ಕನ್ನಡಪ್ರಭ ವಾರ್ತೆ ಸಾಗರ

ಸಿಗಂದೂರು ಸೇತುವೆ ನಮ್ಮನ್ನು ಕರಿನೀರಿನ ಶಿಕ್ಷೆಯಿಂದ ಮುಕ್ತಗೊಳಿಸಿ ಹಿನ್ನೀರಿನ ಜನರ ಬದುಕನ್ನು ಪರಿವರ್ತನೆ ಮಾಡಿದೆ ಎಂದು ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ಹೋರಾಟಗಾರ, ಕೇಂದ್ರ ಸಾಂಬಾರು ಮಂಡಳಿ ಸದಸ್ಯ ಪ್ರಸನ್ನ ಕೆರೆಕೈ ಹೇಳಿದರು.

ಸಿಗಂದೂರು ಸೇತುವೆ ಲೋಕಾರ್ಪಣೆಗೊಂಡು ಒಂದು ವರ್ಷವಾದ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಆಯೋಜಿಸಿದ್ದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿ, ಸಿಗಂದೂರು ಸೇತುವೆ ನಿರ್ಮಾಣದ ಹಿಂದೆ ಹಿನ್ನೀರಿನ ಜನರಿಗೆ ಸಂಪರ್ಕ ಸೌಲಭ್ಯ ಕೊಡಿಸಬೇಕು ಎನ್ನುವ ಬಿಜೆಪಿ ಹಿರಿಯರು, ಸಂಘ ಪರಿವಾರದವರ ಇಚ್ಛಾಸಕ್ತಿ ಸ್ಪಷ್ಟವಾಗುತ್ತಿದೆ ಎಂದು ಹೇಳಿದರು.

ತುಮರಿ ಸೇತುವೆ ನಿರ್ಮಾಣ ಸಾಧ್ಯವೇ ಇಲ್ಲ ಎನ್ನುವ ಕಾಲದಲ್ಲಿ ಅದನ್ನು ಸಾಧ್ಯವಾಗಿಸಿ ತೋರಿಸಿದ್ದು ಕೇಂದ್ರದ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ. ಅಂದು ಸಂಸದರಾಗಿದ್ದ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ನಿತಿನ್ ಗಡ್ಕರಿ, ಸಂಸದ ಬಿ.ವೈ.ರಾಘವೇಂದ್ರ, ಪ್ರಹ್ಲಾದ್ ಜೋಷಿ ಹಾಗೂ ಪರಿವಾರದ ಕೆಲವು ಪ್ರಮುಖರು ಕಾಲಕಾಲಕ್ಕೆ ತುಮರಿ ಸೇತುವೆ ನಿರ್ಮಾಣದ ಹಿಂದೆ ಬೆನ್ನೆಲುಬಾಗಿ ನಿಂತಿದ್ದನ್ನು ನಾವು ಸ್ಮರಿಸಿಕೊಳ್ಳಬೇಕು. ಸೇತುವೆ ಲೋಕಾರ್ಪಣೆಗೊಂಡು ಒಂದು ವರ್ಷ ಕಳೆದಿದ್ದು ನಾವೆಲ್ಲಾ ದಿನದ ೨೪ ಗಂಟೆಯೂ ಸೇತುವೆಯ ಸೇವೆ ಪಡೆಯುತ್ತಿದ್ದೇವೆ. ಸಾವು ನೋವಿಗೂ ತಕ್ಷಣ ಸ್ಪಂದಿಸಲು ಸಾಧ್ಯವಾಗಿದೆ. ಸೇತುವೆ ನಿರ್ಮಾಣದಿಂದ ನಮಗೆ ತೃಪ್ತಿಯಾಗಿದೆ ಎಂದು ಹೇಳಿದರು.

ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿ, ತುಮರಿ ಸೇತುವೆ ನಿರ್ಮಾಣವಾಗಿದೆ ಎಂದರೆ ಅದರ ಹಿಂದೆ ಇರುವ ಯಡಿಯೂರಪ್ಪನವರನ್ನು ನಾವು ಸ್ಮರಿಸಿಕೊಳ್ಳಬೇಕು. ಯಡಿಯೂರಪ್ಪನವರು ಉಪಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಜೆಟ್‌ನಲ್ಲಿ ಸೇತುವೆ ನಿರ್ಮಾಣದ ಘೋಷಣೆ ಮಾಡಿದ್ದರೆ, ಸಂಸದರಾಗಿದ್ದಾಗ ಅದನ್ನು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಮೇಲೆ ಒತ್ತಡ ಹೇರಿ ಅನುಷ್ಠಾನಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರು. ಅಂದು ಶಂಕುಸ್ಥಾಪನೆ ಆಗಿದ್ದಾಗ ಅನೇಕ ಜನರು ಸೇತುವೆ ಶಂಕುಸ್ಥಾಪನೆ ಬಗ್ಗೆ ಅಸಡ್ಡೆಯಿಂದ ಮಾತನಾಡಿದ್ದರು. ನಂತರ ಸಂಸದ ಬಿ.ವೈ.ರಾಘವೇಂದ್ರ ಅವರು ಸೇತುವೆ ಕಾಮಗಾರಿ ಮುಗಿಸಿ ಲೋಕಾರ್ಪಣೆಗೊಳ್ಳುವ ತನಕ ಅರ್ಹನಿಶಿ ಕೆಲಸ ಮಾಡಿದ್ದಾರೆ. ಸೇತುವೆ ಲೋಕಾರ್ಪಣೆಗೊಂಡು ಒಂದು ವರ್ಷವಾಗಿದ್ದು ಇಂತಹ ದಿನವನ್ನು ಹಿನ್ನೀರಿನ ಜನರು ಸಂಭ್ರಮಿಸುತ್ತಿರುವುದು ಅರ್ಥಪೂರ್ಣವಾದದ್ದು ಎಂದು ಹೇಳಿದರು.


ಇದೇ ಸಂದರ್ಭದಲ್ಲಿ ಅ.ನಾ.ಚಂದ್ರಶೇಖರ್ ಹಾಗೂ ಪ್ರದೀಪ್ ಅವರು ‘ಸೇತುವೆ ಬಂತು ಸಂತಸ ತಂತು’ ಗೀತೆಯನ್ನು ಹಾಡಿದರು. ಕರೂರು ಹೋಬಳಿಯ ಜನತೆ ಈ ಸಂದರ್ಭದಲ್ಲಿ ಹರ್ಷೋದ್ಘಾರದ ಮೂಲಕ ಸಂಭ್ರಮಿಸಿದರು.

ದೇವೇಂದ್ರಪ್ಪ, ಮಂಜಯ್ಯ ಜೈನ್, ರವೀಂದ್ರ ಬಿ.ಟಿ., ಶ್ರೀನಿವಾಸ್ ಗದ್ದೆಮನೆ, ಪರಶುರಾಮ್, ಪ್ರಶಾಂತ ಕೆ.ಎಸ್., ಅಶೋಕ್ ಸೂರೆಮನೆ, ಎಚ್.ಎಲ್.ಮಹಾಬಲೇಶ್ವರ, ಸಾವಿತ್ರಿ ಶಿವರಾಜ್, ಸಾವಿತ್ರಿ ರತ್ನಾಕರ್ ಇತರರು ಹಾಜರಿದ್ದರು.