಮುಖ್ಯವಾಗಿ ಮನೆಯಲ್ಲಿ ಹೆಣ್ಣುಮಕ್ಕಳಿಗೆ ಸ್ವತಂತ್ರವಾಗಿ ಬದುಕಲು ಬಿಡಿ. ಪ್ರತಿಯೊಂದು ವಿಷಯದಲ್ಲೂ ಬೆನ್ನುತಟ್ಟಿ ಪ್ರೋತ್ಸಾಹಿಸಬೇಕು. ಶಿಕ್ಷಣ, ಆಟ-ಪಾಠ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಅವರ ಇಷ್ಟದಂತೆ, ಇಚ್ಚೆಯಂತೆ, ಅವರ ಆಯ್ಕೆಯಲ್ಲಿ ಅವರನ್ನು ಬೆಳೆದು ಸಾಧನೆ ಮಾಡಲು ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು. ಆಗ ಮಾತ್ರ ಸಮಾಜದಲ್ಲಿ ಸತ್ಪ್ರಜೆಗಳಾಗಿ ಮಕ್ಕಳು ಬೆಳೆಯುತ್ತಾರೆ. ಪೋಷಕರು ಹೆಣ್ಣು ಮಕ್ಕಳ ಉನ್ನತ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಶೈಕ್ಷಣಿಕ ಅಭಿವೃದ್ದಿಯಿಂದ ಸಮಾಜದ ಅಭಿವೃದ್ಧಿ ಸಾಧ್ಯ. ಅದನ್ನು ಮನಗಂಡು ಪ್ರತಿಯೊಬ್ಬರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಪಿಡಿಒ ಹರೀಶ್ ಮಾತನಾಡಿ, ಪ್ರತಿ ವರ್ಷ ಗ್ರಾಮ ಪಂಚಾಯತಿಯಿಂದ ಮಹಿಳಾ ದಿನಾಚರಣೆ ಪ್ರಯುಕ್ತ ವಿವಿಧ ಕ್ರೀಡೆಗಳನ್ನು ಆಯೋಜಿಸುವ ಮೂಲಕ ವಿಜೇತರಿಗೆ ಬಹುಮಾನ ವಿತರಿಸಿ ಪ್ರೋತ್ಸಾಹಿಸುತ್ತಿದ್ದೇವೆ. ಸ್ತ್ರೀ ಶಕ್ತಿ ಸಂಘಗಳು ಸಮೃದ್ಧಿಯಾಗಿ ಬೆಳೆಯುತ್ತಿವೆ. ಸರ್ಕಾರದಿಂದ ಸಾಲ ಸೌಲಭ್ಯ ದೊರೆಯುತ್ತಿದೆ. ಮಹಿಳೆಯರು ಸಿದ್ದ ಪಡಿಸುವ ವಸ್ತುಗಳನ್ನು ಸಂತೆಯಲ್ಲಿ ಮಾರಾಟ ಮಾಡಲು ಸಹ ಅನುವು ಮಾಡಿಕೊಡಲಾಗಿದೆ. ಗ್ರಾಮೀಣ ಮಹಿಳೆಯರು ಧೈರ್ಯದಿಂದ ಕುಶಲ ಕಲೆಗಳನ್ನು ಅಭಿವೃದ್ಧಿಪಡಿಸಿಕೊಂಡು ಗುಡಿ ಕೈಗಾರಿಕೆಗಳಲ್ಲಿ ತೊಡಗಿಕೊಳ್ಳಬೇಕು. ಕೇವಲ ಉದ್ಯಮವಷ್ಟೇ ಅಲ್ಲದೆ, ಕೃಷಿ, ಹೈನುಗಾರಿಕೆಗಳಲ್ಲೂ ಮಹಿಳೆಯರು ಅಭಿವೃದ್ಧಿ ಕಂಡುಕೊಳ್ಳಬೇಕು. ಸರ್ಕಾರಿ ಸವಲತ್ತುಗಳನ್ನು ಸದ್ಬಳಸಿಕೊಂಡು ಮುಂದು ವರಿಯಬೇಕು ಎಂದು ಹೇಳಿದರು.ಅನುಗೊಂಡನಹಳ್ಳಿ ಹೋಬಳಿ ಮುಖಂಡ ಬಿಎಂ.