ರಂಗಭೂಮಿಯಿಂದ ಮಕ್ಕಳಿಗೆ ಕಷ್ಟ ಎದುರಿಸುವ ಶಕ್ತಿ ಸಿಗುತ್ತದೆ: ಜ್ಯೋತಿ ಸಂತೋಷ್

| Published : Aug 03 2024, 12:31 AM IST

ರಂಗಭೂಮಿಯಿಂದ ಮಕ್ಕಳಿಗೆ ಕಷ್ಟ ಎದುರಿಸುವ ಶಕ್ತಿ ಸಿಗುತ್ತದೆ: ಜ್ಯೋತಿ ಸಂತೋಷ್
Share this Article
  • FB
  • TW
  • Linkdin
  • Email

ಸಾರಾಂಶ

ಸರಳೇಬೆಟ್ಟುವಿನ ಶಿವಪ್ರೇರಣಾ ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ರಂಗ ಚಿನ್ನಾರಿ ಕಾಸರಗೋಡು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಕಾಸರಗೋಡು ಚಿನ್ನ ನಿರ್ದೇಶನದ ರಂಗಸಂಸ್ಕೃತಿ ಶಿಬಿರ ನಡೆಯಿತು.

ಕನ್ನಡಪ್ರಭ ವಾರ್ತೆ ಮಣಿಪಾಲ

ಮಕ್ಕಳಲ್ಲಿ ರಂಗಭೂಮಿಯ ಬಗ್ಗೆ ಆಸಕ್ತಿ ಮೂಡಿಸುವುದರಿಂದ ರಂಗ ಸಾಕ್ಷಾತ್ಕಾರವಾಗುತ್ತದೆ ಮಾತ್ರವಲ್ಲ ಬದುಕಿನಲ್ಲಿ ಬರುವ ಕಷ್ಟಗಳನ್ನು ಎದುರಿಸುವ ಎದೆಗಾರಿಕೆಯೂ ಬರುತ್ತದೆ. ರಂಗ ನಿರ್ದೇಶಕರಾದ ಕಾಸರಗೋಡು ಚಿನ್ನ ಅವರು ರಂಗ ಸಂಸ್ಕೃತಿ ಮುಖಾಂತರ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಬೆಳಕಿಗೆ ತರುತ್ತಿದ್ದಾರೆ. ರಂಗ ಸಂಸ್ಕೃತಿಯಂತಹ ಶಿಬಿರಗಳು ಜಿಲ್ಲೆಯಾದ್ಯಂತ ಏರ್ಪಡಿಸಬೇಕು ಎಂದು ಇಲ್ಲಿನ ಮಾಧವಕೃಪಾ ಸ್ಕೂಲ್ ಉಪಪ್ರಾಂಶುಪಾಲೆ ಜ್ಯೋತಿ ಸಂತೋಷ್ ಹೇಳಿದರು.

ಅವರು ಇಲ್ಲಿನ ಸರಳೇಬೆಟ್ಟುವಿನ ಶಿವಪ್ರೇರಣಾ ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ನಡೆದ ರಂಗ ಚಿನ್ನಾರಿ ಕಾಸರಗೋಡು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಏರ್ಪಡಿಸಲಾದ ಕಾಸರಗೋಡು ಚಿನ್ನ ನಿರ್ದೇಶನದ ರಂಗಸಂಸ್ಕೃತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಈ ರಂಗಸಂಸ್ಕೃತಿ ಶಿಬಿರದ ನಿರ್ದೇಶಕರಾದ ಕಾಸರಗೋಡು ಚಿನ್ನ ಅವರು ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು ನಾಲ್ಕು ಸಾವಿರ ಮಕ್ಕಳಿಗೆ ರಂಗಸಂಸ್ಕೃತಿ ಶಿಬಿರವನ್ನು ಏರ್ಪಡಿಸಿ ರಂಗಭೂಮಿಯ ಬಗ್ಗೆ ಒಲವನ್ನು ಮೂಡಿಸುವ ಕೆಲಸವನ್ನು ಮಾಡಿದ್ದೇವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಿವಪ್ರೇರಣಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಹೇಶ್ ಠಾಕೂರ್, ಗ್ರಾಮೀಣ ಪ್ರದೇಶದ ಮಕ್ಕಳಿಗೆ ತಬಲ, ಹಾರ್ಮೋನಿಯಂ, ಶಾಸ್ತ್ರೀಯ ಸಂಗೀತ, ಡ್ರಾಯಿಂಗ್, ತರಗತಿಗಳನ್ನು ಸುಮಾರು ಎರಡು ವರ್ಷಗಳಿಂದ ಉಚಿತವಾಗಿ ಏರ್ಪಡಿಸಿ ನಮ್ಮ ಭಾರತೀಯ ಸಂಸ್ಕೃತಿಯನ್ನು ಪ್ರೀತಿಸುವ ಉಳಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಇದೀಗ ಈ ಸಾಲಿಗೆ ರಂಗಸಂಸ್ಕೃತಿ ಕೂಡ ಸೇರಿಸಿದ್ದೇವೆ. ಮುಂದಿನ ದಿನಗಳಲ್ಲಿ ಉಡುಪಿ ಪರಿಸರದ ಶಾಲಾ ಕಾಲೇಜುಗಳಲ್ಲಿ ಶಿವಪ್ರೇರಣ ಚಾರಿಟೇಬಲ್ ಟ್ರಸ್ಟ್ ಈ ಕಾರ್ಯ ಮಾಡಲಿದೆ ಎಂದು ಹೇಳಿದರು.

ಪರ್ಕಳ ಪ್ರೌಢಶಾಲೆಯ ಸಂಚಾಲಕರಾದ ದಿನೇಶ್ ಹೆಗ್ಡೆ, ಸ್ಥಳೀಯರಾದ‌ ಶಿಲ್ಪಾ ಸಾಮಂತ್, ಟ್ರಸ್ಟ್ ನ ಟ್ರಸ್ಟಿ ರಮಾನಂದ್ ಸಾಮಂತ್, ಕಾರ್ಯದರ್ಶಿ ಅಶ್ವಿನಿ ಮಹೇಶ್ ಠಾಕೂರ್‌, ನಿವೃತ್ತ ಪತ್ರಕರ್ತ ನಿತ್ಯಾನಂದ ಪಡ್ರೆ, ರಂಗಭೂಮಿ ಕಾರ್ಯಕರ್ತ ಶಶಿ ಹಾಗೂ ಇತರರು ಉಪಸ್ಥಿತರಿದ್ದರು.

ಈ ರಂಗಸಂಸ್ಕೃತಿ ಕಾರ್ಯಾಗಾರದಲ್ಲಿ ಮೂಕಾಭಿನಯ, ಧ್ವನಿ, ಆಶುರಚನೆ, ನಡೆ, ಪ್ರಸಾದನ ಇತ್ಯಾದಿ ಕಲೆಗಳ ಅಭ್ಯಾಸವನ್ನು ನಡೆಸಿಕೊಡಲಾಯಿತು.