ಪ್ರಕಾಶ್ ಮಾತನಾಡಿ, ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟದಲ್ಲಿ ಒಂದು ಸಾವಿರ ಮಹಿಳೆಯರನ್ನು ಸೇರಿಸಿ ದೊಡ್ಡ ಮಟ್ಟದಲ್ಲಿ ಮಹಿಳಾ ದಿನಾಚರಣೆ ಆಚರಿಸುವ ವಿಶ್ವಾಸವನ್ನು ಟಿಎಪಿಸಿಎಂಎಸ್ ಉಪಾಧ್ಯಕ್ಷ ಮುತ್ಕೂರು ಮುನಿರಾಜು ವ್ಯಕ್ತಪಡಿಸಿದ್ದಾರೆ. ಶಾಸಕ ಶರತ್ ಬಚ್ಚೇಗೌಡರ ಅನುಮತಿ ಪಡೆದು ಆಚರಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಟಿಎಪಿಸಿಎಂಎಸ್ ಉಪಾಧ್ಯಕ್ಷ ಮುತ್ಕೂರು ಮುನಿರಾಜು, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಡಿ.ಸಿ.ಲಕ್ಷ್ಮಿ, ಗ್ರಾಪಂ ಮಾಜಿ ಅಧ್ಯಕ್ಷರಾದ ಮಾರೆಗೌಡ, ವಿಜಯ್ ಕುಮಾರ್, ರತ್ನ ಗೋವಿಂದರಾಜ್, ಮಾಜಿ ನಗರಸಭೆ ಸದಸ್ಯೆ ರಮಾದೇವಿ, ರಂಗನಾಥ ಪ್ರೌಢಶಾಲೆ ಅಧ್ಯಕ್ಷ ಕೇಶವರೆಡ್ಡಿ, ಮುಖಂಡರಾದ ಸಮೇತನಹಳ್ಳಿ ಸೊಣ್ಣಪ್ಪ, ಹಂದೇನಹಳ್ಳಿ ಪ್ರಕಾಶ್ ಮತ್ತಿತರರು ಹಾಜರಿದ್ದರು.
ಕೋಟ್...................
ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು.. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ಆ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಕುಟುಂಬದಷ್ಟೇ ಸಮಾಜಕ್ಕೂ ಆದ್ಯತೆ ನೀಡಬೇಕು. ಹೆಣ್ಣುಮಕ್ಕಳು ಮನಸ್ಸು ಮಾಡಿದರೆ ಸಾಧನೆ, ಗುರಿ ತಲುಪುವುದು ಕಷ್ಟಸಾಧ್ಯವಲ್ಲ.-ಪ್ರತಿಭಾ ಶರತ್ಬಚ್ಚೇಗೌಡ, ಸಮಸ್ತ ಫೌಂಡೇಷನ್ ಸಂಸ್ಥಾಪಕಿ
ಫೋಟೋ : 13 ಹೆಚ್ಎಸ್ಕೆ 2 ಮತ್ತು 32: ಹೊಸಕೋಟೆ ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ದೇವನಗೊಂದಿ ಗ್ರಾಮ ಪಂಚಾಯತಿಯ ಡಿ.ಹೊಸಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಸಮಸ್ತ ಫೌಂಡೇಷನ್ ಸಂಸ್ಥಾಪಕಿ ಪ್ರತಿಭಾ ಶರತ್ ಉದ್ಘಾಟಿಸಿದರು.
3: ಹೊಸಕೋಟೆ ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ದೇವನಗೊಂದಿ ಗ್ರಾಪಂ ಡಿ.ಹೊಸಹಳ್ಳಿ ಗ್ರಾಮದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಮಸ್ತ ಫೌಂಡೇಷನ್ ಸಂಸ್ಥಾಪಕಿ ಪ್ರತಿಭಾ ಶರತ್ ಮಹಿಳೆಯರನ್ನು ಗೌರವಿಸಿ ಸನ್ಮಾನಿಸಿದರು.